ಜಾಲತಾಣದಲ್ಲಿ ಅವಹೇಳನ, ಶಾಸಕ ಅಶೋಕ ರೈಗೆ ನಿಂದನೆ ; ಪುತ್ತೂರಿನಲ್ಲಿ ಹಕೀಂ ಕೂರ್ನಡ್ಕ ವಿರುದ್ಧ ಘೆರಾವ್, ಕಾಂಗ್ರೆಸಿನದ್ದೇ ಗುಂಪಿನಿಂದ ಹಲ್ಲೆ ಯತ್ನ, ಪೊಲೀಸರ ರಕ್ಷಣೆಯಲ್ಲಿ ಪಾರು 

01-09-26 11:17 pm       HK News Desk   ಕರಾವಳಿ

 ಕಾಂಗ್ರೆಸಿನಲ್ಲಿ ಸಿಟ್ಟುಗೊಂಡು ಸಾಮಾಜಿಕ ಕಾರ್ಯಕರ್ತನಾಗಿ ಬದಲಾಗಿರುವ ಹಕೀಂ ಕೂರ್ನಡ್ಕ ತಮ್ಮ ಬಗ್ಗೆ ಜಾಲತಾಣದಲ್ಲಿ ಕೇವಲವಾಗಿ ಟೀಕಿಸಿದ್ದಾರೆ, ಶಾಸಕ ಅಶೋಕ ರೈ ಪರ ಇರುವ ಮುಸ್ಲಿಮರ ಬಗ್ಗೆ ಅವಹೇಳನ ಮಾಡಿದ್ದಾರೆಂದು ಕಾಂಗ್ರೆಸಿಗರದ್ದೇ ಒಂದು ಗುಂಪು ಹಕೀಂ ಮೇಲೆ ಹಲ್ಲೆಗೆ ಯತ್ನಿಸಿ ಘೆರಾವ್ ಹಾಕಿದ ಘಟನೆ ಪುತ್ತೂರಿನಲ್ಲಿ ನಡೆದಿದ್ದು ಬಳಿಕ ಪೊಲೀಸರೇ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 

ಪುತ್ತೂರು, ಸೆ.1 ಕಾಂಗ್ರೆಸಿನಲ್ಲಿ ಸಿಟ್ಟುಗೊಂಡು ಸಾಮಾಜಿಕ ಕಾರ್ಯಕರ್ತನಾಗಿ ಬದಲಾಗಿರುವ ಹಕೀಂ ಕೂರ್ನಡ್ಕ ತಮ್ಮ ಬಗ್ಗೆ ಜಾಲತಾಣದಲ್ಲಿ ಕೇವಲವಾಗಿ ಟೀಕಿಸಿದ್ದಾರೆ, ಶಾಸಕ ಅಶೋಕ ರೈ ಪರ ಇರುವ ಮುಸ್ಲಿಮರ ಬಗ್ಗೆ ಅವಹೇಳನ ಮಾಡಿದ್ದಾರೆಂದು ಕಾಂಗ್ರೆಸಿಗರದ್ದೇ ಒಂದು ಗುಂಪು ಹಕೀಂ ಮೇಲೆ ಹಲ್ಲೆಗೆ ಯತ್ನಿಸಿ ಘೆರಾವ್ ಹಾಕಿದ ಘಟನೆ ಪುತ್ತೂರಿನಲ್ಲಿ ನಡೆದಿದ್ದು ಬಳಿಕ ಪೊಲೀಸರೇ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. 

ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸುತ್ತಾರೆಂದು ತಿಳಿದು ಹಕೀಂ ಕೂರ್ನಡ್ಕ ವಿರುದ್ಧ ಶಾಸಕ ಅಶೋಕ್ ರೈ ಬೆಂಬಲಿಗರು ಎನ್ನಲಾದ ಗುಂಪು ಅಲ್ಲಿ ಸೇರಿದ್ದು ಪೊಲೀಸರ ಎದುರಲ್ಲೇ ಅವಾಚ್ಯ ಪದಗಳಿಂದ ನಿಂದಿಸಿ ತೀವ್ರ ಜಟಾಪಟಿ ನಡೆಸಿದ್ದಾರೆ. 50ಕ್ಕೂ ಹೆಚ್ಚು ಮಂದಿ ಆಗಮಿಸಿದ್ದು ಹಕೀಂ‌ ಕೂರ್ನಡ್ಕ ವಿರುದ್ಧ ಘೇರಾವ್ ಹಾಕಿದ್ದಾರೆ. ಮುಸ್ಲಿಂ ಮಹಿಳೆಯರೂ ಈ ಗುಂಪಿನಲ್ಲಿ ಬಂದಿದ್ದು ವಿಶೇಷ. 

ಹಕೀಂ ಕೂರ್ನಡ್ಕ ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು ಇದಕ್ಕಾಗಿ ಅಲ್ಲಿಗೆ ಬಂದಿದ್ದರು.‌ ಆದರೆ ಎರಡು ದಿನಗಳ ಹಿಂದೆ ಶಾಸಕ ಅಶೋಕ್ ರೈ ವಿರುದ್ಧ ಈತ ಆಡಿಯೋ ಹರಿಬಿಟ್ಟಿದ್ದು ಅದರಲ್ಲಿ ಶಾಸಕರ ವೈಫಲ್ಯವನ್ನ ಹೇಳಿದ್ದಲ್ಲದೆ, ಅಭಿಮಾನಿಗಳ ಬಗ್ಗೆ ಅವಹೇಳನ ಮಾಡಿದ್ದರು. ಶಾಸಕ ಅಶೋಕ ರೈ ತಮ್ಮ ಶಾಸಕರ ಕಚೇರಿಯಲ್ಲಿ ಪ್ರತಿ ಸೋಮವಾರ ಉಚಿತ ಊಟ ಏರ್ಪಡಿಸಿದ್ದು ನಿನ್ನೆ ಊಟಕ್ಕೆ ಬಂದಿದ್ದ ಮಹಿಳೆಯರಿಗೂ ವಾಟ್ಸಪ್ ಗ್ರೂಪಿನಲ್ಲಿ ನಿಂದನೆ ಮಾಡಿದ್ದರು ಎನ್ನಲಾಗಿದೆ. ‌ಇದರಿಂದ ಸಿಟ್ಟಾಗಿದ್ದ ಅಶೋಕ್ ಬೆಂಬಲಿಗರು ಪ್ರೆಸ್ ಕ್ಲಬ್ ಹೊರಗಡೆ ಗಲಾಟೆ ಮಾಡಿದ್ದಾರೆ.‌

ಬಳಿಕ ಶಾಸಕ ಅಶೋಕ್ ರೈಯವರೂ ಸ್ಥಳಕ್ಕೆ ಬಂದಿದ್ದು ಪೊಲೀಸರು ಬಂದು ಹಕೀಂ ಅವರನ್ನು ಸ್ಥಳದಿಂದ ಕರೆದೊಯ್ದಿದ್ದಾರೆ. ಈ ವೇಳೆ, ಕೆಲವರು ಹಲ್ಲೆಗೂ ಮುಂದಾಗಿದ್ದು ಪೊಲೀಸರು ಅವರನ್ನು ದೂರ ತಳ್ಳಿ ಹಕೀಂ ಅವರನ್ನು ಜೀಪಿನಲ್ಲಿ ಕೂರಿಸಿ ಅಲ್ಲಿಂದ ಪಾರು ಮಾಡಿದ್ದಾರೆ. ಬಳಿಕ ಪೊಲೀಸ್ ಭದ್ರತೆ ಮೂಲಕ ಮನೆಗೆ ತಲುಪಿಸಿದ್ದಾರೆ. ಅಶೋಕ್ ರೈ ಬೆಂಬಲಿಗರನ್ನ ಪೊಲೀಸರು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದೇ ವೇಳೆ,ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅಶೋಕ ರೈ, ತನಗೂ ಆ ವ್ಯಕ್ತಿಗೂ ಯಾವುದೇ ದ್ವೇಷ ಇಲ್ಲ. ನನ್ನ ಬಗ್ಗೆಯೂ ನಿಂದನೆ, ಅವಹೇಳನ ಮಾಡಿದ್ದಾರೆ. ಆದರೆ ನಾವು ರಾಜಕಾರಣಿಗಳು, ಟೀಕೆಗಳನ್ನೂ ಕೇಳುತ್ತೇವೆ. ಸುಮ್ಮನಿರುತ್ತೇವೆ. ಹಾಗಂತ ಜನಸಾಮಾನ್ಯರು ಹಾಗೆಯೇ ಬಿಡುತ್ತಾರೆಯೇ. ಅವರ ಬಗ್ಗೆ ಅವಹೇಳನ, ನಿಂದನೆ ಮಾಡಿದ್ದಕ್ಕೆ ಪ್ರಶ್ನಿಸಲು ಬಂದಿದ್ದಾರೆ. ನಾನು ಗಲಾಟೆ ಬೇಡ ಎಂದು ಹೇಳಲು ಬಂದಿದ್ದೇನೆ. ಇಲ್ಲಿ ಸೇರಿದವರೆಲ್ಲ ನಮ್ಮದೇ ಜನರು. ಇಲ್ಲಿ ಮುಸ್ಲಿಂ ಮಹಿಳೆಯರಿದ್ದು ಅವರೂ ಹಕೀಂ ವಿರುದ್ಧ ಇಲ್ಲಿ ಬಂದಿದ್ದಾರೆ. ಪೊಲೀಸರು ಆತನಿಗೆ ಬುದ್ಧಿ ಕಲಿಸಬೇಕು. ಬೇರೇನೂ ಬೇಕಾಗಿಲ್ಲ ಎಂದು ಹೇಳಿದರು.