26 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗ ! ಧರ್ಮಸ್ಥಳದಲ್ಲೊಂದು ವಿಲಕ್ಷಣ ಪುನರ್ಮಿಲನ, ಸರ್ಕಸ್ ತಂಡದೊಂದಿಗೆ ಲೀನವಾಗಿದ್ದ ಸತೀಶ್ ‘ಸಲೀಂ ಅನ್ಸಾರಿ' ಆಗಿ ಬದಲಾಗಿದ್ದ !

11-06-26 04:21 pm       HK News Staffer   ಕರಾವಳಿ

ಕೆಲವೊಮ್ಮೆ ಸಿನಿಮಾ ಕಥೆಗಳನ್ನೂ ಮೀರಿಸುವ ನೈಜ ಘಟನೆಗಳು ಬದುಕಿನಲ್ಲಿ ನಡೆಯುತ್ತವೆ. ಅಂತಹ ಅಪರೂಪದ ಮತ್ತು ಭಾವನಾತ್ಮಕ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ಸತೀಶ್ ಎಂಬಾತ, ಇದೀಗ ‘ಸಲೀಂ ಅಬ್ದುಲ್ ಅನ್ಸಾರಿ’ ಆಗಿ ತನ್ನ ತಾಯಿ ಮಡಿಲು ಸೇರಿದ್ದಾನೆ.

ಮಂಗಳೂರು, ಜೂನ್ 11 : ಕೆಲವೊಮ್ಮೆ ಸಿನಿಮಾ ಕಥೆಗಳನ್ನೂ ಮೀರಿಸುವ ನೈಜ ಘಟನೆಗಳು ಬದುಕಿನಲ್ಲಿ ನಡೆಯುತ್ತವೆ. ಅಂತಹ ಅಪರೂಪದ ಮತ್ತು ಭಾವನಾತ್ಮಕ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಧರ್ಮಸ್ಥಳದಲ್ಲಿ ನಡೆದಿದೆ. ಬರೋಬ್ಬರಿ 26 ವರ್ಷಗಳ ಹಿಂದೆ 12 ವರ್ಷದ ಬಾಲಕನಾಗಿದ್ದಾಗ ಮನೆ ಬಿಟ್ಟು ನಾಪತ್ತೆಯಾಗಿದ್ದ ಸತೀಶ್ ಎಂಬಾತ, ಇದೀಗ ‘ಸಲೀಂ ಅಬ್ದುಲ್ ಅನ್ಸಾರಿ’ ಆಗಿ ತನ್ನ ತಾಯಿ ಮಡಿಲು ಸೇರಿದ್ದಾನೆ.

ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಅಶೋಕನಗರ ನಿವಾಸಿಯಾಗಿದ್ದ ಸತೀಶ್, 2000ನೇ ಇಸವಿಯಲ್ಲಿ ಊರಿಗೆ ಬಂದಿದ್ದ ಸರ್ಕಸ್ ತಂಡದ ಆಕರ್ಷಣೆಗೆ ಒಳಗಾಗಿ ಮನೆ ಬಿಟ್ಟು ಹೋಗಿದ್ದ. ಬಳಿಕ ಸರ್ಕಸ್ ತಂಡದೊಂದಿಗೆ ದೇಶದ ವಿವಿಧ ಭಾಗಗಳಲ್ಲಿ ಸಂಚರಿಸಿದ ಆತ, ಅಂತಿಮವಾಗಿ ಮಹಾರಾಷ್ಟ್ರದಲ್ಲಿ ನೆಲೆಸಿದ್ದ. ವರ್ಷಗಳು ಉರುಳಿದಂತೆ ಆತ ತನ್ನ ಊರು, ಮನೆ, ಭಾಷೆ, ಹೆತ್ತವರು ಎಲ್ಲವನ್ನೂ ಮರೆತುಬಿಟ್ಟಿದ್ದ.

ಮಹಾರಾಷ್ಟ್ರದಲ್ಲೇ ಜೀವನ ಕಟ್ಟಿಕೊಂಡಿದ್ದ ಸತೀಶ್, ಜೊತೆಗಿದ್ದವರ ಸಹವಾಸದಿಂದಾಗಿ ಇಸ್ಲಾಮಿಗೆ ಮತಾಂತರಗೊಂಡು ‘ಸಲೀಂ ಅಬ್ದುಲ್ ಅನ್ಸಾರಿ’ ಎಂಬ ಹೆಸರನ್ನು ಪಡೆದಿದ್ದ. ಅಲ್ಲದೆ ತಾಲೀಮಾ ಎಂಬ ಮಹಿಳೆಯನ್ನು ವಿವಾಹವಾಗಿ ಖುಷಿ ಮತ್ತು ಅಝಂ ಎಂಬ ಇಬ್ಬರು ಮಕ್ಕಳ ತಂದೆಯೂ ಆಗಿದ್ದಾನೆ. ದೀರ್ಘ ಕಾಲ ಹೊರ ರಾಜ್ಯದಲ್ಲೇ ನೆಲೆಸಿದ್ದರಿಂದ ತನ್ನ ಮಾತೃಭಾಷೆ ತುಳು ಹಾಗೂ ಕನ್ನಡವನ್ನು ಮರೆತುಬಿಟ್ಟಿದ್ದು, ಈಗ ಕೇವಲ ಹಿಂದಿಯಲ್ಲಿ ಮಾತ್ರ ಮಾತನಾಡುತ್ತಾನೆ.

ಆದರೆ ವಿಧಿಯಾಟ ಬೇರೆಯೇ ಇತ್ತು. ಜೂನ್ 9ರಂದು ಸ್ನೇಹಿತರೊಂದಿಗೆ ಪ್ರವಾಸಕ್ಕಾಗಿ ಧರ್ಮಸ್ಥಳಕ್ಕೆ ಬಂದಿದ್ದ ಸಲೀಂ, ಹಿಂದೆ ಸರ್ಕಸ್ ನಡೆದಿದ್ದ ಸ್ಥಳಕ್ಕೆ ಭೇಟಿ ನೀಡಿದಾಗ ಹಳೆಯ ನೆನಪುಗಳು ಏಕಾಏಕಿ ಮರುಕಳಿಸಿವೆ. “ಇದೇ ನನ್ನ ಊರು” ಎಂಬ ಅರಿವು ಮೂಡಿದ ಬಳಿಕ ತನ್ನ ತಮ್ಮಂದಿರ ಹೆಸರುಗಳನ್ನು ನೆನಪಿಸಿಕೊಂಡು ಸ್ಥಳೀಯರ ಬಳಿ ವಿಚಾರಿಸಿದ್ದಾನೆ. ಕೊನೆಗೆ ತನ್ನ ಹಳೆಯ ಮನೆಯ ವಿಳಾಸ ಪತ್ತೆಹಚ್ಚಿ ಅಲ್ಲಿಗೆ ತಲುಪಿದ್ದಾನೆ. 

ಮನೆಯ ಬಾಗಿಲಿನ ಮುಂದೆ ನಿಂತಿದ್ದ ವ್ಯಕ್ತಿ ತನ್ನ 26 ವರ್ಷಗಳ ಹಿಂದೆ ಕಣ್ಮರೆಯಾಗಿದ್ದ ಮಗನೆಂದು ಅರಿತ ತಾಯಿ ಕಣ್ಣಲ್ಲಿ ಆನಂದಭಾಷ್ಪ ಹರಿದಿದೆ. ಮನೆಯವರು ಕೂಡ ಭಾವೋದ್ವೇಗದಿಂದ ಸತೀಶ್‌ನನ್ನು ಬರಮಾಡಿಕೊಂಡಿದ್ದಾರೆ. ಭಾಷೆ ಇಬ್ಬರ ನಡುವೆ ಅಡ್ಡಿಯಾಗಿದ್ದರೂ, ತಾಯಿ-ಮಗನ ಪ್ರೀತಿಯ ಮುಂದೆ ಅದು ದೊಡ್ಡ ವಿಷಯವಾಗಿರಲಿಲ್ಲ. ಹಿಂದಿ ಬಲ್ಲ ಮಗ, ಹಿಂದಿ ಅರಿಯದ ತಾಯಿ ಆದರೂ ಒಬ್ಬರನ್ನೊಬ್ಬರು ಅಪ್ಪಿಕೊಂಡು ಭಾವನೆಗಳನ್ನು ಹಂಚಿಕೊಂಡ ದೃಶ್ಯ ಎಲ್ಲರ ಕಣ್ಣಲ್ಲೂ ನೀರು ತರಿಸಿದೆ.

ಮಗನಿಗಾಗಿ ವರ್ಷಗಳಿಂದ ಧರ್ಮಸ್ಥಳ ಮಂಜುನಾಥ, ಕಟೀಲು ದುರ್ಗಾಪರಮೇಶ್ವರಿ ಮತ್ತು ಪಣೋಲಿಬೈಲ್ ದೈವಸ್ಥಾನಗಳಿಗೆ ಹರಕೆ ಹೊತ್ತಿದ್ದ ತಾಯಿಯ ಪ್ರಾರ್ಥನೆ ಕೊನೆಗೂ ಈಡೇರಿದೆ. “ನಾನು ಸಾಯುವ ಮುನ್ನ ನನ್ನ ಹಿರಿಯ ಮಗನನ್ನು ಒಮ್ಮೆ ನೋಡಬೇಕು” ಎಂದು ಇತ್ತೀಚೆಗೆ ಉಳಿದ ಮಕ್ಕಳ ಮುಂದೆ ಕಣ್ಣೀರಿಟ್ಟಿದ್ದ ತಾಯಿಯ ಹಂಬಲಕ್ಕೆ ಕೊನೆಗೂ ಫಲ ಸಿಕ್ಕಿದೆ. ಕುಟುಂಬದೊಂದಿಗೆ ಕೆಲ ದಿನಗಳ ಕಾಲ ಕಳೆದ ಸತೀಶ್, ಮತ್ತೆ ಮಹಾರಾಷ್ಟ್ರಕ್ಕೆ ಮರಳಿದ್ದಾನೆ. ಆದರೆ 26 ವರ್ಷಗಳ ಬಳಿಕ ನಡೆದ ಈ ಪುನರ್ಮಿಲನ ಧರ್ಮಸ್ಥಳದ ಜನರ ಮನಸ್ಸಿನಲ್ಲಿ ಭಾವನಾತ್ಮಕ ಕಥೆಯಾಗಿ ಉಳಿದಿದೆ.