ಜೂನ್ 12ರಂದು ಮೊದಲ ಬಾರಿಗೆ ಕೊಲ್ಲೂರು ಮೂಕಾಂಬಿಕೆ ಸನ್ನಿಧಿಗೆ ತಮಿಳುನಾಡು ಸಿಎಂ ವಿಜಯ್ ಭೇಟಿ ; ರಾಜಕೀಯ ಮಧ್ಯೆ ಭಕ್ತಿಯ ಪಯಣ

10-06-26 04:19 pm       HK News Staffer   ಕರಾವಳಿ

ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಜೂನ್ 12ರಂದು ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ. ರಾಜಕೀಯ ಬದುಕಿನ ಮಹತ್ವದ ಹಂತದಲ್ಲಿರುವ ವಿಜಯ್ ಅವರ ಈ ಭೇಟಿ ಭಕ್ತರು ಹಾಗೂ ರಾಜಕೀಯ ವಲಯದ ಗಮನ ಸೆಳೆದಿದೆ.

ಉಡುಪಿ, ಜೂ.10: ತಮಿಳುನಾಡು ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಜೂನ್ 12ರಂದು ಮೊದಲ ಬಾರಿಗೆ ಉಡುಪಿ ಜಿಲ್ಲೆಯ ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆಯಲಿದ್ದಾರೆ. ರಾಜಕೀಯ ಬದುಕಿನ ಮಹತ್ವದ ಹಂತದಲ್ಲಿರುವ ವಿಜಯ್ ಅವರ ಈ ಭೇಟಿ ಭಕ್ತರು ಹಾಗೂ ರಾಜಕೀಯ ವಲಯದ ಗಮನ ಸೆಳೆದಿದೆ.

ಮಾಹಿತಿಯ ಪ್ರಕಾರ, ಶುಕ್ರವಾರ ಮಧ್ಯಾಹ್ನ 3 ಗಂಟೆಗೆ ಕೊಲ್ಲೂರಿಗೆ ಆಗಮಿಸಲಿರುವ ಮುಖ್ಯಮಂತ್ರಿ ವಿಜಯ್, ಮೂಕಾಂಬಿಕೆ ದೇವಿಯ ದರ್ಶನ ಪಡೆದು ವಿಶೇಷ ಪೂಜೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಸಂಜೆ ಮಂಗಳೂರು ವಿಮಾನ ನಿಲ್ದಾಣದಿಂದ ಚೆನ್ನೈಗೆ ಪ್ರಯಾಣ ಬೆಳೆಸಲಿದ್ದಾರೆ.

ಕೊಲ್ಲೂರು ಮೂಕಾಂಬಿಕೆ ಕ್ಷೇತ್ರವು ದಕ್ಷಿಣ ಭಾರತದ ರಾಜಕೀಯ ನಾಯಕರು, ಸಿನಿಮಾ ಗಣ್ಯರು ಹಾಗೂ ಭಕ್ತರ ಪಾಲಿಗೆ ವಿಶೇಷ ನಂಬಿಕೆಯ ಕೇಂದ್ರವಾಗಿ ಗುರುತಿಸಿಕೊಂಡಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ (ಎಂಜಿಆರ್) ಅವರು ಅಧಿಕಾರದಲ್ಲಿದ್ದಾಗ ಮೂಕಾಂಬಿಕೆ ದೇವಿಗೆ ಚಿನ್ನದ ಖಡ್ಗವನ್ನು ಕಾಣಿಕೆಯಾಗಿ ಸಮರ್ಪಿಸಿದ್ದರು. ಬಳಿಕ ಮಾಜಿ ಮುಖ್ಯಮಂತ್ರಿ ಜಯಲಲಿತಾ ಕೂಡ ರಾಜಕೀಯ ಏಳುಬೀಳುಗಳ ಸಂದರ್ಭದಲ್ಲಿ ದೇವಿಯ ಆಶೀರ್ವಾದ ಪಡೆಯಲು ಕೊಲ್ಲೂರಿಗೆ ಆಗಮಿಸಿದ್ದರು. 2004ರಲ್ಲಿ ವಿಶೇಷ ಚಂಡಿಕಾಯಾಗ ನೆರವೇರಿಸಿದ್ದ ಅವರು, ಅನ್ನಸಂತರ್ಪಣೆಗೆ ದೇಣಿಗೆಯನ್ನೂ ನೀಡಿದ್ದರು.

ಖ್ಯಾತ ಸಂಗೀತ ನಿರ್ದೇಶಕ ಇಳೆಯರಾಜ ಸೇರಿದಂತೆ ಅನೇಕ ಗಣ್ಯರು ಹಾಗೂ ಕಲಾವಿದರ ನಂಬಿಕೆಯ ಕೇಂದ್ರವಾಗಿರುವ ಮೂಕಾಂಬಿಕೆ ಸನ್ನಿಧಿಗೆ ಇದೀಗ ಮುಖ್ಯಮಂತ್ರಿ ವಿಜಯ್ ಭೇಟಿ ನೀಡುತ್ತಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.

ಉಡುಪಿ ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಲ್ಲಿರುವ ಕೊಲ್ಲೂರು ಕ್ಷೇತ್ರವು ಪರಶುರಾಮ ಕ್ಷೇತ್ರದ ಏಳು ಮುಕ್ತಿ ಕ್ಷೇತ್ರಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದಿ ಶಂಕರಾಚಾರ್ಯರು ಪ್ರತಿಷ್ಠಾಪಿಸಿದ ಈ ಶಕ್ತಿಪೀಠದಲ್ಲಿ ಮಹಾಕಾಳಿ, ಮಹಾಲಕ್ಷ್ಮಿ ಹಾಗೂ ಮಹಾಸರಸ್ವತಿ ದೇವಿಯರ ಐಕ್ಯಸ್ವರೂಪಿಣಿಯಾಗಿ ಮೂಕಾಂಬಿಕೆ ದೇವಿಯನ್ನು ಆರಾಧಿಸಲಾಗುತ್ತದೆ.

ಭಕ್ತರ ನಂಬಿಕೆಯ ಪ್ರಕಾರ, ಮೂಕಾಂಬಿಕೆ ದೇವಿಯ ದರ್ಶನದಿಂದ ಜ್ಞಾನ, ಐಶ್ವರ್ಯ ಮತ್ತು ಯಶಸ್ಸು ಲಭಿಸುತ್ತದೆ. ಇದೇ ಕಾರಣಕ್ಕೆ ದೇಶದ ವಿವಿಧ ಭಾಗಗಳಿಂದ ಲಕ್ಷಾಂತರ ಭಕ್ತರು ವರ್ಷಪೂರ್ತಿ ಈ ಕ್ಷೇತ್ರಕ್ಕೆ ಭೇಟಿ ನೀಡುತ್ತಾರೆ.

ತಮಿಳುನಾಡು ಮುಖ್ಯಮಂತ್ರಿ ವಿಜಯ್ ಅವರ ಭೇಟಿ ಹಿನ್ನೆಲೆಯಲ್ಲಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಪೊಲೀಸ್ ಇಲಾಖೆ ಅಗತ್ಯ ಸಿದ್ಧತೆಗಳನ್ನು ಕೈಗೊಂಡಿದ್ದು, ಭಕ್ತರ ಸಂಚಾರಕ್ಕೆ ಯಾವುದೇ ತೊಂದರೆಯಾಗದಂತೆ ಕ್ರಮವಹಿಸಲಾಗಿದೆ.