UT Khader, Mangalore: ಎಂಬಿಬಿಎಸ್ ಆದವರಿಗೆ ಕಲಿತ ಕೂಡಲೇ ಸರ್ಕಾರಿ ಸೇವೆಗೆ ಅವಕಾಶ ; ಕೊರತೆ ಇದ್ದ ಕಡೆಗೆ ಒಂದು ವಾರದಲ್ಲಿ ನೇಮಿಸದ್ದರೆ ಡಿಎಚ್ಓ ಅಮಾನತು, ಆರೋಗ್ಯ ಸಚಿವ ಯುಟಿ ಖಾದರ್ ವಾರ್ನಿಂಗ್

07-06-26 03:38 pm       Mangalore Correspondent   ಕರಾವಳಿ

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದರಿಂದ ಎಂಬಿಬಿಎಸ್ ಆದವರಿಗೆ ನೇರ ನೇಮಕಾತಿ ಮಾಡುತ್ತೇವೆ. ನಮಗೆ ಇಲಾಖೆಯಲ್ಲಿ 900 ವೈದ್ಯರ ಕೊರತೆಯಿದ್ದು ಪರ್ಮನೆಂಟ್ ನೇಮಕಾತಿ ಆಗಬೇಕಾಗಿದೆ.

ಮಂಗಳೂರು, ಜೂನ್ 6: ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇರುವುದರಿಂದ ಎಂಬಿಬಿಎಸ್ ಆದವರಿಗೆ ನೇರ ನೇಮಕಾತಿ ಮಾಡುತ್ತೇವೆ. ನಮಗೆ ಇಲಾಖೆಯಲ್ಲಿ 900 ವೈದ್ಯರ ಕೊರತೆಯಿದ್ದು ಪರ್ಮನೆಂಟ್ ನೇಮಕಾತಿ ಆಗಬೇಕಾಗಿದೆ. ಆದರೆ ಸದ್ಯಕ್ಕೆ ಕೊರತೆ ಇದ್ದ ಕಡೆ ನೇರ ನೇಮಕಾತಿ ಮಾಡುತ್ತಿದ್ದೇವೆ ಎಂದು ಆರೋಗ್ಯ ಸಚಿವ ಯುಟಿ ಖಾದರ್ ಹೇಳಿದ್ದಾರೆ. 

ಸಚಿವರಾಗಿ ಮೊದಲ ಬಾರಿಗೆ ತಮ್ಮ ಸ್ವಕ್ಷೇತ್ರ ಮಂಗಳೂರಿಗೆ ಭೇಟಿ ನೀಡಿದ ಸಚಿವರು, ಉಳ್ಳಾಲ ದರ್ಗಾ, ಚರ್ಚ್ ಮತ್ತು ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ತೆರಳಿ ಪ್ರಾರ್ಥನೆ ನೆರವೇರಿಸಿದರು. ಬಳಿಕ ಸುದ್ದಿಗೋಷ್ಟಿ ನಡೆಸಿ ಮಾಧ್ಯಮದ ಪ್ರಶ್ನೆಗೆ ಉತ್ತರಿಸಿದರು.‌ 

ಎಂಬಿಬಿಎಸ್ ಆದವರಿಗೆ ಗುತ್ತಿಗೆ ಆಧಾರದಲ್ಲಿ ಕೆಲಸಕ್ಕಾಗಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಇವರಿಗೆ ಒಂದು ವಾರದಲ್ಲಿ ನೇಮಕಾತಿ ಪತ್ರ ಕೊಡುವ ವ್ಯವಸ್ಥೆ ಆಗಬೇಕು. ಅರ್ಜಿ ಸಲ್ಲಿಸಿದ ಬಳಿಕ ತಿಂಗಳಾನುಗಟ್ಟಲೆ ಉಳಿಸಿಕೊಳ್ಳುವುದಲ್ಲ. ಕಲಿತ ಕೂಡಲೇ ಕೆಲಸ ದೊರಕಿಸಬೇಕು ಎನ್ನುವುದು ನಮ್ಮ ಆದ್ಯತೆ. ಜಿಲ್ಲಾಧಿಕಾರಿ ಅನುಮತಿ ಪಡೆದು ಒಂದು ವಾರದಲ್ಲಿ ಡಿಎಚ್ಓ ಅದರ ಪ್ರಕ್ರಿಯೆ ಮುಗಿಸಬೇಕು. ನೇಮಕಾತಿ ತಡವಾದ್ರೆ ಅಂತಹ ಆರೋಗ್ಯಾಧಿಕಾರಿಯನ್ನು ಅಮಾನತು ಮಾಡಲಾಗುವುದು ಎಂದು ತಿಳಿಸಿದರು. 

ಮೂರು ವರ್ಷ ಸ್ಪೀಕರ್ ಆಗಿ ಕರ್ತವ್ಯ ನಿಭಾಯಿಸಿದ್ದೇನೆ.‌ ಸದ್ಯ ಸಚಿವನಾಗಿ ಮಂಗಳೂರಿಗೆ ಬಂದಿದ್ದೇನೆ. ಎಲ್ಲರ ಆಶೀರ್ವಾದ ನಾನು ಕೇಳುತ್ತೇನೆ, ಆರೋಗ್ಯ ಖಾತೆಯನ್ನು ಉತ್ತಮವಾಗಿ ನಡೆಸ್ತೇನೆ. ನನ್ನ ಕೆಲಸ ಕಡಿಮೆ ಅಥವಾ ಜಾಸ್ತಿಯಾದ್ರೂ ಜಿಲ್ಲೆಯ ಜನ ತಲೆ ತಗ್ಗಿಸುವ ಕೆಲಸವನ್ನಂತೂ ಮಾಡಲ್ಲ ಎಂದು ಸಚಿವ ಯುಟಿ ಖಾದರ್ ಹೇಳಿದರು. 

ಬೆಂಗಳೂರಿನಲ್ಲಿ ಸರ್ಕಾರಿ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಹಿನ್ನೆಲೆ ಬಗ್ಗೆ ಹೇಳಿದ ಸಚಿವರು, ಸರ್ಕಾರಿ ಆಸ್ಪತ್ರೆಗೆ ಮಧ್ಯರಾತ್ರಿ ಹೋದರೆ ಮಾತ್ರ ಅಲ್ಲಿನ ವಾಸ್ತವ ಗೊತ್ತಾಗುತ್ತದೆ. ವೈದ್ಯರು ಹಾಗೂ ಅಲ್ಲಿನ ಸಿಬ್ಬಂದಿ ಕೆಲಸ ಮಾಡ್ತಿದಾರಾ ಅಂತ ತಿಳಿಯುತ್ತದೆ. ಬೆಂಗಳೂರಿನಲ್ಲಿ ಒಂದು ಆಸ್ಪತ್ರೆಗೆ ಹೋಗಿದ್ದೆ, ಆ ರೀತಿಯ ಭೇಟಿಯನ್ನು ಮುಂದುವರಿಸುತ್ತೇನೆ. ಸದ್ಯಕ್ಕೆ ಇಲಾಖೆಯಲ್ಲಿ ಅಧಿಕಾರಿಗಳ ಜೊತೆಗೆ ಮೊದಲ ಹಂತದ ಸಭೆ ಮಾಡಿದ್ದೇನೆ. ಕುಂದು ಕೊರತೆಗಳ ಬಗ್ಗೆ ಇನ್ನಷ್ಟೇ ತಿಳಿಯಬೇಕಾಗಿದೆ ಎಂದು ಹೇಳಿದರು. 

ದ‌.ಕ ಜಿಲ್ಲಾ ಉಸ್ತುವಾರಿ ಆಗುತ್ತೀರಾ ಎಂಬ ಪ್ರಶ್ನೆಗೆ, ಆ ಬಗ್ಗೆ ಮುಖ್ಯಮಂತ್ರಿ ತೀರ್ಮಾನ ಮಾಡ್ತಾರೆ. ಕೋಲಾರ, ಉಡುಪಿ ಹಾಗೂ ಮಂಗಳೂರಿನಲ್ಲಿ ಹಿಂದೆ ಉಸ್ತುವಾರಿ ಸಚಿವನಾಗಿದ್ದೆ. ಹಾಗಾಗಿ ಮಂಗಳೂರಿನ ಉಸ್ತುವಾರಿ ಬೇರೆಯವರಿಗೆ ಕೊಟ್ಟರೆ ಕೊಡಲಿ ಅಂದಿದ್ದೇನೆ. ನನಗೆ ಹೊಸ ಜಿಲ್ಲೆ ಕೊಟ್ಟರೆ ಅಲ್ಲಿನ ಅನುಭವ ಸಿಗುತ್ತೆ ಅನ್ನುವ ಹಂಬಲ ಇದೆ. ಮುಖ್ಯಮಂತ್ರಿಗಳು ಯಾವ ಜಿಲ್ಲೆ ಕೊಡ್ತಾರೋ ಅದನ್ನು ಸ್ವೀಕರಿಸುತ್ತೇನೆ ಎಂದರು. 

ಸರ್ಕಾರಿ ಆಸ್ಪತ್ರೆಯನ್ನು ಖಾಸಗಿಯವರಿಗೆ ಗುತ್ತಿಗೆ ವಹಿಸುವ ಕುರಿತ ಪ್ರಶ್ನೆಗೆ, ಒಂದೂವರೆ ಲಕ್ಷ ಕೊಟ್ಟರೂ ಬರಲ್ಲ ಅಂದ್ರೆ ಅವರನ್ನು ಕುತ್ತಿಗೆ ಹಿಡಿದು ಎಳೆತರೋಕೆ ಆಗಲ್ಲ ತಾನೇ.. ಉಚಿತವಾಗಿ ಜನರಿಗೆ ಆರೋಗ್ಯ ಸೇವೆ ದೊರಕಿಸಲು ಖಾಸಗಿ ವೈದ್ಯರ ಸೇವೆ ಪಡೆಯುತ್ತಿದ್ದೇವೆ. ಉಚಿತವಾಗಿ ಸೇವೆ ನೀಡುತ್ತಾರೆಂದರೆ ಬೇಡ ಎನ್ನುವುದೇಕೆ. ನಮ್ಮಲ್ಲಿ ಸುಸಜ್ಜಿತ ಆಸ್ಪತ್ರೆ ಕಟ್ಟಡ, ಸೌಲಭ್ಯಗಳಿದ್ದರೂ ಗೈನಕಾಲಜಿಸ್ಟ್, ಅನಸ್ತೇಶಿಯಾ ಇನ್ನಿತರ ನುರಿತ ವೈದ್ಯರು ಇಲ್ಲ.‌ ಅಂತಹ ವೈದ್ಯರನ್ನು ಖಾಸಗಿಯಿಂದ ಪಡೆದು ಜನರಿಗೆ ಸೇವೆ ನೀಡುತ್ತೇವೆ. ಅವರಿಗೆ ಸಂಬಳ ಖಾಸಗಿಯವರೇ ನೀಡುತ್ತಾರೆ ಎಂದು ಸಚಿವ ಖಾದರ್ ಹೇಳಿದರು. ‌