ಪಿನಾಕಿನಿ ಹೊಳೆಯಲ್ಲಿ ಹೆಚ್ಚಾದ ಹೂಳು, ಬದಲಾದ ಹರಿವಿನ ದಿಕ್ಕು ; ಮನೆಗಳಿಗೆ ಬಿರುಕು, ಆತಂಕದಲ್ಲಿ ಕೋಟೆ–ಮಟ್ಟು ನಿವಾಸಿಗಳು, ನೂರಾರು ತೆಂಗಿನ ಮರಗಳು ನೀರು ಪಾಲು !

04-06-26 12:51 pm       HK News Staffer   ಕರಾವಳಿ

ಜಿಲ್ಲೆಯ ಕೋಟೆ ಮತ್ತು ಮಟ್ಟು ಭಾಗದ ಜನರ ಜೀವನಾಡಿಯಾಗಿದ್ದ ಪಿನಾಕಿನಿ ಹೊಳೆ ಈಗ ಅಲ್ಲಿನ ನಿವಾಸಿಗಳಿಗೆ ಜೀವಭಯದ ಮೂಲವಾಗಿ ಪರಿಣಮಿಸಿದೆ. ಹೊಳೆಯ ಮಧ್ಯಭಾಗದಲ್ಲಿ ವರ್ಷಗಳಿಂದ ಹೂಳು ತುಂಬಿಕೊಂಡ ಪರಿಣಾಮ ನೀರಿನ ಹರಿವಿನ ದಿಕ್ಕು ಬದಲಾಗಿದ್ದು, ತೀರ ಪ್ರದೇಶಗಳಲ್ಲಿ ಭೀಕರ ಭೂ ಕೊರೆತ ಉಂಟಾಗಿ ಕೃಷಿ ಜಮೀನುಗಳು ಹೊಳೆ ಪಾಲಾಗುತ್ತಿವೆ. ಮನೆಗಳಿಗೂ ಬಿರುಕು ಕಾಣಿಸಿಕೊಂಡಿರುವುದರಿಂದ ಮಳೆಗಾಲ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಉಡುಪಿ, ಜೂನ್ 4: ಜಿಲ್ಲೆಯ ಕೋಟೆ ಮತ್ತು ಮಟ್ಟು ಭಾಗದ ಜನರ ಜೀವನಾಡಿಯಾಗಿದ್ದ ಪಿನಾಕಿನಿ ಹೊಳೆ ಈಗ ಅಲ್ಲಿನ ನಿವಾಸಿಗಳಿಗೆ ಜೀವಭಯದ ಮೂಲವಾಗಿ ಪರಿಣಮಿಸಿದೆ. ಹೊಳೆಯ ಮಧ್ಯಭಾಗದಲ್ಲಿ ವರ್ಷಗಳಿಂದ ಹೂಳು ತುಂಬಿಕೊಂಡ ಪರಿಣಾಮ ನೀರಿನ ಹರಿವಿನ ದಿಕ್ಕು ಬದಲಾಗಿದ್ದು, ತೀರ ಪ್ರದೇಶಗಳಲ್ಲಿ ಭೀಕರ ಭೂ ಕೊರೆತ ಉಂಟಾಗಿ ಕೃಷಿ ಜಮೀನುಗಳು ಹೊಳೆ ಪಾಲಾಗುತ್ತಿವೆ. ಮನೆಗಳಿಗೂ ಬಿರುಕು ಕಾಣಿಸಿಕೊಂಡಿರುವುದರಿಂದ ಮಳೆಗಾಲ ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಗ್ರಾಮಸ್ಥರಲ್ಲಿ ತೀವ್ರ ಆತಂಕ ಮನೆ ಮಾಡಿದೆ.

ಹೂಳು ತುಂಬಿದ್ದೇ ಸಮಸ್ಯೆಗೆ ಮೂಲ ಕಾರಣ:

ಕಟಪಾಡಿ ಸಮೀಪದ ಕೋಟೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಪರೆಂಕುದ್ರು ಹಾಗೂ ಮಟ್ಟು ಕಟ್ಟದ ನಿವಾಸಿಗಳ ಪ್ರಕಾರ, ಪಿನಾಕಿನಿ ಹೊಳೆಯ ಮಧ್ಯಭಾಗದಲ್ಲಿ ವರ್ಷಗಳಿಂದ ಸಂಗ್ರಹವಾಗಿರುವ ಹೂಳು ನೀರಿನ ಸಹಜ ಹರಿವಿಗೆ ಅಡ್ಡಿಯಾಗುತ್ತಿದೆ. ಪರಿಣಾಮ ನೀರಿನ ದಿಕ್ಕು ಬದಲಾಗಿ ನೇರವಾಗಿ ಭೂ ಪ್ರದೇಶದತ್ತ ಅಪ್ಪಳಿಸುತ್ತಿದ್ದು, ತೀರ ಪ್ರದೇಶಗಳಲ್ಲಿ ಅಪಾಯಕಾರಿ ಮಟ್ಟದಲ್ಲಿ ಭೂ ಕೊರೆತ ಹೆಚ್ಚಾಗಿದೆ.

ಈ ಹಿಂದೆ ಅಡಿ ಲೆಕ್ಕದಲ್ಲಿ ಆಗುತ್ತಿದ್ದ ಭೂ ಕೊರೆತ ಇದೀಗ ಮೀಟರ್‌ಗಟ್ಟಲೆ ವ್ಯಾಪಿಸಿದೆ. ಈಗಾಗಲೇ ಸುಮಾರು 10ರಿಂದ 15 ಮೀಟರ್‌ಗೂ ಅಧಿಕ ಭೂ ಪ್ರದೇಶ ಹೊಳೆ ಪಾಲಾಗಿದ್ದು, ಹಲವಾರು ಕೃಷಿ ಜಮೀನುಗಳು ನಾಶವಾಗಿವೆ.

ನೂರಾರು ತೆಂಗಿನ ಮರಗಳು ನೀರು ಪಾಲು;

ಭೂ ಕೊರೆತದ ತೀವ್ರತೆಗೆ ನೂರಾರು ಫಲಭರಿತ ತೆಂಗಿನ ಮರಗಳು ಹೊಳೆಗೆ ಕುಸಿದು ಹೋಗಿವೆ. ಕೃಷಿಯನ್ನೇ ಅವಲಂಬಿಸಿ ಬದುಕುತ್ತಿರುವ ಅನೇಕ ಕುಟುಂಬಗಳು ತಮ್ಮ ಜೀವನಾಧಾರ ಕಳೆದುಕೊಳ್ಳುವ ಸ್ಥಿತಿಗೆ ತಲುಪಿವೆ. ಉಳಿದಿರುವ ಭೂಮಿಯನ್ನಾದರೂ ಉಳಿಸಿಕೊಳ್ಳಲು ಸ್ಥಳೀಯರು ಹೋರಾಟ ನಡೆಸುತ್ತಿರುವ ಪರಿಸ್ಥಿತಿ ನಿರ್ಮಾಣವಾಗಿದೆ.

ಮನೆಗಳಿಗೆ ಬಿರುಕು, ಜನರಲ್ಲಿ ಆತಂಕ ;

ಹೊಳೆ ತೀರದ ಭೂಮಿ ನಿರಂತರವಾಗಿ ಕುಸಿಯುತ್ತಿರುವ ಪರಿಣಾಮ ಕೆಲ ಮನೆಗಳ ಗೋಡೆಗಳಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಮಳೆಗಾಲದಲ್ಲಿ ನೀರಿನ ಹರಿವು ಮತ್ತಷ್ಟು ಹೆಚ್ಚಾದರೆ ಮನೆಗಳ ಸುರಕ್ಷತೆಗೂ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ನಿವಾಸಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಉಪ್ಪುನೀರಿನ ಸಮಸ್ಯೆಯೂ ಹೆಚ್ಚಳ ;

ಭೂ ಕೊರೆತದ ಜೊತೆಗೆ ಮತ್ತೊಂದು ದೊಡ್ಡ ಸಮಸ್ಯೆಯಾಗಿ ಉಬ್ಬರದ ಸಮಯದಲ್ಲಿ ಸಮುದ್ರದ ಉಪ್ಪುನೀರು ಹೊಳೆಗೆ ನುಗ್ಗುತ್ತಿದೆ. ಇದರ ಪರಿಣಾಮ ಸುತ್ತಮುತ್ತಲಿನ ಬಾವಿಗಳ ನೀರು ಉಪ್ಪಾಗುತ್ತಿದ್ದು, ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದೆ. ಗ್ರಾಮ ಪಂಚಾಯತ್ ವತಿಯಿಂದ ಸಮರ್ಪಕ ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ ಎಂಬುದು ಸ್ಥಳೀಯರ ಆರೋಪ.

ವಿಷಜಂತುಗಳ ಕಾಟ;

ಪ್ರವಾಹದ ಸಂದರ್ಭ ಹಾವು ಸೇರಿದಂತೆ ವಿಷಜಂತುಗಳು ಮನೆಗಳಿಗೆ ನುಗ್ಗುತ್ತಿರುವುದು ನಿವಾಸಿಗಳ ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಮಕ್ಕಳು ಮತ್ತು ವೃದ್ಧರ ಸುರಕ್ಷತೆ ಬಗ್ಗೆ ಕುಟುಂಬಗಳು ಚಿಂತಿಸುತ್ತಿವೆ.

ತುರ್ತು ಕ್ರಮಕ್ಕೆ ಗ್ರಾಮಸ್ಥರ ಆಗ್ರಹ;

ಪಿನಾಕಿನಿ ಹೊಳೆಯ ಮಧ್ಯಭಾಗದಲ್ಲಿ ತುಂಬಿರುವ ಹೂಳನ್ನು ತಕ್ಷಣ ತೆರವುಗೊಳಿಸಿ, ತೀರ ಪ್ರದೇಶಗಳಲ್ಲಿ ತಡೆಗೋಡೆ ನಿರ್ಮಾಣ ಸೇರಿದಂತೆ ಶಾಶ್ವತ ರಕ್ಷಣಾ ಕಾಮಗಾರಿ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಮಳೆಗಾಲ ಆರಂಭವಾಗುವ ಮೊದಲು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಇಲಾಖೆಗಳು ಸ್ಥಳ ಪರಿಶೀಲನೆ ನಡೆಸಿ ತುರ್ತು ಕ್ರಮ ಕೈಗೊಳ್ಳದಿದ್ದರೆ ಇನ್ನಷ್ಟು ಕೃಷಿ ಭೂಮಿ ಮತ್ತು ಮನೆಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎಂದು ಎಚ್ಚರಿಸಿದ್ದಾರೆ.