ಹಿಂದೆ ವೀರೇಂದ್ರ ಪಾಟೀಲ್ ಗೆ ಆದ ಅವಮಾನ ಈಗ ಸಿದ್ದರಾಮಯ್ಯಗೆ ಕಾಂಗ್ರೆಸ್ ಹೈಕಮಾಂಡ್ ನಿಂದ ಆಗ್ತಿದೆ ; ಮಂಗಳೂರಿನಲ್ಲಿ ಪ್ರಲ್ಹಾದ್ ಜೋಶಿ ಸ್ಫೋಟಕ ಹೇಳಿಕೆ

28-05-26 02:45 pm       HK News Staffer   ಕರಾವಳಿ

ಕರ್ನಾಟಕದ ಜನಪ್ರಿಯ ನಾಯಕ ಸಿದ್ದರಾಮಯ್ಯನವರನ್ನ ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಸರಿಯಿಲ್ಲ.‌ ಇದರಿಂದಾಗಿ ಕರ್ನಾಟಕದಲ್ಲಿ ಅಸ್ಥಿರತೆ, ಅರಾಜಕತೆ, ಅವಿಶ್ವಾಸ ನಿರ್ಮಾಣವಾಗಿದೆ. ಇದರ ಪರಾಕಾಷ್ಠೆ ನಿನ್ನೆ ಮೊನ್ನೆಯಿಂದ ನಡೆಯುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲವಾದರೂ ಇದ್ದ ಒಬ್ಬ ಹಿಂದುಳಿದ ವರ್ಗದ ಮುಖ್ಯಮಂತ್ರಿಯನ್ನ ಯಾವ ರೀತಿ ನಡೆಸಿಕೊಂಡ್ರು ಎನ್ನೋದು ತಿಳಿಯುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ಮಂಗಳೂರು, ಮೇ 28: ಕರ್ನಾಟಕದ ಜನಪ್ರಿಯ ನಾಯಕ ಸಿದ್ದರಾಮಯ್ಯನವರನ್ನ ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಸರಿಯಿಲ್ಲ.‌ ಇದರಿಂದಾಗಿ ಕರ್ನಾಟಕದಲ್ಲಿ ಅಸ್ಥಿರತೆ, ಅರಾಜಕತೆ, ಅವಿಶ್ವಾಸ ನಿರ್ಮಾಣವಾಗಿದೆ. ಇದರ ಪರಾಕಾಷ್ಠೆ ನಿನ್ನೆ ಮೊನ್ನೆಯಿಂದ ನಡೆಯುತ್ತಿದೆ. ಇದು ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲವಾದರೂ ಇದ್ದ ಒಬ್ಬ ಹಿಂದುಳಿದ ವರ್ಗದ ಮುಖ್ಯಮಂತ್ರಿಯನ್ನ ಯಾವ ರೀತಿ ನಡೆಸಿಕೊಂಡ್ರು ಎನ್ನೋದು ತಿಳಿಯುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ. 

ಇವರು ದಿನಾ ಬೆಳಗ್ಗೆ ಒಬಿಸಿ ಮಂತ್ರ ಜಪಿಸುತ್ತಾರೆ. ಯಾವ ರೀತಿ ವೀರೇಂದ್ರ ಪಾಟೀಲ್ ಅವರನ್ನ ರಾಜೀವ್ ಗಾಂಧಿ ಅಪಮಾನ ಮಾಡಿದ್ರೋ ಅದೇ ರೀತಿ ಮಗ ರಾಹುಲ್ ಗಾಂಧಿ ಸಿದ್ದರಾಮಯ್ಯನವರನ್ನ ನಡೆಸಿಕೊಂಡಿದ್ದಾರೆ. ಇದು ರಾಹುಲ್ ಗಾಂಧಿಗೆ ಬಂದಿರುವ ಬಳುವಳಿ. ಸಿದ್ದರಾಮಯ್ಯ ಹಾಗು ಯಡಿಯೂರಪ್ಪ ಕರ್ನಾಟಕದ ಮಾಸ್ ಲೀಡರ್ಸ್. ಇಡೀ ದೇಶದಲ್ಲಿ ನಾಲ್ಕು ರಾಜ್ಯದಲ್ಲಿ ಕಾಂಗ್ರೆಸ್ ಪಾರ್ಟಿ ಅಧಿಕಾರದಲ್ಲಿದೆ. ಮೂರು ಕಡೆ ಮೇಲ್ಜಾತಿಯವರು ಮುಖ್ಯಮಂತ್ರಿ ಆಗಿದ್ದಾರೆ. ಆದರೆ ಇವರು ಒಬಿಸಿ ಬಗ್ಗೆ ಮಾತಾನಾಡ್ತಾರೆ. ಇದ್ದ ಒಬ್ಬ ಒಬಿಸಿ ಮುಖ್ಯಮಂತ್ರಿಗೆ ತೊಂದ್ರೆ ಕೊಟ್ಟಿದ್ದಾರೆ. 

ಹಾಗೆಂದು ಸಿದ್ದರಾಮಯ್ಯ ಭಾರೀ ಪ್ರಾಮಾಣಿಕ ಎಂದಲ್ಲ‌. ಆದರೆ ಅವರನ್ನ ರಾಹುಲ್ ಗಾಂಧಿ ನಡೆಸಿಕೊಂಡ ರೀತಿ ಸರಿಯಲ್ಲ ಎಂದು ಜೋಷಿ ಹೇಳಿದರು. ಕಾಂಗ್ರೆಸ್ ಕುರ್ಚಿ ಫೈಟ್ ನಿಂದ ಬಿಜೆಪಿಗೆ ಲಾಭ ಆಗುತ್ತಾ ಎಂಬ ಪ್ರಶ್ನೆಗೆ, ರಾಜ್ಯದ ಕಾಂಗ್ರೆಸ್  ಸರಕಾರದಲ್ಲಿ ಆಡಳಿತವಿಲ್ಲ. ಇಲ್ಲಿ ಇರೋದು ಕೇವಲ ತುಷ್ಟೀಕರಣ ಹಾಗು ಭ್ರಷ್ಟಾಚಾರ. ಡಿಕೆಶಿ ಬಂದರೂ ಅದು ಮುಂದುವರೆಯುತ್ತೆ. ಕಾಂಗ್ರೆಸ್ ವಿಫಲವಾಗಿ ಬಿಜೆಪಿ ಅಧಿಕಾರಕ್ಕೆ ಬರಬೇಕೆಂದಿಲ್ಲ. ಪ್ರಧಾನಿ ಮೋದಿಯವರ ಮಾರ್ಗದರ್ಶನದಲ್ಲಿ ಸಕಾರಾತ್ಮಕ ಚಿಂತನೆಗಳ ಮೂಲಕ ಅಧಿಕಾರಕ್ಕೆ ಬರುತ್ತೇವೆ. ಯಾವ ರೀತಿ ಬಂಗಾಳ ಅಸ್ಸಾಂ, ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದೇವೋ ಅದೇ ರೀತಿ ಹಿಂದೆಂದೂ ಬರದ ಪ್ರಬಲ ಬಹುಮತದೊಂದಿಗೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ ಎಂದು ಹೇಳಿದರು. 

ಪೆಟ್ರೋಲ್ -ಡೀಸೆಲ್ ಬೆಲೆ ಏರಿಕೆ ಕುರಿತು ಕಾಂಗ್ರೆಸ್ ಟೀಕೆಗೆ, ಈ ರೀತಿಯ ಜಾಗತಿಕ ಕ್ರೈಸಿಸ್ ಯಾವತ್ತೂ ಎದುರಾಗಲಿಲ್ಲ. ನನ್ನ ಅನುಭವದ ಆಧಾರದಲ್ಲಿ 
ಈ ಪ್ರಮಾಣದ ಗ್ಲೋಬಲ್ ಕ್ರೈಸಿಸ್ ಯಾವಾಗಲು ನಿರ್ಮಾಣ ಆಗಲಿಲ್ಲ‌. ರಾಜಕೀಯ ಬೇಳೆ ಬೇಯಿಸಿಕೊಳ್ಳುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಮನೆಗೆ ಬೆಂಕಿ ಹತ್ತಿದಾಗ ಇದರಲ್ಲಿ ಬೀಡಿ ಹಚ್ಚಿಕೊಳ್ಳುವ ಕೆಲಸವನ್ನ ಕಾಂಗ್ರೆಸ್ ಮಾಡಬಾರದು ಎಂದು ಟೀಕಿಸಿದರು.

ಭಟ್ಕಳದ ಘಟನೆ ಕಾಂಗ್ರೆಸ್ ಆಡಳಿತದ ತುಷ್ಟೀಕರಣದ ಒಂದು ಪರಾಕಾಷ್ಠೆ. ದೇಶ ವಿಭಜನೆಯ ವೇಳೆ ಮುಸ್ಲಿಂ ಲೀಗ್ ವರ್ತಿಸಿದ ರೀತಿ ಕಾಂಗ್ರೆಸ್ ವರ್ತಿಸುತ್ತಿದೆ. ಮುಸ್ಲಿಂ ಲೀಗ್ ಭಾಷೆಯನ್ನ ಕಾಂಗ್ರೆಸ್ ಅನುಸರಿಸುತ್ತಿದೆ. ದೇಶವನ್ನ ಇಬ್ಭಾಗ ಮಾಡಲು ಕರೆ ಕೊಟ್ಟ ಪಾರ್ಟಿ ಮುಸ್ಲಿಂ ಲೀಗ್. ಅಂತಹ ಮುಸ್ಲಿಂ ಲೀಗ್ ಜೊತೆ ಕಾಂಗ್ರೆಸ್ ಸಂಬಂಧ ಇಟ್ಟುಕೊಂಡು ಎಲ್ಲಾ ಕಡೆ ಮುಸ್ಲಿಂ ತುಷ್ಟೀಕರಣದ ನೀತಿ ಅನುಸರಿಸುತ್ತಿದೆ. ಭಟ್ಕಳದ ಘಟನೆಗೂ ಇದೇ ಕಾರಣ ಎಂದರು.