ಎಂಆರ್ ಪಿಎಲ್ ಕೋಕ್ ಸಲ್ಫರ್ ಮಾಲಿನ್ಯ ; ಆರು ತಿಂಗಳಲ್ಲಿ ಹಸಿರು ವಲಯಕ್ಕೆ ಭೂಸ್ವಾಧೀನ ಭರವಸೆ, ಜೋಕಟ್ಟೆ ನಾಗರಿಕರ ಎಂಟು ದಿನಗಳ ಧರಣಿ ಅಂತ್ಯ

25-05-26 09:57 pm       HK News Staffer   ಕರಾವಳಿ

ಎಮ್ ಆರ್ ಪಿ ಎಲ್ ನ ಉದ್ದೇಶಿತ ಹಸಿರು ವಲಯಕ್ಕಾಗಿ ಗುರುತಿಸಿರುವ 27 ಎಕರೆ ಜಮೀನು ಸ್ವಾಧೀನ ತಕ್ಷಣ ಆರಂಭಿಸಬೇಕು...

ಮಂಗಳೂರು, ಮೇ 25: ಎಮ್ ಆರ್ ಪಿ ಎಲ್ ನ ಉದ್ದೇಶಿತ ಹಸಿರು ವಲಯಕ್ಕಾಗಿ ಗುರುತಿಸಿರುವ 27 ಎಕರೆ ಜಮೀನು ಸ್ವಾಧೀನ ತಕ್ಷಣ ಆರಂಭಿಸಬೇಕು, ಪುನರ್ವಸತಿ ವಾಗ್ದಾನವನ್ನು ನಿಗದಿತ ಕಾಲಾವಧಿಯಲ್ಲಿ ಪೂರ್ಣಗೊಳಿಸಬೇಕು ಎಂಬ ಬೇಡಿಕೆ ಮುಂದಿಟ್ಟು ಜೋಕಟ್ಟೆ, ಕಳವಾರು, ಕೆಂಜಾರು ಗ್ರಾಮದ ಕೋಕ್ ಸಲ್ಫರ್ ಘಟಕದ ಮಾಲಿನ್ಯದಿಂದ ಸಂತ್ರಸ್ತರು "ನಾಗರಿಕ ಹೋರಾಟ ಸಮಿತಿ" ನೇತೃತ್ವದಲ್ಲಿ ಎಂಟು ದಿನಗಳಿಂದ ನಡೆಸುತ್ತಿದ್ದ ಹಗಲು ರಾತ್ರಿ ಧರಣಿಯನ್ನು ಜಿಲ್ಲಾಧಿಕಾರಿ ಭರವಸೆಯೊಂದಿಗೆ ಮುಕ್ತಾಯಗೊಳಿಸಿದ್ದಾರೆ. 

ಜಿಲ್ಲಾಧಿಕಾರಿ ಎಚ್.ವಿ ದರ್ಶನ್ ಅಧ್ಯಕ್ಷತೆಯ ಸಭೆಯಲ್ಲಿ ಸಂಸದ ಬ್ರಿಜೇಶ್ ಚೌಟ, ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಎಂಆರ್ ಪಿಎಲ್ ಎಂಡಿ ಕಾಮತ್ ಸಹಿತ ಜಿಲ್ಲಾ ಮಟ್ಟದ ಅಧಿಕಾರಿಗಳು, ಹೋರಾಟ ಸಮಿತಿ ಸಂಚಾಲಕ ಮುನೀರ್ ಕಾಟಿಪಳ್ಳ ಸಹಿತ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಹಸಿರು ವಲಯಕ್ಕೆ ಗುರುತು ಮಾಡಲಾದ 27 ಎಕರೆ ಜಮೀನನ್ನು ಕಂಪೆನಿ ನೇರ ಖರೀದಿಸುವುದು, ಜಿಲ್ಲಾಧಿಕಾರಿ ಅಧೀನದ ಸಮಿತಿಯಿಂದ ಭೂಸ್ವಾಧೀನಗೊಳಿಸುವುದು, ಕೆಐಡಿಬಿಯಿಂದ ಸ್ವಾಧೀನ ಮಾಡುವುದು ಈ ಮೂರು ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳು ಸಭೆಯ ಮುಂದೆ ತೆರದಿಟ್ಟರು. ಈ ಅಂಶಗಳ ಮೇಲೆ ಹೋರಾಟ ಸಮಿತಿಯ ಪ್ರತಿನಿಧಿಗಳು, ಜನಪ್ರತಿನಿಧಿಗಳು ಚರ್ಚಿಸಿದರು. ಕೆಐಎಡಿಬಿಯಿಂದ ಭೂಸ್ವಾಧೀನದ ಕಾನೂನು ಪ್ರಕ್ರಿಯೆಯನ್ನು ಆರು ತಿಂಗಳಲ್ಲಿ ಪೂರ್ಣಗೊಳಿಸಿ, ಭೂಸ್ವಾಧೀ‌ನ ಪ್ರಕ್ರಿಯೆ ಆರಂಭಿಸುವುದಾಗಿ ಜಿಲ್ಲಾಡಳಿತ ಸ್ಪಷ್ಟ ಭರವಸೆ ನೀಡಿದ ಹಿನ್ನಲೆಯಲ್ಲಿ ಹೋರಾಟ ಸಮಿತಿ ಪ್ರತಿನಿಧಿಗಳು ಕೆಐಎಡಿಬಿ ಮೂಲಕ ಭೂಸ್ವಾಧೀನಕ್ಕೆ ಒಪ್ಪಿಗೆ ಸೂಚಿಸಿದರು. ಭೂಸ್ವಾಧೀನ ಆರಂಭಿಸುವುದು ಯಾವುದೇ ಕಾರಣಕ್ಕೂ ಆರು ತಿಂಗಳು ಮೀರಬಾರದು ಎಂದು ಖಾತರಿ ಪಡಿಸಬೇಕು ಎಂದು ಸಂಚಾಲಕ ಮುನೀರ್ ಕಾಟಿಪಳ್ಳ ಹೇಳಿದರು. ಜಿಲ್ಲಾಡಳಿತ, ಕೆಐಎಡಿಬಿ ಅಧಿಕಾರಿಗಳು ಇದಕ್ಕೆ ಒಪ್ಪಿಗೆ ಸೂಚಿಸಿದರು.‌

ನೇರ ಖರೀದಿಯೊಂದಿಗೆ ಏಕಗಂಟಿನ ಪರಿಹಾರಕ್ಕೆ ಸಂತ್ರಸ್ತರು ಒಪ್ಪಿಗೆ ಸೂಚಿಸಿದ್ದಾರೆ. ಅಲ್ಲದೆ, ಎಂಆರ್ ಪಿಎಲ್ ನ ನಾಲ್ಕನೇ ಹಂತದ ಭೂಸ್ವಾಧೀನಕ್ಕೆ ಪೆರ್ಮುದೆ ಗ್ರಾಮಸ್ಥರಿಗೆ ಸಿಗುವ ಪುನರ್ವಸತಿ ಪ್ಯಾಕೇಜ್ ನಲ್ಲಿರುವ ಎಲ್ಲಾ ಅಂಶಗಳನ್ನು ಜೋಕಟ್ಟೆ ಸಂತ್ರಸ್ತರಿಗೂ ಒದಗಿಸಬೇಕು ಎಂದು ಮುನೀರ್ ಕಾಟಿಪಳ್ಳ ಇದೇ ವೇಳೆ ಆಗ್ರಹಿಸಿದರು. ನಾಲ್ಕನೇ ಹಂತದ ಭೂಸ್ವಾಧೀನ ಪ್ಯಾಕೇಜ್ ನಲ್ಲಿ ಇರುವ 18 ತಿಂಗಳ ಮನೆ ಬಾಡಿಗೆಯನ್ನು ಜೋಕಟ್ಟೆಯವರಿಗೆ ಒದಗಿಸಬೇಕು, ಕುಸಿಯವ ಹಂತದಲ್ಲಿ ಇರುವ ಮನೆಗಳ ನಿವಾಸಿಗಳಿಗೆ ಸೂಕ್ತ ರಕ್ಷಣೆ ಒದಗಿಸಬೇಕು ಎಂದು ಒತ್ತಾಯಿಸಿದರು.