‘ಲ್ಯಾಂಡ್ ಲಿಂಕ್ಸ್’ ಸಂಸ್ಥೆಯ ನಾಲ್ಕು ಸಭಾಭವನ‌ ಏಕಕಾಲದಲ್ಲಿ ಲೋಕಾರ್ಪಣೆ ; ಶಿಕ್ಷಣ, ಸಂಸ್ಕೃತಿ, ಸೌಹಾರ್ದ ಚಟುವಟಿಕೆಗೆ ಸಭಾಂಗಣ ಬಳಕೆಯಾಗಲಿ ಎಂದ ಆಂಧ್ರಪ್ರದೇಶ ರಾಜ್ಯಪಾಲ ಅಬ್ದುಲ್ ನಜೀರ್

25-05-26 04:23 pm       HK News Staffer   ಕರಾವಳಿ

ಮಂಗಳೂರಿನ ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆ ‘ಲ್ಯಾಂಡ್ ಲಿಂಕ್ಸ್’ ಮಂಗಳೂರು ನಗರದ ನಾಲ್ಕು ಕಡೆಗಳಲ್ಲಿ ನಿರ್ಮಿಸಿರುವ ವಿನೂತನ ನಾಲ್ಕು ಅತ್ಯಾಧುನಿಕ ಶೈಲಿ ಮತ್ತು ಸೌಲಭ್ಯಗಳುಳ್ಳ ಸಭಾಭವನಗಳನ್ನು ಮಂಗಳೂರಿನ ಮೇರಿಹಿಲ್ ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್ ನಲ್ಲಿ ಏಕಕಾಲಕ್ಕೆ ಉದ್ಘಾಟಿಸಲಾಯಿತು.

ಮಂಗಳೂರು, ಮೇ 25: ಮಂಗಳೂರಿನ ಹೆಸರಾಂತ ರಿಯಲ್ ಎಸ್ಟೇಟ್ ಸಂಸ್ಥೆ ‘ಲ್ಯಾಂಡ್ ಲಿಂಕ್ಸ್’ ಮಂಗಳೂರು ನಗರದ ನಾಲ್ಕು ಕಡೆಗಳಲ್ಲಿ ನಿರ್ಮಿಸಿರುವ ವಿನೂತನ ನಾಲ್ಕು ಅತ್ಯಾಧುನಿಕ ಶೈಲಿ ಮತ್ತು ಸೌಲಭ್ಯಗಳುಳ್ಳ ಸಭಾಭವನಗಳನ್ನು ಮಂಗಳೂರಿನ ಮೇರಿಹಿಲ್ ನಲ್ಲಿರುವ ಪಾಲೆಮಾರ್ ಕನ್ವೆನ್ಶನ್ ಸೆಂಟರ್ ನಲ್ಲಿ ಏಕಕಾಲಕ್ಕೆ ಉದ್ಘಾಟಿಸಲಾಯಿತು. ಆಂಧ್ರ ಪ್ರದೇಶದ ರಾಜ್ಯಪಾಲ, ನಿವೃತ್ತ ನ್ಯಾಯಮೂರ್ತಿ ಎಸ್.ಅಬ್ದುಲ್ ನಝೀರ್, ಸಭಾಂಗಣಗಳನ್ನು ಉದ್ಘಾಟಿಸಿ ಕೃಷ್ಣ ಜೆ. ಪಾಲೆಮಾರ್ ನೇತೃತ್ವದಲ್ಲಿ ನಿರ್ಮಾಣವಾದ ಸಭಾಂಗಣಗಳು ಸಮುದಾಯದ ಶಿಕ್ಷಣ, ಸಂಸ್ಕೃತಿ, ಸಾಮಾಜಿಕ, ಸೌಹಾರ್ದ ಚಟುವಟಿಕೆಗಳಿಗೆ ಬಳಕೆಯಾಗಲಿ ಎಂದು ಶುಭ ಹಾರೈಸಿದ್ದಾರೆ. 

ಮೇರಿಹಿಲ್ ನಲ್ಲಿ ಪಾಲೆಮಾರ್ ಕನ್ವೆನ್ಶನ್ ಸೆಂಟರ್, ಮೋರ್ಗನ್ಸ್ ಗೇಟ್ ನಲ್ಲಿ ಪಾಲೆಮಾರ್ ಗಾರ್ಡನ್, ಸುರತ್ಕಲ್ ನಲ್ಲಿ ಪಾಲೆಮಾರ್ ಫಾರ್ಮ್ಸ್ ಹಾಗೂ ಜೆಪ್ಪಿನಮೊಗರಿನ ಕಡೆಕಾರ್ ನಲ್ಲಿ ನೇತ್ರಾವತಿ ಸಭಾಭವನಗಳು ಏಕಕಾಲಕ್ಕೆ ಲೋಕಾರ್ಪಣೆ ಆಗಿವೆ.  ಇದೇ ವೇಳೆ, ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆ ನೀಡುತ್ತಿರುವನ್ನು ಶ್ಲಾಘಿಸಿದ ರಾಜ್ಯಪಾಲರು, ಮಾನವ ಸಂಪನ್ಮೂಲ ಅಭಿವೃದ್ಧಿಪಡಿಸಲು ಮತ್ತು ಸಮಾಜದಲ್ಲಿ ಬಡತನ ನಿರ್ಮೂಲನೆ ಮಾಡಲು ಶಿಕ್ಷಣ ಪ್ರಮುಖ ಸಾಧನ. ಕೃಷ್ಣ ಪಾಲೆಮಾರ್ ಈ ನಿಟ್ಟಿನಲ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಸಮಾಜಮುಖಿ ಕೆಲಸಗಳ ಮೂಲಕ ಜನರಿಗೆ ಶಿಕ್ಷಣ, ಉದ್ಯೋಗ ನೀಡಿದ್ದಾರೆ. ವಿಕಾಸ್ ಎಜುಕೇಶನ್ ಟ್ರಸ್ಟ್ ಮೂಲಕ ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ನೀಡುತ್ತಿರುವುದು ಮಹತ್ವದ ಕಾರ್ಯ ಎಂದು ಶ್ಲಾಘಿಸಿದರು. ಮಂಗಳೂರಿನ ಜನತೆಯ ಮದುವೆ, ಮಂಗಳ ಕಾರ್ಯಕ್ರಮಗಳು ಹಾಗೂ ಉತ್ತಮ ಕಾರ್ಯಗಳಿಗೆ ಪಾಲೆಮಾರ್ ಸಮೂಹದ ಸಭಾಂಗಣಗಳು ಬಳಕೆಯಾಗಲಿ ಎಂದು ಶುಭ ಹಾರೈಸಿದರು. 

ಪಾಲೆಮಾರ್ ಕೋಟಿಗೊಬ್ಬ ; ಸಚಿವ ಸೋಮಣ್ಣ 

ಕೇಂದ್ರ ರೈಲ್ವೇ ಮತ್ತು ಜಲಶಕ್ತಿ ರಾಜ್ಯ ಸಚಿವ ವಿ. ಸೋಮಣ್ಣ ಮಾತನಾಡಿ, ಏಕ ವ್ಯಕ್ತಿ ತನ್ನ ಪರಿಶ್ರಮದಿಂದ ಸಂಪಾದಿಸಿದ ಸಂಪತ್ತನ್ನು ಸಮಾಜಮುಖಿಯಾಗಿ ವಿನಿಯೋಗಿಸುವ ಕೃಷ್ಣ ಜೆ. ಪಾಲೆಮಾರ್ ಚಿಂತನೆಗೆ ಅಭಿನಂದನೆಗಳು. ಎಲ್ಲರನ್ನು ಜೊತೆಯಾಗಿಸಿ ರಾಜ್ಯಕ್ಕೆ, ರಾಷ್ಟ್ರಕ್ಕೆ ಶಕ್ತಿ ತುಂಬುವ ಕೆಲಸ ಅವರಿಂದ ಆಗಿದೆ. ಹಲವಾರು ಸಮಾಜಮುಖಿ ಚಿಂತನೆಯಿಂದ ನಾಲ್ಕು ಸಭಾಭವನಗಳ ಮೂಲಕ ಸಮಾಜಕ್ಕೆ ಕೊಡುಗೆ ನೀಡಿದ ಪಾಲೆಮಾರ್ ಕೋಟಿಗೊಬ್ಬ ಎನ್ನಬಹುದು ಎಂದು ಶ್ಲಾಘಿಸಿದರು. 

ಮುಂದಿನ ಒಂದು ತಿಂಗಳೊಳಗೆ ವಂದೇ ಭಾರತ್ ರೈಲು ಬೆಂಗಳೂರು- ಮಂಗಳೂರು ನಡುವೆ ಓಡಲಿದೆ. ಕೊಂಕಣ ರೈಲು ದೇಶದ ಗ್ರೋತ್ ಇಂಜಿನ್ ಆಗಿದೆ. ದೇಶದ ಅರ್ಥ ವ್ಯವಸ್ಥೆಯಲ್ಲಿ ರೈಲ್ವೆ ವಿಭಾಗ ದೇಶದ ಗ್ರೋತ್ ಇಂಜಿನ್ ಆಗಿ ಕಾರ್ಯ ನಿರ್ವಹಿಸುವಲ್ಲಿ ಪ್ರಧಾನ ಮಂತ್ರಿಯವರ ಪಾತ್ರ ಹಿರಿದಾಗಿದೆ. ಪ್ರಧಾನಿಯವರು ಮಂಗಳೂರಿನ ಅಭಿವೃದ್ಧಿಯನ್ನು ಕಡೆಗಣಿಸುವುದಿಲ್ಲ ಎಂದು ಸಚಿವ ಸೋಮಣ್ಣ ತಿಳಿಸಿದ್ದಾರೆ. 

ಮುಖ್ಯ ಅತಿಥಿಯಾಗಿದ್ದ ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ, ಪಾಲೆಮಾರ್ ಸಭಾಂಗಣಗಳು ಕರಾವಳಿಯ ಸೌಂದರ್ಯಕ್ಕೆ ಕಿರೀಟದಂತಿವೆ. ಯಾವುದೇ ಪ್ರದೇಶದ ಅಭಿವೃದ್ಧಿಗೆ ಅಲ್ಲಿನ ಆರ್ಥಿಕ ವ್ಯವಹಾರ ಮುಖ್ಯ. ಈ ನಿಟ್ಟಿನಲ್ಲಿ ಪಾಲೆಮಾರ್ ಸಭಾಂಗಣ ಸಮಾಜಕ್ಕೆ ಮಹತ್ವದ ಕೊಡುಗೆ ನೀಡಲಿದೆ ಎಂದರು. ಎಲ್ಲರ ಜೊತೆ ಗೌರವಯುತ, ಸೌಹಾರ್ದ, ಸ್ನೇಹಪರ ವ್ಯಕ್ತಿತ್ವದ ಪಾಲೆಮಾರ್ ಉತ್ತಮ ಭಾರತೀಯನ ಪ್ರತೀಕವಾಗಿದ್ದಾರೆ. ನಮ್ಮ ಸಂಸ್ಕೃತಿ, ಪರಂಪರೆಯ ಮಾದರಿಯಾಗಿ ಅವರ ಬದುಕು, ವ್ಯಕ್ತಿತ್ವ, ಶ್ರಮ, ಜೀವನ ಹಾಗೂ ಅವರು ಬೆಳೆದು ಬಂದ ರೀತಿ ಇತರರಿಗೆ ಮಾದರಿ. ಅವರ ಆತ್ಮಕಥೆ ಶೀಘ್ರವಾಗಿ ಹೊರಬರಲಿ ಎಂದರು. 

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಹಾಗೂ ವಿಕಾಸ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಕೃಷ್ಣ ಜೆ. ಪಾಲೆಮಾರ್ ಮಾತನಾಡಿ, ವಿಕಾಸ ಎಜುಕೇಶನ್ ಟ್ರಸ್ಟ್ ಶಿಕ್ಷಣಕ್ಕೆ ಹೆಚ್ಚು ಪ್ರೋತ್ಸಾಹ ನೀಡುತ್ತದೆ. ಈ ಸಭಾಂಗಣದಲ್ಲಿ ಬಂದ ಆದಾಯದ ಹೆಚ್ಚಿನ ಪಾಲು ಶಿಕ್ಷಣಕ್ಕಾಗಿ ಬಳಕೆಯಾಗಲಿದೆ ಎಂದರು. ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಅನುಕೂಲವಾಗುವಂತೆ ಸಭಾಂಗಣ ನಿರ್ಮಿಸಲಾಗಿದೆ. ವಾಹನ ಪಾರ್ಕಿಂಗ್ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ನಾಲ್ಕೂ ಸಭಾಭವನಗಳಲ್ಲಿ ಅತ್ಯಂತ ವಿಶಾಲವಾದ, ವ್ಯವಸ್ಥಿತವಾದ ಪಾರ್ಕಿಂಗ್ ಸ್ಥಳಾವಕಾಶವನ್ನು ಕಲ್ಪಿಸಲಾಗಿದೆ. ಬಡವ- ಬಲ್ಲಿದನೆಂಬ ಭೇದವಿಲ್ಲದೆ, ಪ್ರತಿಯೊಬ್ಬರ ಆರ್ಥಿಕ ಶಕ್ತಿಗೆ ತಕ್ಕಂತೆ ಇಲ್ಲಿ ಸಭಾಂಗಣಗಳು ಲಭ್ಯವಿವೆ ಎಂದು ಹೇಳಿದರು. 

ಮಂಗಳೂರು ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ಡಾ.ವೈ.ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ಭಾಗೀರಥಿ ಮುರುಳ್ಯ, ಐವನ್ ಡಿಸೋಜ ಮೊದಲಾದವರು ಶುಭ ಹಾರೈಸಿದರು. ಸಮಾರಂಭದಲ್ಲಿ ವಿಕಾಸ ಎಜುಕೇಶನ್ ಟ್ರಸ್ಟ್ ಟ್ರಸ್ಟಿಗಳಾದ ಜೆ.ಕೆ.ರಾವ್, ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಜೆ. ಸಂತೋಷ್ ಪಾಲೆಮಾರ್, ಲ್ಯಾಂಡ್ ಲಿಂಕ್ಸ್ ಉಪಾಧ್ಯಕ್ಷ ಪ್ರದೀಪ್ ಪಾಲೆಮಾರ್, ಪ್ರಸನ್ನ ಪಾಲೆಮಾರ್ ಮತ್ತಿತರರು ಉಪಸ್ಥಿತರಿದ್ದರು. 

ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಮಾರಂಭದಲ್ಲಿ ಸಾನಿಧ್ಯ ಸಂಸ್ಥೆ, ಸೇವಾಶ್ರಮದ ಗೀತಾ ಶೆಟ್ಟಿ, ಸಮಾಜ ಸೇವಕಿ ತಬಸ್ಸುಮ್, ವಿಶೇಷ ಚೇತನ ಕಲಾವಿದ ಕೌಶಿಕ್ ಆಚಾರ್ಯ, ಪ್ರತಿಭಾವಂತರಾದ ಮಹಾಲಕ್ಷ್ಮಿ ಪೈ, ಮಹಾಲಕ್ಷ್ಮಿ ಭಾರ್ಗವ್, ದೀಶಾ ಪೂಜಾರಿಯವರನ್ನು ಸನ್ಮಾನಿಸಲಾಯಿತು. ಪಾಲೆಮಾರ್ ಕನ್ವೆನ್ಶನ್ ಸೆಂಟರ್ ನಿರ್ಮಾಣದ ಇಂಜಿನಿಯರ್ ಪ್ರವೀಣ್ ಕುಮಾರ್ ಮತ್ತು ಕೊರಗಪ್ಪ ಅವರನ್ನು ಸನ್ಮಾನಿಸಲಾಯಿತು.