ಇಸ್ರೇಲ್‌ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯಕ್ತಿ ಆತ್ಮಹತ್ಯೆ ; ಸಹೋದರನ ಮದುವೆಗೆ ಬಂದಿದ್ದ ವ್ಯಕ್ತಿ ಸಾವಿಗೆ ಶರಣು

12-05-26 12:05 am       Mangalore Correspondent   ಕರಾವಳಿ

ಕೆಲವೇ ದಿನಗಳಲ್ಲಿ ಕೆಲಸಕ್ಕೆ ಮರಳಲು ಇಸ್ರೇಲ್‌ಗೆ ತೆರಳಬೇಕಿದ್ದ 42 ವರ್ಷದ ವ್ಯಕ್ತಿಯೊಬ್ಬರು ಉಳ್ಳಾಲ ಹೊಯ್ಗೆಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ಮಂಗಳೂರು, ಮೇ 11: ಕೆಲವೇ ದಿನಗಳಲ್ಲಿ ಕೆಲಸಕ್ಕೆ ಮರಳಲು ಇಸ್ರೇಲ್‌ಗೆ ತೆರಳಬೇಕಿದ್ದ 42 ವರ್ಷದ ವ್ಯಕ್ತಿಯೊಬ್ಬರು ಉಳ್ಳಾಲ ಹೊಯ್ಗೆಯಲ್ಲಿರುವ ತಮ್ಮ ನಿವಾಸದಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಮೃತರನ್ನು ಸೂರ್ಯ ಪ್ರಕಾಶ್ ಡಿಸೋಜಾ (42) ಎಂದು ಗುರುತಿಸಲಾಗಿದೆ.

ಸೂರ್ಯ ಪ್ರಕಾಶ್ ಕಳೆದ ಒಂದು ವರ್ಷದಿಂದ ಇಸ್ರೇಲ್‌ನಲ್ಲಿ ಉದ್ಯೋಗದಲ್ಲಿದ್ದು, ಇತ್ತೀಚೆಗೆ ತಮ್ಮ ಸಹೋದರಿಯೊಂದಿಗೆ ಊರಿಗೆ ಬಂದಿದ್ದರು. ತಮ್ಮ ಸಹೋದರನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಅವರು, ಮೇ 17ರಂದು ಮತ್ತೆ ಇಸ್ರೇಲ್‌ಗೆ ತೆರಳಲು ಸಿದ್ಧತೆ ನಡೆಸುತ್ತಿದ್ದರು.

ಸೋಮವಾರ ಮುಂಜಾನೆ ಸಹೋದರಿ ಮತ್ತು ಭಾವ ಕೆಲಸಕ್ಕೆ ತೆರಳಿದ ಬಳಿಕ, ಮಲಗುವ ಕೋಣೆಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸ್ಥಳೀಯರ ಪ್ರಕಾರ, ಸೂರ್ಯ ಪ್ರಕಾಶ್ ದೀರ್ಘಕಾಲದಿಂದ ಎದೆನೋವಿನಿಂದ ಬಳಲುತ್ತಿದ್ದು, ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯ ಸಮಸ್ಯೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಆರೋಗ್ಯ ಸಮಸ್ಯೆಗಳ ಕುರಿತು ಉಲ್ಲೇಖಿಸಿರುವ ಡೆತ್ ನೋಟ್ ಕೂಡ ಪತ್ತೆಯಾಗಿದೆ ಎಂದು ತಿಳಿದುಬಂದಿದೆ. 

ಸ್ನೇಹಪರ ವ್ಯಕ್ತಿತ್ವ ಹೊಂದಿದ್ದ ಸೂರ್ಯಪ್ರಕಾಶ್, ಭಾನುವಾರ ನಡೆದ ಸ್ಥಳೀಯ ಸಂಘಟನೆಯ ಕಾರ್ಯಕ್ರಮದಲ್ಲೂ ಸಕ್ರಿಯವಾಗಿ ಭಾಗವಹಿಸಿದ್ದರು. ಸಹೋದರನ ಮದುವೆ ಸಂಭ್ರಮದಲ್ಲೂ ಉತ್ಸಾಹದಿಂದ ಕಾಣಿಸಿಕೊಂಡಿದ್ದು ದಿಢೀರ್ ಆತ್ಮಹತ್ಯೆ ಮಾಡಿಕೊಂಡಿರುವುದು ಕುಟುಂಬ ಹಾಗೂ ಸ್ನೇಹಿತರಲ್ಲಿ ಆಘಾತ ಮೂಡಿಸಿದೆ. ಘಟನೆ ಸಂಬಂಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.