ಮಂಜೇಶ್ವರ ಕ್ಷೇತ್ರ ; ಸಿಪಿಎಂ ಅಭ್ಯರ್ಥಿಗೆ ಇತಿಹಾಸದಲ್ಲೇ ಕಂಡರಿಯದ ಸೋಲು, ಕಟ್ಟಿದ ಠೇವಣಿಯೇ ನಷ್ಟ ! ಆಡಳಿತ ಪಕ್ಷಕ್ಕೆ ತೀವ್ರ ಮುಖಭಂಗ, ಅಂಚೆ ಮತಗಳಲ್ಲಿ ಬಿಜೆಪಿಗೆ ಟಾಪ್

09-05-26 02:15 pm       HK News Staffer   ಕರಾವಳಿ

ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಎಲ್‌ಡಿಎಫ್ ಅಭ್ಯರ್ಥಿ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವಂತೆ, ಈ ಬಾರಿಯ ಚುನಾವಣೆಯಲ್ಲಿ ಕಟ್ಟಿದ ಠೇವಣಿಯನ್ನೇ ಕಳಕೊಂಡಿದ್ದಾರೆ. ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ಅಭ್ಯರ್ಥಿ ಕೆ.ಆ‌ರ್.ಜಯಾನಂದ ಠೇವಣಿ ಕಳಕೊಂಡಿದ್ದು ಪಕ್ಷದ ಪಾಲಿಗೆ ತೀವ್ರ ಮುಖಭಂಗ ಆಗಿದೆ. ಇದೇ ವೇಳೆ, ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರಿಗೆ ಈ ಬಾರಿ ಅತ್ಯಧಿಕ 631 ಪೋಸ್ಟಲ್ ಮತಗಳು ಲಭಿಸಿದ್ದು ವಿಶೇಷ. ಸರ್ಕಾರಿ ಅಧಿಕಾರಿ, ಸಿಬಂದಿಗಳು ಈ ಸಲ ಬಿಜೆಪಿ ಪರವಾಗಿ ವಾಲಿದ್ದನ್ನು ಇದು ಸೂಚಿಸುತ್ತದೆ.

ಕಾಸರಗೋಡು, ಮೇ 9: ಮಂಜೇಶ್ವರ ವಿಧಾನಸಭೆ ಕ್ಷೇತ್ರದಲ್ಲಿ ಎಲ್‌ಡಿಎಫ್ ಅಭ್ಯರ್ಥಿ ಇತಿಹಾಸದಲ್ಲೇ ಮೊದಲ ಬಾರಿಗೆ ಎನ್ನುವಂತೆ, ಈ ಬಾರಿಯ ಚುನಾವಣೆಯಲ್ಲಿ ಕಟ್ಟಿದ ಠೇವಣಿಯನ್ನೇ ಕಳಕೊಂಡಿದ್ದಾರೆ. ಸಿಪಿಎಂ ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ಅಭ್ಯರ್ಥಿ ಕೆ.ಆ‌ರ್.ಜಯಾನಂದ ಠೇವಣಿ ಕಳಕೊಂಡಿದ್ದು ಪಕ್ಷದ ಪಾಲಿಗೆ ತೀವ್ರ ಮುಖಭಂಗ ಆಗಿದೆ. ಇದೇ ವೇಳೆ, ಬಿಜೆಪಿ ಅಭ್ಯರ್ಥಿ ಕೆ.ಸುರೇಂದ್ರನ್ ಅವರಿಗೆ ಈ ಬಾರಿ ಅತ್ಯಧಿಕ 631 ಪೋಸ್ಟಲ್ ಮತಗಳು ಲಭಿಸಿದ್ದು ವಿಶೇಷ. ಸರ್ಕಾರಿ ಅಧಿಕಾರಿ, ಸಿಬಂದಿಗಳು ಈ ಸಲ ಬಿಜೆಪಿ ಪರವಾಗಿ ವಾಲಿದ್ದನ್ನು ಇದು ಸೂಚಿಸುತ್ತದೆ. 

ಒಟ್ಟು ಚಲಾವಣೆಯಾದ ಮಾನ್ಯ ಮತಗಳಲ್ಲಿ ಆರನೇ ಒಂದು ಭಾಗಕ್ಕಿಂತ ಹೆಚ್ಚು ಮತಗಳನ್ನು ಪಡೆದರಷ್ಟೆ ಠೇವಣಿ ಉಳಿಯುತ್ತದೆ. ಆದರೆ ಕೆಆರ್ ಜಯಾನಂದ ಇಷ್ಟು (ಶೇ.16.67) ಮತಗಳನ್ನು ಪಡೆಯದಿದ್ದ ಕಾರಣ ಠೇವಣಿ ಕಳೆದುಕೊಂಡಿದ್ದಾರೆ. ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ ಪ್ರತಿ ಅಭ್ಯರ್ಥಿ 10 ಸಾವಿರ ರೂ. ಠೇವಣಿ ಇಡಬೇಕು. ಮಂಜೇಶ್ವರ ಕ್ಷೇತ್ರದಲ್ಲಿ ಒಟ್ಟು 1,87,801 ಮತಗಳು ಚಲಾವಣೆಯಾಗಿವೆ. ಅಭ್ಯರ್ಥಿ ಠೇವಣಿ ಹಣ ಉಳಿಸಿಕೊಳ್ಳಬೇಕಿದ್ದರೆ ಕ್ಷೇತ್ರದಲ್ಲಿ ಚಲಾವಣೆಯಾದ ಮತಗಳ ಆರನೇ ಒಂದು ಭಾಗ ಅಂದರೆ 31,300 ಮತಗಳನ್ನು ಪಡೆಯಬೇಕಿತ್ತು. 

ಯುಡಿಎಫ್ ಅಭ್ಯರ್ಥಿ ಮುಸ್ಲಿಂ ಲೀಗಿನ ಎ.ಕೆ.ಎಂ.ಅಶ್ರಫ್ 96,948 ಮತಗಳನ್ನು ಪಡೆದು ಶಾಸಕರಾಗಿ ಆಯ್ಕೆಯಾದರೆ, ಎರಡನೇ ಸ್ಥಾನದಲ್ಲಿರುವ ಎನ್‌ಡಿಎ ಅಭ್ಯರ್ಥಿ ಬಿಜೆಪಿಯ ಕೆ. ಸುರೇಂದ್ರನ್ 67,696 ಮತಗಳನ್ನು ಪಡೆದಿದ್ದಾರೆ. ಎಲ್‌ಡಿಎಫ್ ಅಭ್ಯರ್ಥಿ ಕೆ.ಆರ್.ಜಯಾನಂದ 21,212 (ಶೇ.11.29) ಮತಗಳನ್ನಷ್ಟೆ ಪಡೆದಿದ್ದಾರೆ. ಹಿಂದೆಲ್ಲ ಸಿಪಿಎಂ ಸತತವಾಗಿ ಗೆಲ್ಲುತ್ತ ಬಂದ ಕ್ಷೇತ್ರ ಇದಾಗಿತ್ತು. ಆಗ ಬಿಜೆಪಿ ಮತ್ತು ಸಿಪಿಎಂ ನಡುವೆ ಪೈಪೋಟಿ ಇರುತ್ತಿತ್ತು. ಆನಂತರ, ಯುಡಿಎಫ್ ಹೆಸರಲ್ಲಿ ಮುಸ್ಲಿಂ ಲೀಗ್ ಕ್ಷೇತ್ರವನ್ನು ಪಡೆದ ಬಳಿಕ ತ್ರಿಕೋನ ಸ್ಪರ್ಧೆಯಲ್ಲಿ ಗೆಲುವಿನ ಗೆರೆ ಬದಲಾಗಿತ್ತು. 

ಯಾವುದೇ ಕ್ಷೇತ್ರದಲ್ಲಿ ಅಭ್ಯರ್ಥಿ ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದವರಾಗಿದ್ದರೆ, 5 ಸಾವಿರ ರೂ. ಠೇವಣಿ ಇರಿಸಬೇಕು. ಆದರೆ ಯಾವುದೇ ಅಭ್ಯರ್ಥಿ ಆರನೇ ಒಂದು ಭಾಗದಷ್ಟು ಮತಗಳನ್ನು ಪಡೆಯದಿದ್ದರೆ, ಠೇವಣಿ ಹಣ ಸರಕಾರದ ಪಾಲಾಗುತ್ತದೆ. 

2010ರ ಚುನಾವಣೆ ಬಳಿಕ ಎಡರಂಗದ ಮತಗಳು ಕಡಿಮೆಯಾಗುತ್ತ ಬಿಜೆಪಿ ಮತ ಗಳಿಕೆ ಹೆಚ್ಚುತ್ತ ಹೋಗಿತ್ತು. ಆದರೆ ಪ್ರತಿ ಚುನಾವಣೆಯಲ್ಲು  35ರಿಂದ 40 ಸಾವಿರದಷ್ಟು ಮತಗಳು ಎಡರಂಗದ ಅಭ್ಯರ್ಥಿಗೆ ಬೀಳುತ್ತಿದ್ದವು. ಕಳೆದ ಬಾರಿ, ಮಂಜೇಶ್ವರ ಕ್ಷೇತ್ರದಲ್ಲಿ ಎಲ್‌ಡಿಎಫ್ 40,639 ಮತಗಳನ್ನು ಪಡೆದಿತ್ತು. ಈ ಬಾರಿ ಎಡರಂಗದ ಬಹುಪಾಲು ಮತಗಳನ್ನು ಯುಡಿಎಫ್ ಸೆಳೆದುಕೊಂಡಿದ್ದು ಇಡೀ ರಾಜ್ಯದಲ್ಲೇ ಹೀನಾಯ ಸೋಲನ್ನು ಎಡರಂಗ ಕಾಣುವಂತಾಗಿತ್ತು. ವಿಚಿತ್ರ ಅಂದರೆ, ಜಯಾನಂದ ಅವರ ಸ್ವಂತ ಬೂತ್‌ನಲ್ಲಿಯೂ ಕನಿಷ್ಠ ಮತಗಳಷ್ಟೆ ಬಿದ್ದವು. ಮಂಜೇಶ್ವರದ ಪಂಚಾಯಿತಿ ವ್ಯಾಪ್ತಿಯ ವಾಮಂಜೂರು ಜಿಎಲ್‌ ಪಿ ಶಾಲೆಯ ಬೂತ್ ಸಂಖ್ಯೆ 35ರಲ್ಲಿ ಲೀಗಿನ ಅಶ್ರಫ್ 661 ಮತಗಳನ್ನು ಪಡೆದರೆ, ಜಯಾನಂದ ಕೇವಲ 93 ಮತಗಳನ್ನು ಪಡೆದರು. ಬಿಜೆಪಿಯ ಕೆ.ಸುರೇಂದ್ರನ್ 164 ಮತಗಳನ್ನು ಪಡೆದಿದ್ದಾರೆ.

ಇದಲ್ಲದೆ, ಬಿಜೆಪಿಗೆ ಅತ್ಯಧಿಕ 631 ಪೋಸ್ಟಲ್ ಮತಗಳು ಲಭಿಸಿದ್ದೂ ಈ ಸಲದ ವಿಶೇಷ. ಲೀಗಿನ ಎ.ಕೆ.ಎಂ.‌ ಅಶ್ರಫ್ 478,  ಕೆ.ಆರ್.ಜಯಾನಂದ 190 ಅಂಚೆ ಮತಗಳನ್ನು ಪಡೆದಿದ್ದಾರೆ.‌ ಇಡೀ ಮಂಜೇಶ್ವರ ಕ್ಷೇತ್ರದಲ್ಲಿ ಸಿಪಿಎಂ ಅಭ್ಯರ್ಥಿ ಕೆ.ಆರ್.ಜಯಾನಂದ ಪುತ್ತಿಗೆ ಪಂಚಾಯಿತಿ ಅಂಗಡಿಮೊಗರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಬೂತ್ ಸಂಖ್ಯೆ 191ರಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದಾರೆ. ಅಲ್ಲಿ ಯುಡಿಎಫ್ ಅಭ್ಯರ್ಥಿ ಎ.ಕೆ.ಎಂ. ಅಶ್ರಫ್ 147 ಬೂತ್ ಹಾಗೂ ಎನ್‌ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ 81 ಬೂತ್‌ಗಳಲ್ಲಿ ಅತಿ ಹೆಚ್ಚು ಮತ ಪಡೆದಿದ್ದಾರೆ. 

ಎಡರಂಗದ ಮತ ಗಳಿಕೆಯಲ್ಲೇ ಇಳಿಕೆಯಾಗಿದ್ದು ಒಟ್ಟು 229 ಬೂತ್‌ಗಳಲ್ಲಿ ಎಲ್‌ ಡಿಎಫ್ ಕೇವಲ 77 ಬೂತ್ ಗಳಲ್ಲಿ ಮಾತ್ರ ಮೂರು ಅಂಕೆಗಳನ್ನು ದಾಟಿದೆ. ಸಿಪಿಎಂ ಪ್ರಭಾವ ಹೆಚ್ಚಿರುವ ಪುತ್ತಿಗೆ, ಪೈವಳಿಕೆ ಪಂಚಾಯಿತಿಗಳಲ್ಲೂ ಸಿಪಿಎಂ ಮತಗಳು ಭಾರೀ ಪ್ರಮಾಣದಲ್ಲಿ ಸೋರಿಕೆಯಾಗಿರುವುದು ಬೂತ್ ಮಟ್ಟದ ಅಂಕಿ ಅಂಶಗಳಲ್ಲಿ ಕಂಡುಬಂದಿದೆ. ಒಟ್ಟು ಬೆಳವಣಿಗೆ ನೋಡಿದರೆ, ಸಿಪಿಎಂ ಮತ ಬ್ಯಾಂಕ್ ಆಗಿದ್ದ ಪ್ರದೇಶಗಳು ಈ ಬಾರಿ ಯುಡಿಎಫ್ ಪರವಾಗಿ ಮತ ಚಲಾಯಿಸಿದ್ದು ಸ್ಪಷ್ಟವಾಗಿದೆ.