Mangalore Accident: ಬಜತ್ತೂರಿನಲ್ಲಿ ಬೈಕ್ - ಲಾರಿ ಮುಖಾಮುಖಿ ಡಿಕ್ಕಿ ; ಉಪ್ಪಿನಂಗಡಿ ಕಾಲೇಜು ವಿದ್ಯಾರ್ಥಿ ಸ್ಥಳದಲ್ಲೇ ಮೃತ್ಯು, ಗೆಳತಿ ಗಂಭೀರ 

29-04-26 11:05 pm       HK News Staffer   ಕರಾವಳಿ

ಉಪ್ಪಿನಂಗಡಿ ಸಮೀಪದ ಬಜತ್ತೂರು ಎಂಬಲ್ಲಿ ಬೈಕ್ - ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಕಾಲೇಜು ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.‌ 

ಪುತ್ತೂರು, ಎಪ್ರಿಲ್ 29: ಉಪ್ಪಿನಂಗಡಿ ಸಮೀಪದ ಬಜತ್ತೂರು ಎಂಬಲ್ಲಿ ಬೈಕ್ - ಲಾರಿ ಮುಖಾಮುಖಿ ಡಿಕ್ಕಿಯಾಗಿದ್ದು ಬೈಕ್ ಸವಾರ ಕಾಲೇಜು ವಿದ್ಯಾರ್ಥಿಯೊಬ್ಬ ಸ್ಥಳದಲ್ಲೇ ಮೃತಪಟ್ಟ ಘಟನೆ ನಡೆದಿದೆ.‌ 

ಉಪ್ಪಿನಂಗಡಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ (21) ಮೃತಪಟ್ಟ ಯುವಕ. ಕಾಲೇಜಿನ ಗೆಳೆಯರು ಮತ್ತು ಸಹಪಾಠಿ ವಿದ್ಯಾರ್ಥಿನಿಯರು ಪರಿಚಯದ ವ್ಯಕ್ತಿಯೊಬ್ಬರ ಮದುವೆಗೆಂದು ಬೈಕಿನಲ್ಲಿ ತೆರಳಿದ್ದರು. ಮದುವೆ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದಾಗ ಕಾರ್ತಿಕ್ ಮತ್ತು ನೇಹಾ ಒಂದೇ ಬೈಕಿನಲ್ಲಿ ಬರುತ್ತಿದ್ದರು. ‌ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ಎದುರಿನಿಂದ ಬಂದ ಲಾರಿಗೆ ಬೈಕ್ ಅತಿ ವೇಗದಿಂದ ಡಿಕ್ಕಿಯಾಗಿದ್ದು ಸವಾರ ಮತ್ತು ಸಹ ಸವಾರಿಣಿ ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.‌ 

ರಸ್ತೆಗೆ ಬಿದ್ದ ಕಾರ್ತಿಕ್ ತೀವ್ರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಪಘಾತದಲ್ಲಿ ನೇಹಾ ತಲೆ ಮತ್ತು ಕಾಲಿಗೆ ತೀವ್ರ ಗಾಯಗೊಂಡಿದ್ದು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಾರ್ತಿಕ್, ಉಪ್ಪಿನಂಗಡಿಯ ಶಿವಕುಮಾರ್ ಅವರ ಏಕೈಕ ಪುತ್ರನಾಗಿದ್ದು ಬಿಬಿಎ ಅಂತಿಮ ವರ್ಷದಲ್ಲಿ ಕಲಿಯುತ್ತಿದ್ದರು.‌ ನೇಹಾ ಹಿರೇಬಂಡಾಡಿ ನಿವಾಸಿಯಾಗಿದ್ದು ಅಂತಿಮ ಬಿಎ ವಿದ್ಯಾರ್ಥಿನಿಯಾಗಿದ್ದಾಳೆ.