ಪುತ್ತೂರು ಜಾತ್ರೆಗೆ ಅಡ್ಡಿ ನೆಪ ; ಏಕಾಏಕಿ ಖಾಸಗಿ ಕಟ್ಟಡ ಕೆಡವಿದ ಶಾಸಕ ಅಶೋಕ ರೈ, ಕೋರ್ಟ್ ಅಧೀನದ ಕಟ್ಟಡ ಕೆಡವಿದ್ದು ನ್ಯಾಯಾಂಗ ನಿಂದನೆ, ಕಾನೂನು ಸಂಘರ್ಷಕ್ಕಿಳಿದ ಕೇದಿಗೆ ಕುಟುಂಬಸ್ಥರು

21-04-26 06:33 pm       HK News Staffer   ಕರಾವಳಿ

ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ ಸ್ವತಃ ಜೆಸಿಬಿ ಚಲಾಯಿಸಿ ಖಾಸಗಿ ಕಟ್ಟಡವನ್ನು ನೆಲಸಮ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಜಾಗ ಸಾಲುತ್ತಿಲ್ಲ ಎಂಬ ನೆಪದಲ್ಲಿ ಖಾಸಗಿ ಕಟ್ಟಡವನ್ನು ರಾತ್ರೋರಾತ್ರಿ ಒಡೆದು ಹಾಕಿದ್ದು ಶಾಸಕರು ಮತ್ತು ದೇವಸ್ಥಾನ ಕಮಿಟಿಯವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ.

ಮಂಗಳೂರು, ಎಪ್ರಿಲ್ 21: ಪುತ್ತೂರಿನ ಕಾಂಗ್ರೆಸ್ ಶಾಸಕ ಅಶೋಕ್ ರೈ ಸ್ವತಃ ಜೆಸಿಬಿ ಚಲಾಯಿಸಿ ಖಾಸಗಿ ಕಟ್ಟಡವನ್ನು ನೆಲಸಮ ಮಾಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಗೆ ಜಾಗ ಸಾಲುತ್ತಿಲ್ಲ ಎಂಬ ನೆಪದಲ್ಲಿ ಖಾಸಗಿ ಕಟ್ಟಡವನ್ನು ರಾತ್ರೋರಾತ್ರಿ ಒಡೆದು ಹಾಕಿದ್ದು ಶಾಸಕರು ಮತ್ತು ದೇವಸ್ಥಾನ ಕಮಿಟಿಯವರ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. 

ಪುತ್ತೂರು ಜಾತ್ರೆಯ ನಡುವಲ್ಲೇ ದೇವರ ವಲಸರಿ ಹೋಗಲು ತೊಂದರೆಯಾಗುತ್ತದೆ ಎಂದು ಹೇಳಿ ಅಲ್ಲಿದ್ದ ಖಾಸಗಿ ಕಟ್ಟಡವನ್ನು ಶಾಸಕ ಅಶೋಕ ರೈ ನೇತೃತ್ವದಲ್ಲಿ ರಾತ್ರೋರಾತ್ರಿ ಒಡೆದು ನೆಲಸಮ ಮಾಡಲಾಗಿದೆ. ವಿಚಿತ್ರ ಅಂದರೆ, ಸ್ವತಃ ಜೆಸಿಬಿಯನ್ನು ತಾನೇ ಚಲಾಯಿಸಿ ಶಾಸಕರು ಖಾಸಗಿ ಕಟ್ಟಡ ನೆಲಸಮ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಸಿಎಂ ಯೋಗಿ ಆದಿತ್ಯನಾಥ್ ಸರ್ಕಾರಿ ಜಾಗ ಅತಿಕ್ರಮಿಸಿದವರ ಕಟ್ಟಡಗಳನ್ನು ಕೆಡವಿದಂತೆ ಶಾಸಕ ಅಶೋಕ ರೈಯವರೂ ಬುಲ್ಡೋಜರ್ ಬಾಬಾ ರೀತಿ ವರ್ತಿಸಿ ಸುದ್ದಿಯಾಗಿದ್ದಾರೆ. 

ಸದ್ರಿ ಖಾಸಗಿ ಕಟ್ಟಡ ಇದ್ದ ಜಾಗ ಬಂಟ್ವಾಳದ ಕೇದಿಗೆಯ ಬ್ರಾಹ್ಮಣ ಕುಟುಂಬಸ್ಥರಿಗೆ ಸೇರಿದ್ದು, ಹಿಂದಿನಿಂದಲೂ ಜಾತ್ರೆಯ ಸಂದರ್ಭದಲ್ಲಿ ಕಟ್ಟಡ ಮುಂಭಾಗದಲ್ಲಿ ಉಳ್ಳಾಲ್ತಿ ದೇವಿಗೆ ಕಟ್ಟೆಪೂಜೆ ಆಗುತ್ತಿತ್ತು. ಕಟ್ಟಡ ಬ್ರಾಹ್ಮಣ ಕುಟುಂಬದ ಸ್ವಾಧೀನದಲ್ಲಿದ್ದರೂ, ಅದರ ಪಾಲುಪಟ್ಟಿ ಕುರಿತಾಗಿ ಬಂಟ್ವಾಳ ಕೋರ್ಟಿನಲ್ಲಿ ವ್ಯಾಜ್ಯ ಇದೆ. 1951ರಿಂದಲೂ ವ್ಯಾಜ್ಯ ಇದ್ದರೂ ಅಲ್ಲಿನ ಕಟ್ಟಡದಲ್ಲಿ ಬಾಡಿಗೆ ಇದ್ದವರನ್ನು ಇತ್ತೀಚೆಗೆ ಎಬ್ಬಿಸಲಾಗಿತ್ತು. ಆದರೆ ಹಳೆ ವಾಸ್ತುಶೈಲಿಯ ಕಟ್ಟಡ ಮಾತ್ರ ಹಾಗೆಯೇ ಉಳಿದಿತ್ತು. ಮೊನ್ನೆ ಎಪ್ರಿಲ್ 14ರಂದು ಶಾಸಕ ಅಶೋಕ್ ರೈ ನೇತೃತ್ವದಲ್ಲಿ ಏಕಾಏಕಿ ಕಟ್ಟಡವನ್ನು ಒಡೆದು ಹಾಕಿದ್ದು ಕೋರ್ಟ್, ಕಾನೂನನ್ನು ಗಾಳಿಗೆ ತೂರಿದ್ದಾರೆ. ಆದರೆ ಶಾಸಕರು ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದು ದೇವಸ್ಥಾನಕ್ಕಾಗಿ ಎಷ್ಟು ಕೇಸು ಬಂದರೂ ಎದುರಿಸುತ್ತೇನೆ, ಬಂಟ್ವಾಳ ಕೋರ್ಟಿನಲ್ಲಿ ಸದ್ರಿ ಕಟ್ಟಡ ನೆಲಸಮಕ್ಕೆ ಆದೇಶ ಆಗಿದೆ ಎಂದು ಹೇಳಿದ್ದಾರೆ. 

ಸದ್ರಿ ಕಟ್ಟಡವಿದ್ದ ಜಾಗವನ್ನು ನೋಡಿಕೊಳ್ಳಲು ಕೇದಿಗೆ ಕುಟುಂಬದ ಡಾ.ಅರವಿಂದ ರಾವ್ ಅವರನ್ನು ಕೋರ್ಟಿನಿಂದಲೇ ರಿಸೀವರ್ ಆಗಿ ನೇಮಿಸಲಾಗಿತ್ತು. ಇನ್ನೇನು ಕೋರ್ಟ್ ಡಿಕ್ರಿ ಬರುತ್ತೆ ಎನ್ನುವಾಗಲೇ ಶಾಸಕ ಅಶೋಕ ರೈ ಅತಿಕ್ರಮಣ ಮಾಡಿ ಹಳೆಯ ಕಟ್ಟಡವನ್ನು ನೆಲಸಮ ಮಾಡಿದ್ದು, ಕೇದಿಗೆ ಮನೆಯವರನ್ನು ಕೆರಳಿಸಿದೆ. ಅರವಿಂದ ರಾವ್ ಶಾಸಕ ಅಶೋಕ ರೈ ಮತ್ತು ದೇವಸ್ಥಾನ ಕಮಿಟಿ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್ ವಿರುದ್ಧ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ. ದೇವಿಯ ಕಟ್ಟೆಪೂಜೆ ಮೊದಲಿನಿಂದಲೂ ಆಗುತ್ತಿದ್ದು, ಯಾವುದೇ ತೊಂದರೆಯಾಗಿಲ್ಲ. ಈಗ ಯಾಕೆ ತೊಂದರೆ ಆಗಬೇಕು. ಶಾಸಕರು ನಮಗೆ ಯಾವುದೇ ಮಾಹಿತಿ ನೀಡದೆ ಏಕಾಏಕಿ ಒಡೆದು ಹಾಕಿದ್ದು ಕೋರ್ಟ್ ಆದೇಶ ಉಲ್ಲಂಘಿಸಿದ್ದಾರೆ. ಅಲ್ಲಿನ ವ್ಯಾಜ್ಯ ಇನ್ನೂ ಕೋರ್ಟಿನಲ್ಲಿದ್ದು, ಇನ್ನೂ ಆದೇಶ ಬಂದಿಲ್ಲ ಎಂದು ಅರವಿಂದ ರಾವ್ ಹೇಳಿದ್ದಾರೆ.

ಸದ್ರಿ ಜಾಗದಲ್ಲಿ ದೇವರ ಜಾತ್ರೆ ಸಂದರ್ಭದಲ್ಲಿ 30 ಸಾವಿರಕ್ಕೂ ಹೆಚ್ಚು ಜನ ಸೇರುತ್ತಾರೆ, ಇಲ್ಲಿ ಹಳೆಯ ಕಟ್ಟಡ ಇರುವುದು ಸೂಕ್ತವಲ್ಲ. ಹಾಗಾಗಿ ಒಡೆದು ಹಾಕಲಾಗಿದೆಯೆಂದು ದೇವಸ್ಥಾನ ಕಮಿಟಿ ಅಧ್ಯಕ್ಷರು ಸ್ಪಷ್ಟನೆ ನೀಡಿದ್ದಾರೆ. ಆದರೆ ಕೋರ್ಟ್ ಅಧೀನದಲ್ಲಿರುವ ಕಟ್ಟಡವನ್ನು ಏಕಾಏಕಿ ನೆಲಸಮ ಮಾಡಿರುವುದು ಹೊಸ ವಿವಾದಕ್ಕೆ ತಿರುಗಿದೆ. ಈ ಬಗ್ಗೆ ಕೋರ್ಟಿಗೂ ದೂರು ನೀಡುವುದಾಗಿ ಅರವಿಂದ ರಾವ್ ತಿಳಿಸಿದ್ದಾರೆ.