ಗುಡ್ಡದಲ್ಲಿ ಹೊಳೆ ಬರುತ್ತಾ? ನಿವೇಶನ ರಹಿತರ ಜಮೀನು ಹೊಳೆ ಪರಂಬೋಕೆಂದು ತಹಶೀಲ್ದಾರ್ ದಾರಿ ತಪ್ಪಿಸುತ್ತಿದ್ದಾರೆ ; ಕೋಟೆಕಾರು ಪ.ಪಂ ಸಭೆಯಲ್ಲಿ ರೆಬೆಲ್ ಕೌನ್ಸಿಲರ್ ಸುಜಿತ್ ಮಾಡೂರು ಮತ್ತೆ ಹೋರಾಟ

25-03-26 12:15 pm       HK News Staffer   ಕರಾವಳಿ

ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಕಾದಿರಿಸಿದ ಜಮೀನನ್ನು ತಹಶೀಲ್ದಾರ್ ಅವರು ಹೊಳೆ ಪರಂಬೋಕೆಂದು ಹೊಸ ತಗಾದೆ ತೆಗೆದು ದಾರಿ ತಪ್ಪಿಸುತ್ತಿದ್ದಾರೆ. ಗುಡ್ಡ ಪ್ರದೇಶಗಳಲ್ಲಿ ಹೊಳೆ ಪರಂಬೋಕು ಬರಲು ಹೇಗೆ ಸಾಧ್ಯ. ಇದನ್ನೆಲ್ಲ ಮುಖ್ಯಾಧಿಕಾರಿಗಳು ಪರಿಶೀಲಿಸಬೇಕಲ್ಲವೇ ಎಂದು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಕೋಟೆಕಾರು ಪ.ಪಂ ರೆಬೆಲ್ ಕೌನ್ಸಿಲರ್ ಸುಜಿತ್ ಮಾಡೂರು ಪ್ರಶ್ನಿಸಿದ್ದಾರೆ.

ಉಳ್ಳಾಲ, ಮಾ.24: ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ನಿವೇಶನ ರಹಿತರಿಗೆ ಕಾದಿರಿಸಿದ ಜಮೀನನ್ನು ತಹಶೀಲ್ದಾರ್ ಅವರು ಹೊಳೆ ಪರಂಬೋಕೆಂದು ಹೊಸ ತಗಾದೆ ತೆಗೆದು ದಾರಿ ತಪ್ಪಿಸುತ್ತಿದ್ದಾರೆ. ಗುಡ್ಡ ಪ್ರದೇಶಗಳಲ್ಲಿ ಹೊಳೆ ಪರಂಬೋಕು ಬರಲು ಹೇಗೆ ಸಾಧ್ಯ. ಇದನ್ನೆಲ್ಲ ಮುಖ್ಯಾಧಿಕಾರಿಗಳು  ಪರಿಶೀಲಿಸಬೇಕಲ್ಲವೇ ಎಂದು ಬಿಜೆಪಿ ಪಕ್ಷದಿಂದ ಉಚ್ಚಾಟಿಸಲ್ಪಟ್ಟ ಕೋಟೆಕಾರು ಪ.ಪಂ ರೆಬೆಲ್ ಕೌನ್ಸಿಲರ್ ಸುಜಿತ್ ಮಾಡೂರು ಪ್ರಶ್ನಿಸಿದ್ದಾರೆ.

ಮಂಗಳವಾರ ಕೋಟೆಕಾರು ಪಟ್ಟಣ ಪಂಚಾಯತ್ ಸಾಮಾನ್ಯ ಸಭೆ ಅಧ್ಯಕ್ಷೆ ದಿವ್ಯಾ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ನಡೆಯಿತು. ನಿವೇಶನ ರಹಿತರ ಅರ್ಜಿ ವಿಲೇವಾರಿ ಮಾಡುವಂತೆ ಸಾಮಾನ್ಯ ಸಭೆಗಳಲ್ಲಿ ನಿರಂತರ ಧ್ವನಿಯೆತ್ತಿ ಅಧಿಕಾರಿಗಳಿಗೆ ಕ್ಲಾಸ್ ತೆಗೆದು ಆಡಳಿತ ಬಿಜೆಪಿ ಪಕ್ಷಕ್ಕೆ ಬಿಸಿ ಮುಟ್ಟಿಸಿ ಪಕ್ಷದಿಂದಲೇ ಉಚ್ಚಾಟಿಸಲ್ಪಟ್ಟ ಕೌನ್ಸಿಲರ್ ಸುಜಿತ್ ಅವರು ಮತ್ತೆ ಸರಕಾರಿ ನಿವೇಶನದ ಗಡಿ ಗುರುತಿನ ಬಗ್ಗೆ ಧ್ವನಿ ಎತ್ತಿ ಹೋರಾಟ ಮುಂದುವರೆಸಿದ್ದಾರೆ. 

ಸಭೆಯಲ್ಲಿ ಮಾತನಾಡಿದ ಅವರು ಸಾಮಾನ್ಯ ಸಭೆಗಳಲ್ಲಿ ಮುಖ್ಯಾಧಿಕಾರಿಯ ಪಾತ್ರವೇನು?ಸಾಮಾನ್ಯ ಸಭೆಗಳಲ್ಲಿ ಆಗುವ ನಿರ್ಣಯಗಳ ಅನುಷ್ಠಾನಕ್ಕಾಗಿ ನಾವು ತಹಶೀಲ್ದಾರ್ ಬಳಿ ಹೋಗಿ ಅಲವತ್ತುಕೊಂಡರೂ ಮುಖ್ಯಾಧಿಕಾರಿಗಳು ಅಲ್ಲಿಗೆ ಬರಲ್ಲ. ಒಂದೂವರೆ ವರ್ಷಗಳ ಹಿಂದೆ ಕೈಗೊಂಡ ಸರ್ಕಾರಿ ಜಾಗದ ಗಡಿ ಗುರುತು ನಿರ್ಣಯ ಇದುವರೆಗೆ ಪಾಲನೆ ಆಗದಿರಲು ಕಾರಣ ಏನು? ಅಧಿಕಾರಿಗಳಲ್ಲಿ ಇಷ್ಟೊಂದು ಉದಾಸೀನ ಪೃವೃತ್ತಿಯಿದ್ದರೆ ನಾವು ಸಾಮಾನ್ಯ ಸಭೆಗಳಲ್ಲಿ ಚರ್ಚೆ, ನಿರ್ಣಯಗಳನ್ನ ಮಾಡಿ ಏನು ಫಲ ಇದೆ. ಕೌನ್ಸಿಲರ್ ಗಳಿಗೆ ಮಾಸಿಕ 800 ರೂ. ಭತ್ಯೆ ಸಿಗುತ್ತದೆ. ಅಧಿಕಾರಿಗಳು ಸರಕಾರಿ ಸಂಬಳ ಎಣಿಸಿದರೂ ನೀವು ಮಾಡಬೇಕಾದ ಕೆಲಸಗಳನ್ನು ನಾವು ಮಾಡುವ ಅನಿವಾರ್ಯತೆ ಬಂದೊದಗಿದೆಯೆಂದು ಅಸಮಾಧಾನ ವ್ಯಕ್ತಪಡಿಸಿದರು.

ಸರ್ಕಾರಿ ಜಾಗ ಗಡಿಗುರುತು ಬಗ್ಗೆ ನಾವು ತಹಸೀಲ್ದಾರ್ ಗೆ ಪತ್ರ ಬರೆದಿದ್ದೇವೆ, ಎಷ್ಟು ದಿನಗಳಲ್ಲಿ ಕೆಲಸ ಆಗುತ್ತದೆ ಎನ್ನುವುದು ತಹಸೀಲ್ದಾರ್ ಅವರಿಗೆ ಬಿಟ್ಟ ವಿಚಾರ. ಅಧ್ಯಕ್ಷರು, ಸದಸ್ಯರನ್ನು ತಹಸೀಲ್ದಾರ್ ಬಳಿ ನಾನು ಕಳಿಸಿಲ್ಲವೆಂದು ಮುಖ್ಯಾಧಿಕಾರಿ ಮಾಲಿನಿ ಸ್ಪಷ್ಟನೆ ನೀಡಿದರು. ಸ.ನಂ.222ರ 9.94 ಎಕ್ರೆಯಲ್ಲಿ 1.42 ಎಕರೆ ಜಮೀನನ್ನು 2019ರಲ್ಲಿ ಉಳ್ಳಾಲ‌ ಕಡಲ್ಕೊರೆತ ನಿರಾಶ್ರಿತರಿಗೆ ಮೀಸಲಿಡಲಾಗಿದೆ. 94‌ ಮನೆ‌ ನಿವೇಶನ ಪೈಕಿ 92 ಅನ್ನು ಅಲ್ಪಸಂಖ್ಯಾತರಿಗೆ ಹಾಗೂ ಕೇವಲ 2 ನಿವೇಶನವನ್ನು ಬಹುಸಂಖ್ಯಾತರಿಗೆ ನೀಡಲಾಗಿದ್ದು ಆವಾಗ ಸುಜಿತ್ ಮಾಡೂರು ಎಲ್ಲಿದ್ದರೆಂದು ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ. ವಾಸ್ತವದಲ್ಲಿ 2022ರಲ್ಲೇ ಸರ್ಕಾರ ನಿವೇಶನ ಹಿಂದಕ್ಕೆ ಪಡೆದಿದ್ದರೂ ಪ.ಪಂ.ನಿಂದ ಸುಳ್ಳು ಮಾಹಿತಿ ಕೊಡುವ ಉದ್ದೇಶವೇನೆಂದು ಪ್ರಶ್ನಿಸಿದರು. ಸುಜಿತ್ ಜೊತೆ ಪಕ್ಷೇತರ ಸದಸ್ಯ ಹರೀಶ್ ರಾವ್ ಕೂಡಾ ಧ್ವನಿಗೂಡಿಸಿ, ಇದೊಂದು ಗಂಭೀರ ವಿಚಾರ. ಸಂತ್ರಸ್ತರಿಗೆ ಮೀಸಲಿಟ್ಟ ಜಾಗದಲ್ಲಿ ನಿವೇಶನ ನೀಡಲಾಗಿದೆಯೇ ಎಂದು ಪ್ರಶ್ನಿಸಿದರು. ಈ ವಿಚಾರದಲ್ಲೇ ಸಭೆಯಲ್ಲಿ ಕೆಲ ಹೊತ್ತು ಚರ್ಚೆ ನಡೆಯಿತು.

ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಸುದ್ದಿಗಳಿಗೆ ಪಂಚಾಯತ್ ಆಡಳಿತ ಉತ್ತರಿಸಬೇಕಿಲ್ಲವೆಂದು ಅಧ್ಯಕ್ಷೆ ದಿವ್ಯ ಶೆಟ್ಟಿ ಹೇಳಿದರು. ಸಾರ್ವಜನಿಕರಿಗೆ ಯಾವುದೇ ತೊಂದರೆಗಳಾಗದಂತೆ ಬೀದಿ ನಾಯಿಗಳ ಆಶ್ರಯ ತಾಣಗಳನ್ನ ನಿರ್ಮಿಸಬೇಕಿದೆಯೆಂದು ಪ.ಪಂ ಸದಸ್ಯರಾದ ಹರೀಶ್ ರಾವ್ ಮಡ್ಯಾರ್ ಕಳಕಳಿ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಪಂಚಾಯತ್ ಆರೋಗ್ಯ ನಿರೀಕ್ಷಕ ವಿಕ್ರಂ ಅವರು ಸುಪ್ರೀಂ ಕೋರ್ಟ್ ಆದೇಶದ ಪ್ರಕಾರ ಪ್ರತಿಯೊಂದು ಸ್ಥಳೀಯ ಸಂಸ್ಥೆಗಳು ಕೂಡ ಆಯಾ ವ್ಯಾಪ್ತಿಯ ಬೀದಿ ನಾಯಿಗಳಿಗೆ ಆಶ್ರಯ ತಾಣಗಳನ್ನು ನಿರ್ಮಿಸುವುದು ಕಡ್ಡಾಯ ಎಂದರು. 

ಈ ಸಂದರ್ಭ ಫಲಾನುಭವಿಗಳಿಗೆ ಪೋಷಣಾ ಭತ್ಯೆ, ವೈದ್ಯಕೀಯ ವೆಚ್ಚ ಸಹಾಯಧನದ ಚೆಕ್ ವಿತರಿಸಲಾಯಿತು. ‌ಪ.ಪಂ ಉಪಾಧ್ಯಕ್ಷರಾದ ಪ್ರವೀಣ್ ಐ ಬಗಂಬಿಲ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಧೀರಜ್ ಕುಸಾಲ್ ನಗರ ಉಪಸ್ಥಿತರಿದ್ದರು.