CM Siddaramaiah, Kambala Bantwal: ರಮಾನಾಥ ರೈ ಐದು ಸಾವಿರ ಕೋಟಿ ಅನುದಾನ ತಂದರೂ ಚುನಾವಣೆಯಲ್ಲಿ ಸೋಲಿಸಿದ್ದು ತಪ್ಪು, 2028ರಲ್ಲಿ ಅತಿ ಹೆಚ್ಚು ಮತಗಳಿಂದ ಗೆಲ್ಲಿಸಬೇಕು ; ಬಂಟ್ವಾಳ ಕಂಬಳದಲ್ಲಿ ಸಿಎಂ ಸಿದ್ದರಾಮಯ್ಯ 

07-03-26 11:31 pm       HK News Desk   ಕರಾವಳಿ

2013-18ರ ನಮ್ಮ ಸರ್ಕಾರದ ಅವಧಿಯನ್ನು ಸುವರ್ಣ ಯುಗವೆಂದು ರಮಾನಾಥ ರೈಯವರು ಕರೆದಿದ್ದಾರೆ. ಯಾಕಂದ್ರೆ, ಬಂಟ್ವಾಳ ಕ್ಷೇತ್ರಕ್ಕೆ ಈ ಅವಧಿಯಲ್ಲಿ ಐದು ಸಾವಿರ ಕೋಟಿ ಅನುದಾನ ತಂದಿದ್ದಾರೆ. ...

ಮಂಗಳೂರು, ಮಾರ್ಚ್ 7: 2013-18ರ ನಮ್ಮ ಸರ್ಕಾರದ ಅವಧಿಯನ್ನು ಸುವರ್ಣ ಯುಗವೆಂದು ರಮಾನಾಥ ರೈಯವರು ಕರೆದಿದ್ದಾರೆ. ಯಾಕಂದ್ರೆ, ಬಂಟ್ವಾಳ ಕ್ಷೇತ್ರಕ್ಕೆ ಈ ಅವಧಿಯಲ್ಲಿ ಐದು ಸಾವಿರ ಕೋಟಿ ಅನುದಾನ ತಂದಿದ್ದಾರೆ. ಆದರೂ ಅವರನ್ನು ಇಲ್ಲಿನ ಜನ ಯಾಕೆ ಸೋಲಿಸಿದ್ರಿ ಅಂತ ಗೊತ್ತಾಗಲ್ಲ. ‌2028ರಲ್ಲಿ ರಮಾನಾಥ ರೈ ಮತ್ತೊಮ್ಮೆ ಚುನಾವಣೆಗೆ ನಿಲ್ತಾರೆ. ಆಗ ನೀವು ಹೆಚ್ಚು ಮತಗಳಿಂದ ರಮಾನಾಥ್ ರೈ ಗೆಲ್ಲಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ‌

ಬಂಟ್ವಾಳದ 15ನೇ ವರ್ಷದ ಮೂಡೂರು ಪಡೂರು ಜೋಡುಕರೆ ಕಂಬಳದಲ್ಲಿ ಭಾಗವಹಿಸಿದ ಸಿಎಂ ಸಿದ್ಧರಾಮಯ್ಯ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಬಂಟ್ವಾಳ ಕ್ಷೇತ್ರಕ್ಕೆ ರಮಾನಾಥ ರೈ ನೀಡಿದ ಕೊಡುಗೆಗಳನ್ನು ಸ್ಮರಿಸಿದರು.‌ 2013-18ರಲ್ಲಿ ಮುಖ್ಯಮಂತ್ರಿ ಆದ ಸಮಯದಲ್ಲಿ ಸರ್ಕಾರ ಹಣಕಾಸಿನ ಬಿಕ್ಕಟ್ಟನ್ನು ಎದುರಿಸಿರಲಿಲ್ಲ. ಆ ಸಂದರ್ಭದಲ್ಲಿ ರಮಾನಾಥ ರೈ ಮಂತ್ರಿಯಾಗಿದ್ದರು. ಆ ಕಾಲವನ್ನು ರಮಾನಾಥ ರೈ ಸುವರ್ಣ ಯುಗ ಅಂತಾ ಕರೆದಿದ್ದಾರೆ. 

ಅದು ನಿಜವಾಗಲೂ ಸುವರ್ಣ ಯುಗನೇ.‌ ಆ ಸಂದರ್ಭದಲ್ಲಿ ಬಂಟ್ವಾಳ ಕ್ಷೇತ್ರಕ್ಕೆ ರೈಯವರು ಐದು ಸಾವಿರ ಕೋಟಿ ರೂಪಾಯಿ ತಂದ್ದಿದ್ದರು.‌ ಆದ್ರೂ ಅವರು ಚುನಾವಣೆಯಲ್ಲಿ ಸೋತ್ರು, ಅವರು ಸೋಲಬಾರದಿತ್ತು.‌ ಆದರೂ ಅವರನ್ನು ಕ್ಷೇತ್ರದ ಜನ ಸೋಲಿಸಿದ್ರು.‌ ಅವರನ್ನು ಸೋಲಿಸಿದ್ದು ನ್ಯಾಯ ಅಲ್ಲ ಅಂತಾ ನನ್ನ ಅಭಿಪ್ರಾಯ. ಇಷ್ಟೊಂದು ಅನುದಾನ ತಂದ್ರೂ ರೈಯನ್ನು ಸೋಲಿಸಿದ್ದು ತಪ್ಪು ಎಂದು ಸಿದ್ದರಾಮಯ್ಯ ಹೇಳಿದರು. ‌

ನಿನ್ನೆ ಬಜೆಟ್ ಮಂಡಿಸಿ ಇವತ್ತು ಬಂಟ್ವಾಳ ಕಂಬಳಕ್ಕೆ ಬರೋಕೆ ಆಗುತ್ತಾ ಇಲ್ವಾ ಎಂಬ ಅನುಮಾನ ಇತ್ತು.‌ ಬೆಳಗ್ಗೆ ಇಡೀ ಕಾರ್ಯಕ್ರಮಗಳನ್ನು ಮುಗಿಸಿ ಬಂಟ್ವಾಳಕ್ಕೆ ಬಂದಿದ್ದೇನೆ.‌ ಎಲ್ರೂ ಕಂಬಳ ನೋಡೋಕೆ ಬಂದಿದ್ದೀರಾ.. ನನ್ನನ್ನು ನೋಡೋಕೆ ಬಂದಿದ್ದೀರಾ ಗೊತ್ತಿಲ್ಲ. ನೀವು ಕಂಬಳ ನೋಡೋಕೆ ಬಂದಿದ್ದೀರಿ ತಾನೇ ? ನನ್ನನ್ನು ನೋಡೋಕೆ ನಾನೇನು ಸಿನಿಮಾ ನಟನಾ? ನಾನು ನಿಶ್ಶಕ್ತ ಜನರ ಸೇವೆ ಮಾಡುತ್ತಿದ್ದೇನೆ ಅಷ್ಟೇ. ಐದು ಗ್ಯಾರಂಟಿ ಯೋಜನೆಗಳ‌ ಉದ್ದೇಶ ಎಲ್ಲರಿಗೂ ಆರ್ಥಿಕ ಶಕ್ತಿ ಇರಬೇಕು ಅನ್ನೋದು.‌ 2028ಕ್ಕೂ ನಾವೇ ಅಧಿಕಾರಕ್ಕೆ ಬರುತ್ತೇವೆ. ನಾವು ಅಧಿಕಾರದಲ್ಲಿ ಇರುವಾಗ ಕಂಬಳಕ್ಕೆ ಎಲ್ಲಾ ಪ್ರೋತ್ಸಾಹ ನೀಡಿದ್ದೇವೆ. ಮುಂದೆಯೂ ಕಂಬಳಕ್ಕೆ ಪ್ರೋತ್ಸಾಹ ನೀಡುತ್ತೇವೆ.‌ 

ಕಂಬಳ ಅತ್ಯಂತ ಜನಪ್ರಿಯವಾದ ಕ್ರೀಡೆ, ಎಲ್ಲಾ ಜನರು ಭಾಗವಹಿಸುವ ಕ್ರೀಡೆ. ಕಂಬಳದ ಕೋಣಗಳನ್ನು ತಮ್ಮ ಮಕ್ಕಳ ರೀತಿ ಸಾಕುತ್ತಾರೆ. ವಯಸ್ಸಾದ ಬಳಿಕವೂ ಬಿಟ್ಟು ಕೊಡದೆ ಸಾಯುವ ವರೆಗೂ ಸಾಕುತ್ತಾರೆ‌‌. ಇದು ಕಂಬಳದಲ್ಲಿ ಕೋಣಗಳನ್ನು ಇಲ್ಲಿ‌ನ ಜನ ಎಷ್ಟು ಪ್ರೀತಿಸುತ್ತಾರೆಂಬುದನ್ಜು ತೋರಿಸುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು. ‌

Karnataka Chief Minister Siddaramaiah said that the defeat of senior Congress leader B. Ramanath Rai in the elections was a mistake despite the massive development funds he brought to the constituency. He urged people to elect Rai with the highest number of votes if he contests again in the 2028 elections.