ಮಂಗಳೂರು ರಿಫೈನರಿ ಸ್ಥಗಿತ ವದಂತಿ ತಳ್ಳಿಹಾಕಿದ ಎಂಆರ್‌ಪಿಎಲ್ ; ಸಹಜ ರೀತಿಯಲ್ಲೇ ಕಾರ್ಯ ನಿರ್ವಹಿಸ್ತಿದೆ, ತೈಲ ಕೊರತೆ ಇಲ್ಲವೆಂದು ಕಂಪನಿ ಸ್ಪಷ್ಟನೆ

07-03-26 10:17 pm       HK News Staffer   ಕರಾವಳಿ

ಗಲ್ಫ್ ಯುದ್ಧದ ಕಾರಣ ಕಚ್ಚಾ ತೈಲದ ಕೊರತೆಯಿಂದ ಎಂಆರ್ ಪಿಎಲ್ ಘಟಕದ ಕೆಲವು ರಿಫೈನರಿ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್‌ಪಿಎಲ್) ಸಂಪೂರ್ಣ ತಳ್ಳಿಹಾಕಿದ್ದು ರಿಫೈನರಿಯ ಎಲ್ಲ ಕಾರ್ಯಾಚರಣೆಗಳು ಸಹಜ ರೀತಿಯಲ್ಲೇ ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದೆ.

ಮಂಗಳೂರು, ಮಾರ್ಚ್ 07: ಗಲ್ಫ್ ಯುದ್ಧದ ಕಾರಣ ಕಚ್ಚಾ ತೈಲದ ಕೊರತೆಯಿಂದ ಎಂಆರ್ ಪಿಎಲ್ ಘಟಕದ ಕೆಲವು ರಿಫೈನರಿ ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳನ್ನು ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್  (ಎಂಆರ್‌ಪಿಎಲ್) ಸಂಪೂರ್ಣ ತಳ್ಳಿಹಾಕಿದ್ದು ರಿಫೈನರಿಯ ಎಲ್ಲ ಕಾರ್ಯಾಚರಣೆಗಳು ಸಹಜ ರೀತಿಯಲ್ಲೇ ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದೆ.

ಸಾಮಾಜಿಕ ಜಾಲತಾಣ ‘ಎಕ್ಸ್’ ನಲ್ಲಿ ಪ್ರಕಟವಾದ ಒಂದು ಪೋಸ್ಟ್‌ನಲ್ಲಿ ಗಲ್ಪ್ ಪ್ರದೇಶದ ಉದ್ವಿಗ್ನತೆಯಿಂದ ಕಚ್ಚಾ ತೈಲ ಸಾಗಣೆ ವಿಳಂಬವಾಗಿದ್ದು, ಮಂಗಳೂರಿನ 3 ಲಕ್ಷ ಬ್ಯಾರೆಲ್ ಸಾಮರ್ಥ್ಯದ ರಿಫೈನರಿಯ ಕೆಲವು ಘಟಕಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಸುದ್ದಿ ಹರಿದಾಡಿತ್ತು. ಆದರೆ ಈ ಮಾಹಿತಿ ಸಂಪೂರ್ಣ ತಪ್ಪಾಗಿದೆ ಎಂದು ಎಂಆರ್‌ಪಿಎಲ್ ತಿಳಿಸಿದೆ.

ಕಂಪನಿಯ ಪ್ರಕಟಣೆಯ ಪ್ರಕಾರ, ಈ ರೀತಿಯ ವದಂತಿಗಳು ವಾಸ್ತವಕ್ಕೆ ದೂರವಾಗಿದ್ದು ರಿಫೈನರಿ ಸಾಮಾನ್ಯವಾಗಿ ಕಾರ್ಯ ನಿರ್ವಹಿಸುತ್ತಿದೆ. ರಿಫೈನರಿ ಕಾರ್ಯಾಚರಣೆ ಮುಂದುವರಿಸಲು ಬೇಕಾದಷ್ಟು ಕಚ್ಚಾ ತೈಲವನ್ನು ಈಗಾಗಲೇ ವ್ಯವಸ್ಥೆ ಮಾಡಲಾಗಿದೆ ಎಂದು ಕಂಪನಿ ತಿಳಿಸಿದೆ.

ರಿಫೈನರಿಯಲ್ಲಿ ಯಾವುದೇ ಘಟಕವನ್ನು ಸ್ಥಗಿತಗೊಳಿಸಿಲ್ಲ ಹಾಗೂ ಸಹಜ ಸಾಮರ್ಥ್ಯದಲ್ಲೇ ಕಾರ್ಯ ನಿರ್ವಹಣೆ ಮುಂದುವರಿದಿದೆ ಎಂದು ಎಂಆರ್‌ಪಿಎಲ್ ಹೇಳಿದೆ. ತಪ್ಪು ಮಾಹಿತಿಗಳು ಹರಡದಂತೆ ಸಾರ್ವಜನಿಕರು ಎಚ್ಚರಿಕೆಯಿಂದ ಇರಬೇಕು ಎಂದು ಕಂಪನಿ ಮನವಿ ಮಾಡಿದೆ.

ಇದರ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಕೊರತೆ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ಇಂಡಿಯನ್ ಆಯಿಲ್ ಕಾರ್ಪೊರೇಷನ್ ಕೂಡ ತಳ್ಳಿ ಹಾಕಿದೆ. ದೇಶದಲ್ಲಿ ಸಾಕಷ್ಟು ಇಂಧನ ಸಂಗ್ರಹವಿದ್ದು, ಪೂರೈಕೆ ಮತ್ತು ವಿತರಣೆ ವ್ಯವಸ್ಥೆ ಸಾಮಾನ್ಯವಾಗಿ ನಡೆಯುತ್ತಿದೆ ಎಂದು ಕಂಪನಿ ತಿಳಿಸಿದೆ.

ಇದೇ ವೇಳೆ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಜಾಗತಿಕ ಭೌಗೋಳಿಕ ರಾಜಕೀಯ ಸವಾಲುಗಳ ನಡುವೆಯೂ ಭಾರತದಲ್ಲಿ ಇಂಧನ ಸರಬರಾಜಿನಲ್ಲಿ ಯಾವುದೇ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.