Bantwal Rahiman Murder, Puttur, Ashraf Kalega: ದರಿದ್ರ ಸರ್ಕಾರ ನಮ್ಗೆ ಬೇಡ, ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿ, ನಾಲಾಯಕ್ ಗೃಹ ಸಚಿವ, ಅಡ್ಜೆಸ್ಟ್ ಮೆಂಟ್ ಸ್ಪೀಕರ್ ಸಾಹೇಬರಿಂದಾಗಿ ಇಂಥ ಸ್ಥಿತಿಯಾಗಿದೆ ; ಅಶ್ರಫ್ ಕಲ್ಲೇಗ ಕಿಡಿ 

28-05-25 07:44 pm       Mangalore Correspondent   ಕರಾವಳಿ

ಬಂಟ್ವಾಳದಲ್ಲಿ ನಡೆದ ಬರ್ಬರ ಕೊಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ 'ದರಿದ್ರ' ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದ್ದು, ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಆಗ್ರಹಿಸಿದ್ದಾರೆ.

ಪುತ್ತೂರು, ಮೇ 28 : ಬಂಟ್ವಾಳದಲ್ಲಿ ನಡೆದ ಬರ್ಬರ ಕೊಲೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿರುವುದಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಈ 'ದರಿದ್ರ' ಸರ್ಕಾರ ಆಡಳಿತ ನಡೆಸಲು ಸಂಪೂರ್ಣ ವಿಫಲವಾಗಿದ್ದು, ಪೊಲೀಸ್ ಇಲಾಖೆಯ ವೈಫಲ್ಯ ಎದ್ದು ಕಾಣುತ್ತಿದೆ. ಮುಖ್ಯಮಂತ್ರಿ ತಕ್ಷಣ ರಾಜೀನಾಮೆ ನೀಡಿ, ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಯುವಜನ ಪರಿಷತ್ ಅಧ್ಯಕ್ಷ ಅಶ್ರಫ್ ಕಲ್ಲೇಗ ಆಗ್ರಹಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಪ್ರತೀಕಾರದ ಮಾತುಗಳನ್ನಾಡಿದ ಶರಣ್ ಪಂಪ್ವೆಲ್ನನ್ನು ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರ್ಕಾರ ಬಂಧಿಸುವ ನಾಟಕವಾಡಿತು. ಎರಡು ಗಂಟೆಯ ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಿತು. ಈ ಮೂಲಕ ಮುಸ್ಲಿಮರ ಕಣ್ಣಿಗೆ ಮಣ್ಣೆರೆಚುವ ಕಾರ್ಯ ಮಾಡಿದ್ದಾರೆ. ತಮಿಳುನಾಡಿನಿಂದ ಬಂದ ರೌಡಿ ಶೀಟರ್ ಇಲ್ಲಿ ಇಷ್ಟೊಂದು ಅಹಂಕಾರದಲ್ಲಿ ಮೆರೆಯುವುದಾದರೆ, ಇಲ್ಲಿನ ಬ್ಯಾರಿ ಯುವಕರು ಅವನನ್ನು ತಮಿಳುನಾಡಿಗೆ ಚಡ್ಡಿಯಲ್ಲಿ ಓಡಿಸುವ ಕೆಲಸವನ್ನು ಇನ್ನು ಮುಂದೆ ಮಾಡಲಿದ್ದಾರೆ ಎಂದು ಹೇಳಿದರು.

"ಕೊಲೆಯಾದ ರೌಡಿಶೀಟರ್ ಬಗೆಗಿನ ಸಂತಾಪ ಸಭೆಗಳಲ್ಲಿ ಹಿಂದುತ್ವವಾದಿಗಳು ಬಹಿರಂಗವಾಗಿ ಪ್ರತೀಕಾರದ ಮಾತುಗಳನ್ನಾಡುತ್ತಿದ್ದರೂ, ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಅವರ ಮೇಲೆ ಯಾವುದೇ ಕಾನೂನು ಕ್ರಮ ಕೈಗೊಳ್ಳುವ, ಬಂಧಿಸುವ ಗೋಜಿಗೆ ಹೋಗಿಲ್ಲ. ಅನುಮತಿಯಿಲ್ಲದೆ ಬಜ್ಪೆಯಲ್ಲಿ ಕಾರ್ಯಕ್ರಮ ನಡೆಸಿ ಯುವಕರನ್ನು ಕೆರಳಿಸುವ ದುಷ್ಕೃತ್ಯ ಎಸಗಲಾಗಿದೆ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಮತ್ತು ಸರ್ಕಾರ ಅಸ್ತಿತ್ವದಲ್ಲಿದೆಯೇ ಅಥವಾ ಇಲ್ಲವೇ ಎಂಬ ಅನುಮಾನ ಜನರನ್ನು ಕಾಡುತ್ತಿದೆ ಎಂದು ಕಿಡಿಕಾರಿದರು.

ಗೃಹ ಸಚಿವರ ಕಾರ್ಯ ವೈಖರಿಯನ್ನು ತೀವ್ರವಾಗಿ ಟೀಕಿಸಿದ ಕಲ್ಲೇಗ, ಈ 'ನಾಲಾಯಕ್' ಗೃಹ ಸಚಿವರಿಗೆ ಪೊಲೀಸ್ ಇಲಾಖೆಯನ್ನು ನಿಯಂತ್ರಿಸುವ ಯಾವುದೇ ಯೋಗ್ಯತೆ ಇಲ್ಲ. ಜಿಲ್ಲೆಯ ಉಸ್ತುವಾರಿ ಹೊತ್ತಿರುವ ಅತಿಥಿ ಸಚಿವರಿಗೆ ಇಲ್ಲಿನ ಕಾನೂನು ಸುವ್ಯವಸ್ಥೆ ಯಾವ ಮಟ್ಟಕ್ಕೆ ಕುಸಿದಿದೆ ಎಂಬುದರ ಅರಿವೇ ಇಲ್ಲ. ಏನಾದರೂ 'ಗಡಿಬಿಡಿ ಆದಂಗೆ' ಎಂದು ಹೇಳುವ ಸ್ಪೀಕರ್ ಸಾಹೇಬರ 'ಅಡ್ಜಸ್ಟ್ಮೆಂಟ್' ರಾಜಕಾರಣವೇ ಜಿಲ್ಲೆಯಲ್ಲಿ ಇಂತಹ ಅರಾಜಕತೆಗೆ ಕಾರಣವಾಗಿದೆ ಎಂದು ನೇರ ಆರೋಪ ಮಾಡಿದರು.

"ನಿರಪರಾಧಿ ಅಲ್ಪಸಂಖ್ಯಾತರ ಮೇಲೆ ನಿರಂತರವಾಗಿ ದಾಳಿಗಳು ನಡೆಯುತ್ತಿದ್ದರೂ, ಸರ್ಕಾರ ಯಾವುದೇ ಕ್ರಮ ಕೈಗೊಳ್ಳದೆ ಜಾಣ ಕುರುಡುತನ ಪ್ರದರ್ಶಿಸುತ್ತಿದೆ. ಘಟನೆ ನಡೆದ ನಂತರ ಇಲಾಖೆಗಳು ಕೇವಲ ನಾಟಕವಾಡುತ್ತಿವೆ. ತಮಿಳುನಾಡಿನಿಂದ ಬಂದು ಹಾರಾಡುವ ರೌಡಿ ಶೀಟರ್ಗಳನ್ನು ಇಲ್ಲಿನ ಯುವಕರು ಚಡ್ಡಿಯಲ್ಲಿ ಅವರ ಊರಿಗೆ ಓಡಿಸುವ ಕೆಲಸ ಮಾಡಬೇಕಿದೆ. ಅದೇ ರೀತಿ, ಡೋಂಗಿ ಹಿಂದುತ್ವವಾದಿಗಳನ್ನು ಜಿಲ್ಲೆಯಿಂದ ಓಡಿಸುವ ಜವಾಬ್ದಾರಿಯನ್ನು ಜಿಲ್ಲೆಯ ಹಿಂದೂ ಸಮಾಜವೇ ಹೊರಬೇಕು ಎಂದವರು ಕರೆ ನೀಡಿದರು. 

"ಜಿಲ್ಲೆಯಲ್ಲಿ ಶಾಂತಿ ಮತ್ತು ಸೌಹಾರ್ದತೆಯಿಂದ ಬದುಕಲು ಎಲ್ಲರೂ ಒಗ್ಗಟ್ಟನ್ನು ಪ್ರದರ್ಶಿಸಬೇಕಾದ ಅನಿವಾರ್ಯತೆ ಇದೆ. ಜಿಲ್ಲೆಯಲ್ಲಿರುವ 'ಆ್ಯಂಟಿ ಕಮ್ಯುನಲ್ ವಿಂಗ್' (Anti-Communal Wing) ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಾಗಿದೆಯೇ? ಇಂತಹ ಗಲಭೆಗಳಿಂದಾಗಿ ಉದ್ಯೋಗಾವಕಾಶಗಳು ಮರೀಚಿಕೆಯಾಗುತ್ತಿದ್ದು, ಶಿಕ್ಷಣ ಕ್ಷೇತ್ರದ ಮೇಲೂ ಗಂಭೀರ ಹೊಡೆತ ಬೀಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಬಶೀರ್ ಪರ್ಲಡ್ಕ, ಮೋನು ಬಪ್ಪಳಿಗೆ ಉಪಸ್ಥಿತರಿದ್ದರು.

Impose President's Rule, Irresponsible Home Minister and 'Adjustment' Speaker to Blame, Ashraf Kalega Fiery Statement in puttur after the murder of Rahiman in bantwal.