MP Kota Srinivas Poojary, Mangalore: ಇಂದಿರಾ ಗಾಂಧಿ, ರಾಜೀವ ಗಾಂಧಿ ಹತ್ಯೆ ಆಗಿದ್ದನ್ನೂ ಭದ್ರತಾ ವೈಫಲ್ಯ ಎನ್ನುತ್ತಾರೆಯೇ? ಪಹಲ್ಗಾಮ್ ದಾಳಿ ಸೇನೆಯ ವೈಫಲ್ಯ ಎಂದವರಿಗೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ

21-05-25 09:30 pm       Mangalore Correspondent   ಕರಾವಳಿ

ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯನ್ನು ಖರ್ಗೆಯವರು ಚಟ್ ಪಟ್ ಯುದ್ಧ ನಡೀತು, ಮಾತಿನ ಮಧ್ಯೆ ನಮ್ಮ ಪಾಕಿಸ್ತಾನ ಅಂತ ಹೇಳುತ್ತಾರೆ. ಕೆಲವರು ದೇಶದ ಸೇನೆಯ ಬಗ್ಗೆಯೇ ಲಘುವಾಗಿ ಮಾತನಾಡುತ್ತಿದ್ದಾರೆ.

ಮಂಗಳೂರು, ಮೇ 21:  ಪಹಲ್ಗಾಮ್ ದಾಳಿಗೆ ಪ್ರತಿಯಾಗಿ ಭಾರತೀಯ ಸೇನೆ ನಡೆಸಿದ ಕಾರ್ಯಾಚರಣೆಯನ್ನು ಖರ್ಗೆಯವರು ಚಟ್ ಪಟ್ ಯುದ್ಧ ನಡೀತು, ಮಾತಿನ ಮಧ್ಯೆ ನಮ್ಮ ಪಾಕಿಸ್ತಾನ ಅಂತ ಹೇಳುತ್ತಾರೆ. ಕೆಲವರು ದೇಶದ ಸೇನೆಯ ಬಗ್ಗೆಯೇ ಲಘುವಾಗಿ ಮಾತನಾಡುತ್ತಿದ್ದಾರೆ. ಭಯೋತ್ಪಾದಕ ದಾಳಿಗೆ ಭದ್ರತಾ ವೈಫಲ್ಯ ಕಾರಣ ಎಂದು ಹೇಳುವ ಇವರು ಇಂದಿರಾ ಗಾಂಧಿ ಅಂಗರಕ್ಷಕರಿಂದಲೇ ಹತ್ಯೆಯಾಗಿದ್ದನ್ನು, ರಾಜೀವ ಗಾಂಧಿ ಹತ್ಯೆಯಾಗಿದ್ದು ಅಥವಾ ತಾಜ್ ಹೊಟೇಲ್ ಮೇಲೆ ದಾಳಿಯಾಗಿದ್ದನ್ನು, ಕಾಶ್ಮೀರಿ ಪಂಡಿತರ ನರಮೇಧ ಮಾಡಿದ್ದನ್ನೂ ಭದ್ರತಾ ವೈಫಲ್ಯ ಎನ್ನುತ್ತಾರೆಯೇ ಎಂದು ಉಡುಪಿ- ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ.

ಮಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿದ ಅವರು ರಾಜ್ಯ ಕಾಂಗ್ರೆಸ್ ಸರಕಾರದ ಎರಡು ವರ್ಷಗಳ ಸಾಧನೆಯ ಬದಲು ಚಾರ್ಜ್ ಶೀಟ್ ಅನ್ನು ಬಿಡುಗಡೆ ಮಾಡಿದರು. ಧರ್ಮ ದ್ವೇಷದ ಮೂಲಕ ಹಿಂದುಗಳಿಗೆ ಭಯದ ವಾತಾವರಣ ಸೃಷ್ಟಿಸಿರುವುದು, ಅಭಿವೃದ್ಧಿಯನ್ನೇ ಕಡೆಗಣಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಣಕ ಮತ್ತು ಕಪ್ಪು ಚುಕ್ಕೆಯಾಗಿದೆ. ಜಲಜೀವನ್ ಮಿಷನ್ ಸೇರಿದಂತೆ ಕೋಟ್ಯಂತರ ರೂ. ಅನುದಾನವನ್ನು ಕೇಂದ್ರ ನೀಡುತ್ತಿದ್ದರೂ, ಅದನ್ನು ಸರಿಯಾಗಿ ಬಳಸಿಕೊಂಡಿಲ್ಲ. ನಾನು ದಲಿತರಿಗೆ ಕೊಟ್ಟೆ ಎನ್ನುವ ಸಿದ್ದರಾಮಯ್ಯ ಎಸ್ಸಿ- ಎಸ್ಟಿಗಳಿಗೆ ಇಟ್ಟಿದ್ದ 34 ಸಾವಿರ ಕೋಟಿಯನ್ನು ಗ್ಯಾರಂಟಿ ಬಳಸಿ, ಆ ಸಮುದಾಯಕ್ಕೆ ದ್ರೋಹ ಎಸಗಿದ್ದಾರೆ.

ಮಂಗಳೂರಿನಿಂದ ತೊಡಗಿ ಕರಾವಳಿ ಉದ್ದಕ್ಕೂ ಹಿಂದುತ್ವದ ಮೇಲೆ ಕೆಲಸ ಮಾಡುವ ಶಾಸಕರು, ನಾಯಕರ ಮೇಲೆ ನಿರಂತರ ಎಫ್ಐಆರ್ ಹಾಕುತ್ತಿದೆ. ಆಮೂಲಕ ಕಾಂಗ್ರೆಸ್ ಸರಕಾರದ ನಡೆಯನ್ನು ಪ್ರಶ್ನಿಸಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿಯನ್ನು ತಂದಿಟ್ಟಿದ್ದಾರೆ. ರಾಜ್ಯದಲ್ಲಿ ಮೂರು ಕೋಟಿ ಜನರಿಗೆ ಯುವನಿಧಿ ಕೊಡಲಾಗಿದೆ ಎಂದು ರಾಹುಲ್ ಗಾಂಧಿ ಮೂಲಕ ಹೇಳಿಸಿದ್ದಾರೆ. ಒಂದೂವರೆ ಲಕ್ಷ ಜನರಿಗೂ ಯುವನಿಧಿ ತಲುಪಿಲ್ಲ. ಮೂರು ಕೋಟಿ ಜನರಿಗೆ ಯುವನಿಧಿಯಾದರೆ, ರಾಜ್ಯದಲ್ಲಿ ಎಷ್ಟು ಜನ ಇದ್ದಾರೆಂದು ರಾಹುಲ್ ಗಾಂಧಿ ತಿಳಿದುಕೊಂಡಿದ್ದಾರೆಯೋ ಏನೋ.. ರಾಜ್ಯ ಸರಕಾರದ ಎರಡು ವರ್ಷದ ಸಾಧನೆಯನ್ನು ವೈಭವೀಕರಿಸುವುದೇ ಜನರ ಪಾಲಿಗೆ ಮಾಡುವ ಅಣಕ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ನೀವು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿಯಾಗಿದ್ದಾಗಲೇ ಸುಹಾಸ್ ಶೆಟ್ಟಿ ಮೇಲೆ ರೌಡಿಶೀಟ್ ಹಾಕಲಾಗಿತ್ತೇ ಎಂದು ಕೇಳಿದ ಪ್ರಶ್ನೆಗೆ, ರೌಡಿಲಿಸ್ಟ್ ತೆರೆಯುವುದು ಪೊಲೀಸರ ಕೆಲಸ. ರೌಡಿಲಿಸ್ಟ್ ತಯಾರಿಸುವಾಗ ಸಚಿವರ ಟೇಬಲಿಗೆ ಬರುವುದೂ ಇಲ್ಲ ಎನ್ನುವುದು ವಾಸ್ತವ ಸಂಗತಿ. ಪೊಲೀಸ್ ಪ್ರಕ್ರಿಯೆಯಲ್ಲಿ ಅದು ಆಗಿದ್ದಿರಬಹುದು ಎಂದು ಹೇಳಿದರು. ಈಚೆಗೆ ನಡೆದ ಕೆಎಂಎಫ್ ಚುನಾವಣೆಯಲ್ಲಿ ಉಡುಪಿಯಲ್ಲಿ ಒಬ್ಬನೂ ಸಹಕಾರ ಭಾರತಿ ಕಡೆಯಿಂದ ಗೆದ್ದಿಲ್ಲ ಏಕೆ ಎಂದು ಕೇಳಿದ ಪ್ರಶ್ನೆಗೆ, ಚುನಾವಣೆ ವ್ಯವಸ್ಥೆಯಲ್ಲಿ ಸೋಲು ಗೆಲುವು ಸಹಜ. ಕೆಎಂಎಫ್ ಚುನಾವಣೆ ಬಗ್ಗೆ ಹೆಚ್ಚು ಜಾಗ್ರತೆ ವಹಿಸಿರಲಿಲ್ಲ. ಹಾಗಾಗಿ ಸೋಲಾಗಿದೆ, ಸಹಕಾರ ಭಾರತಿ ಸೋಲು ಪಕ್ಷದ್ದೇ ಸೋಲು. ಅದರ ಬಗ್ಗೆ ಚಿಂತನೆ ಮಾಡೋಣ ಎಂದರು.

ಸೇನಾ ಕಾರ್ಯಾಚರಣೆ ಬಗ್ಗೆ ಬಿಜೆಪಿ ಸಚಿವರೇ ಟೀಕಿಸಿದ್ದಾರೆ, ಸುಪ್ರೀಂ ಕೋರ್ಟ್ ಛೀಮಾರಿ ಹಾಕಿದರೂ ಅವರ ಮೇಲೆ ಕ್ರಮ ಯಾಕಿಲ್ಲ ಎಂದು ಕೇಳಿದ ಪ್ರಶ್ನೆಗೆ, ಪಕ್ಷದ ನಾಯಕರು ಕ್ರಮ ಕೈಗೊಳ್ಳುತ್ತಾರೆ. ಸೇನೆ ಬಗ್ಗೆ ಯಾರು ಟೀಕೆ ಮಾಡಿದರೂ ತಪ್ಪೇ ಎಂದು ಹೇಳಿದರು. ಸುದ್ದಿಗೋಷ್ಟಿಯಲ್ಲಿ ಶಾಸಕರಾದ ರಾಜೇಶ್ ನಾಯ್ಕ್, ಭರತ್ ಶೆಟ್ಟಿ, ಕಿಶೋರ್ ಕುಮಾರ್, ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಪ್ರೇಮಾನಂದ ಶೆಟ್ಟಿ, ಯತೀಶ್ ಆರ್ವಾರ್ ಇದ್ದರು.

Udupi-Chikmagaluru MP Kota Srinivas Poojary has alleged that the Siddaramaiah-led state government is driven by "propaganda and false promises."