ರಾತ್ರಿ ಕಾಲದಲ್ಲಿ ಕಡಲ್ಕೊರೆತ ವೀಕ್ಷಣೆ ನಾಟಕ ಪೂರೈಸಿದ ಮುಖ್ಯಮಂತ್ರಿಗೆ ಬಿರುಗಾಳಿ ಮಳೆಯ ಒದೆತ ; ಬಟ್ಟಂಪಾಡಿಯಲ್ಲೇ ಶಾಶ್ವತ ಕಾಮಗಾರಿಗೆ ಅಸ್ತು!

12-07-22 09:18 pm       Mangalore Correspondent   ಕರಾವಳಿ

ಕಡಲ್ಕೊರೆತ ಸಮಸ್ಯೆ ಎದುರಿಸುತ್ತಿರುವ ಉಳ್ಳಾಲದ ಪ್ರದೇಶಗಳಿಗೆ ಭೇಟಿ ನೀಡುವ ನೆಪದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಾತ್ರಿ ವೇಳೆ ಆಗಮಿಸಿದ್ದು, ವೀಕ್ಷಣೆಯ ನಾಟಕ ಮಾಡಿ ಮುಗಿಸಿದ್ದಾರೆ.

ಮಂಗಳೂರು, ಜುಲೈ 12: ಕಡಲ್ಕೊರೆತ ಸಮಸ್ಯೆ ಎದುರಿಸುತ್ತಿರುವ ಉಳ್ಳಾಲದ ಪ್ರದೇಶಗಳಿಗೆ ಭೇಟಿ ನೀಡುವ ನೆಪದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರಾತ್ರಿ ವೇಳೆ ಆಗಮಿಸಿದ್ದು, ವೀಕ್ಷಣೆಯ ನಾಟಕ ಮಾಡಿ ಮುಗಿಸಿದ್ದಾರೆ. ರಾತ್ರಿ 7.30ರ ವೇಳೆಗೆ ಮುಖ್ಯಮಂತ್ರಿ ಉಳ್ಳಾಲ ತಲುಪಿದ್ದು, ಕ್ಷೇತ್ರದ ಶಾಸಕ ಯುಟಿ ಖಾದರ್ ಬರಮಾಡಿಕೊಂಡಿದ್ದಾರೆ. ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಕಂದಾಯ ಸಚಿವ ಆರ್.ಅಶೋಕ್ ಜೊತೆಗೆ ಆಗಮಿಸಿದ್ದರು. ಸಿಎಂ ಬೊಮ್ಮಾಯಿ ಉಳ್ಳಾಲಕ್ಕೆ ತಲುಪುತ್ತಿದ್ದಂತೆ ಇಡೀ ದಿನ ಕಾಣೆಯಾಗಿದ್ದ ಮಳೆರಾಯನೂ ಬಿರುಗಾಳಿಯೊಂದಿಗೆ ಬಂದಿದ್ದು ಕರಾವಳಿಯ ಬಿರುಮಳೆಯ ದರ್ಶನವನ್ನೂ ಮುಖ್ಯಮಂತ್ರಿಗೆ ಮಾಡಿಸಿದ್ದಾನೆ.

ಆಬಳಿಕ ಬಟ್ಟಂಪಾಡಿಯ ರೆಸಾರ್ಟ್ ಇರುವಲ್ಲಿಗೆ ತಲುಪಿದ್ದು, ಅಲ್ಲಿನ ದುರವಸ್ಥೆಯನ್ನು ಸ್ಥಳೀಯ ಅಧಿಕಾರಿಗಳು, ಶಾಸಕರು ಮುಖ್ಯಮಂತ್ರಿಯ ಗಮನಕ್ಕೆ ತಂದಿದ್ದಾರೆ. ರಸ್ತೆ ನುಂಗಿ ಹಾಕಿರುವ ಕಡಲಿನ ಧಾವಂತ ಮತ್ತು ಆ ಭಾಗದಲ್ಲಿ ಪ್ರತಿವರ್ಷ ಎದುರಾಗುತ್ತಿರುವ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ಇದೇ ವೇಳೆ, ಈ ಹಿಂದೆ ಉಳ್ಳಾಲದಲ್ಲಿ ನಡೆದಿದ್ದ ಎಡಿಬಿ ಕಾಮಗಾರಿಯಲ್ಲಿ ಅವ್ಯವಹಾರ ಆಗಿರುವ ಬಗ್ಗೆಯೂ ಕೆಲವು ಬಿಜೆಪಿಗರು ಮುಖ್ಯಮಂತ್ರಿ ಕಿವಿ ಮುಟ್ಟಿಸಿದ್ದಾರೆ.

ಆನಂತರ, ಅಲ್ಲಿಯೇ ಕಡಲ ತೀರದ ರೆಸಾರ್ಟ್ ಮುಂಭಾಗದಲ್ಲಿ ನಿಂತು ಮಾಧ್ಯಮಗಳನ್ನುದ್ದೇಶಿಸಿ ಸಿಎಂ ಕಡಲಿನಬ್ಬರದ ಸದ್ದಿನ ನಡುವೆಯೇ ಮಾತನಾಡಿದ್ದಾರೆ. ಕೊಡಗು- ದಕ್ಷಿಣ ಕನ್ನಡ ಜಿಲ್ಲೆಯ ಗಡಿಭಾಗದಲ್ಲಿ ಭೂಕಂಪ ಮತ್ತು ಮಳೆಹಾನಿಯನ್ನು ವೀಕ್ಷಣೆ ಮಾಡಿದ್ದೇನೆ. ಭೂಕಂಪದ ಬಗ್ಗೆ ಅಧ್ಯಯನ ನಡೆಸಲು ಮೂರ್ನಾಲ್ಕು ಸಂಸ್ಥೆಗಳಿಗೆ ವಹಿಸಿದ್ದು, ಅಧ್ಯಯನ ವರದಿ ಬಂದ ಬಳಿಕ ಕ್ರಮ ಕೈಗೊಳ್ಳುತ್ತೇವೆ. ಕರಾವಳಿಯ ಮೂರು ಜಿಲ್ಲೆಗಳಲ್ಲಿ ಕಡಲ್ಕೊರೆತ ಸಮಸ್ಯೆಯಿದ್ದು, ಶಾಶ್ವತ ಕಾಮಗಾರಿ ಕೈಗೊಳ್ಳಲು ಕ್ರಮ ವಹಿಸುತ್ತೇನೆ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.

ಕಡಲ್ಕೊರೆತ ಸಮಸ್ಯೆಗೆ ಈ ಹಿಂದೆ ಎಡಿಬಿ ಸಾಲದಲ್ಲಿ ಕೈಗೊಂಡಿದ್ದ ಕಾಮಗಾರಿ ಸರಿಯಾಗಿ ನಡೆದಿಲ್ಲ ಅನ್ನುವ ಆರೋಪ ಇದೆ ಎಂದು ಹೇಳಿದ ಮುಖ್ಯಮಂತ್ರಿ, ಹೊಸ ತಂತ್ರಜ್ಞಾನವನ್ನು ಇದೇ ಪ್ರದೇಶದಲ್ಲಿ ಅಳವಡಿಸಲು ಅನುಮತಿ ನೀಡಲಾಗಿದೆ. ಸೀ ವೇವ್ ಬ್ರೇಕರ್ಸ್ ತಂತ್ರಜ್ಞಾನವನ್ನು ಬಟ್ಟಂಪಾಡಿಯಲ್ಲೇ ಜಾರಿಗೊಳಿಸಲಾಗುವುದು. ಶಾಶ್ವತ ಯೋಜನೆ ಕೈಗೊಳ್ಳಲು ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಲಾಗುವುದು ಎಂದು ಹೇಳಿದರು. ರಸ್ತೆ ಕಡಿತ ಆಗಿರುವಲ್ಲಿ ಜನರ ಸಂಚಾರಕ್ಕೆ ಬದಲಿ ವ್ಯವಸ್ಥೆ ಮಾಡಲಾಗುವುದು. ಕಡಲ ತೀರದಲ್ಲಿ ಅಪಾಯ ಎದುರಿಸುತ್ತಿರುವ ಮನೆಗಳನ್ನು ತೆರವು ಮಾಡಬೇಕು. ಮುಂದಿನ ತಿಂಗಳು ಮತ್ತಷ್ಟು ಮಳೆಯಾದಲ್ಲಿ ಇನ್ನಷ್ಟು ಹಾನಿಯಾಗುತ್ತದೆ. ಹಾಗಾಗಿ ಮತ್ತೆ ರಿಸ್ಕ್ ತೆಗೆದುಕೊಳ್ಳುವುದು ಸರಿಯಲ್ಲ ಎಂದು ಹೇಳಿದರು.

CM Bommai in Mangalore, inspects rain damages and sea erosion affected areas in Ullal. Revenue Minister R Ashok, Energy Minister V Sunil Kumar, Fisheries Minister S Angara, Public Works Minister CC Patil, State BJP President and Mangaluru MP Nalin Kumar Kateel accompanied the Chief Minister during his visit.