ಒಂದು ವರ್ಷ ಚಿನ್ನ ಖರೀದಿಸ್ಬೇಡಿ...ಇಂಧನ ಉಳಿಸಿ, ವಿದೇಶಿ ಪ್ರವಾಸ ತಪ್ಪಿಸಿ ; ಮೋದಿ ಮನವಿ ಹಿಂದಿದ್ಯಾ ಈ ದೊಡ್ಡ ಕಾರಣಗಳು?

11-05-26 08:05 pm       HK News Staffer   ದೇಶ - ವಿದೇಶ

ಅಮೆರಿಕ-ಇರಾನ್ ಸಂಘರ್ಷದಿಂದ ಜಾಗತಿಕ ತೈಲ ಮಾರುಕಟ್ಟೆ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀಳುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ದೇಶದ ಜನತೆಗೆ ಮಹತ್ವದ ಸಂದೇಶ ನೀಡಿದ್ದಾರೆ. ಇಂಧನ ಬಳಕೆಯನ್ನು ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆ ಬಳಸುವುದು ಹಾಗೂ ಒಂದು ವರ್ಷ ಚಿನ್ನ ಖರೀದಿ ಮಾಡದಂತೆ ಮನವಿ ಮಾಡಿದ್ದಾರೆ.

ಹೈದರಾಬಾದ್‌, ಮೇ 11: ಅಮೆರಿಕ-ಇರಾನ್ ಸಂಘರ್ಷದಿಂದ ಜಾಗತಿಕ ತೈಲ ಮಾರುಕಟ್ಟೆ ಹಾಗೂ ಆರ್ಥಿಕ ವ್ಯವಸ್ಥೆಯ ಮೇಲೆ ಭಾರೀ ಪರಿಣಾಮ ಬೀಳುತ್ತಿರುವ ಬೆನ್ನಲ್ಲೇ ಪ್ರಧಾನಿ ಮೋದಿ ದೇಶದ ಜನತೆಗೆ ಮಹತ್ವದ ಸಂದೇಶ ನೀಡಿದ್ದಾರೆ. ಇಂಧನ ಬಳಕೆಯನ್ನು ಕಡಿಮೆ ಮಾಡುವುದು, ಸಾರ್ವಜನಿಕ ಸಾರಿಗೆ ಬಳಸುವುದು ಹಾಗೂ ಒಂದು ವರ್ಷ ಚಿನ್ನ ಖರೀದಿ ಮಾಡದಂತೆ ಮನವಿ ಮಾಡಿದ್ದಾರೆ.

ತೆಲಂಗಾಣದ ಸಿಕಂದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ದೇಶ ಎದುರಿಸುತ್ತಿರುವ ಜಾಗತಿಕ ಆರ್ಥಿಕ ಸವಾಲುಗಳ ನಡುವೆ ಪ್ರತಿಯೊಬ್ಬ ನಾಗರಿಕರೂ ಜವಾಬ್ದಾರಿಯಿಂದ ನಡೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.

ಇಂಧನ ಉಳಿತಾಯಕ್ಕೆ ಜನತೆಗೆ ಮೋದಿ ಸಲಹೆಗಳು;

  • ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ ಬಳಸಿ 
  • ಅನಗತ್ಯ ವಾಹನ ಬಳಕೆ ಕಡಿಮೆ ಮಾಡಿ 
  • ವರ್ಕ್ ಫ್ರಮ್ ಹೋಮ್ ಹಾಗೂ ಆನ್‌ಲೈನ್ ಸಭೆಗಳಿಗೆ ಉತ್ತೇಜನ ನೀಡಿ 
  • ರಾಸಾಯನಿಕ ಗೊಬ್ಬರ ಬಳಕೆ ತಗ್ಗಿಸಿ 
  • ಸಿಂಗಲ್ ಯೂಸ್ ಪ್ಲಾಸ್ಟಿಕ್ ಬಳಕೆ ನಿಲ್ಲಿಸಿ 
  • ‘ಏಕ್ ಪೇಡ್ ಮಾ ಕೆ ನಾಮ್’ ಅಭಿಯಾನದಡಿ ತಾಯಿಯ ಹೆಸರಲ್ಲಿ ಒಂದು ಸಸಿ ನೆಡಿ 
  • ‘ಒಂದು ವರ್ಷ ಚಿನ್ನ ಖರೀದಿ ಬೇಡ’

ಪೆಟ್ರೋಲ್ - ಡೀಸೆಲ್ ಬೆಲೆ ಏರಿಕೆ ಸಾಧ್ಯತೆ:

ಕಳೆದ ನಾಲ್ಕು ವರ್ಷದಲ್ಲೇ ಮೊದಲ ಬಾರಿಗೆ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಅತಿದೊಡ್ಡ ಪರಿಷ್ಕರಣೆ ಆಗಲಿದೆ. ಮಧ್ಯಪ್ರಾಚ್ಯ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಮೇ 15 ರೊಳಗೆ ಪೆಟ್ರೋಲ್ ಡೀಸೆಲ್ ಬೆಲೆ ಹೆಚ್ಚಳ ಆಗುವ ಸಾಧ್ಯತೆ ಇದೆ. ತೈಲ ಮಾರುಕಟ್ಟೆಯ ಕಂಪನಿಗಳಿಗೆ ನಷ್ಟ ಸರಿದೂಗಿಸಲು ಕಷ್ಟವಾಗುತ್ತಿರುವುದರಿಂದ ಬೆಲೆ ಏರಿಕೆ ಆಗುವ ಸಾಧ್ಯತೆ ಇದೆ.

ವರದಿಯೊಂದರ ಪ್ರಕಾರ, ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ,ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪನಿಗಳು 30,000 ಕೋಟಿ ರೂಪಾಯಿಯಷ್ಟು ನಷ್ಟವನ್ನು ಪ್ರತಿ ತಿಂಗಳಿಗೆ ಅನುಭವಿಸುತ್ತಿವೆ ಎನ್ನಲಾಗಿದೆ.

ಅನುಮತಿ ಸಿಕ್ಕರೆ, ಪೆಟ್ರೋಲ್ ಡೀಸೆಲ್ ನ ಪ್ರತೀ ಲೀಟರ್ ದರ 4-5 ರೂಪಾಗಿ ಹೆಚ್ಚಳ ಆಗುವ ಸಾಧ್ಯತೆ ಇದ್ದು, ಗೃಹಬಳಕೆ ಎಲ್ ಪಿಜಿ ದರ 40-50 ರೂ. ಹೆಚ್ಚಳ ಆಗುವ ಸಾಧ್ಯತೆ ಇದೆ.

ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಏರಿಕೆಯಾಗಲಿದೆಯೇ ಎನ್ನುವುದು ಈಗ ಎದುರಾಗಿರುವ ಯಕ್ಷ ಪ್ರಶ್ನೆಯಾಗಿದೆ. ಇರಾನ್ - ಅಮೆರಿಕದ ನಡುವೆ ದೀರ್ಘಕಾಲದ ಯುದ್ಧವು ಭೌಗೋಳಿಕವಾಗಿ ಅನಿಶ್ಚಿತತೆ ಸೃಷ್ಟಿ ಮಾಡಿದೆ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಹೆಚ್ಚಾಗುತ್ತಿದ್ದು. ಸಹಜವಾಗಿಯೇ ಮುಂದಿನ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಹೆಚ್ಚಾಗುವ ಸಾಧ್ಯತೆ ಇದೆ. ಆದರೆ ಈ ವಿಚಾರದಲ್ಲಿ ನಿಖರೆ ಇಲ್ಲ.

ಮನೆಯಿಂದ ಕೆಲಸಕ್ಕೆ ಒತ್ತು ಕೊಡಿ ಎಂದಿದ್ಯಾಕೆ ಮೋದಿ?

ಮೊದಲು, ಮನೆಯಿಂದ ಕೆಲಸ ಮಾಡುವ ಪದ್ಧತಿಗೆ ಮತ್ತೆ ಒತ್ತು ನೀಡಬೇಕು ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಕೋವಿಡ್ ಕಾಲದಲ್ಲಿ ಹೇಗೆ ಆನ್‌ಲೈನ್ ಸಭೆಗಳು, ರಿಮೋಟ್ ಕೆಲಸ ಸಾಮಾನ್ಯವಾಗಿದ್ದವೋ, ಅದನ್ನೇ ಮತ್ತೆ ಸಾಧ್ಯವಾದಷ್ಟು ಬಳಸಿಕೊಳ್ಳುವಂತೆ ಮನವಿ ಮಾಡಿದ್ದಾರೆ. ಕಚೇರಿ ಹೋಗುವ ಪ್ರಯಾಣ ಕಡಿಮೆಯಾದರೆ ಪೆಟ್ರೋಲ್-ಡೀಸೆಲ್ ಬಳಕೆ ಇಳಿಯುತ್ತದೆ. ನಗರ ಪ್ರದೇಶಗಳಲ್ಲಿ ದಿನನಿತ್ಯ ತೈಲ ಬಳಕೆಯ ದೊಡ್ಡ ಭಾಗವೇ ಕಚೇರಿ-ಪ್ರಯಾಣಕ್ಕೆ ಹೋಗುತ್ತದೆ. WFH ಮೂಲಕ ಕಚೇರಿ ಕಟ್ಟಡಗಳಲ್ಲಿ ಹವಾನಿಯಂತ್ರಣ, ಬೆಳಕು, ಉಪಕರಣಗಳ ಬಳಕೆ ಕೂಡ ಕಡಿಮೆಯಾಗುತ್ತದೆ. ಇದರಿಂದ ವಿದ್ಯುತ್ ಬೇಡಿಕೆಯೂ ಸ್ವಲ್ಪ ಮಟ್ಟಿಗೆ ಇಳಿಯಬಹುದು ಎಂದು ಸಲಹೆ ನೀಡಿದ್ದಾರೆ.

ವಿದೇಶಿ ಪ್ರವಾಸ ತಪ್ಪಿಸಿ ಎಂದಿದ್ದೇಕೆ?

ಇದೇ ವೇಳೆ, ಕನಿಷ್ಠ 1 ವರ್ಷದವರೆಗೆ ವಿದೇಶ ಪ್ರವಾಸಗಳನ್ನು, ವಿಶೇಷವಾಗಿ ವಿದೇಶ ರಜೆ ಹಾಗೂ ಗಮ್ಯಸ್ಥಾನ ವಿವಾಹಗಳನ್ನು ದೂರವಿರಲು ಅವರು ಕೋರಿದ್ದಾರೆ. ವಿದೇಶಕ್ಕೆ ಹೋಗುವ ಪ್ರತಿಯೊಂದು ಪ್ರಯಾಣವೂ ಡಾಲರ್ ರೂಪದಲ್ಲಿ ಹಣ ಹೊರಹರಿವಿಗೆ ಕಾರಣವಾಗುತ್ತದೆ. ಈಗಾಗಲೇ ಜಾಗತಿಕ ಅನಿಶ್ಚಿತತೆಯಿಂದಾಗಿ ಭಾರತದ ವಿದೇಶಿ ವಿನಿಮಯ ಸಂಗ್ರಹದ ಮೇಲೆ ಒತ್ತಡ ಹೆಚ್ಚಾಗಿದೆ. ಕಳೆದ 10 ವಾರಗಳಲ್ಲಿ ಸುಮಾರು 1 ಲಕ್ಷ ಕೋಟಿ ರೂ. ಹೊರಹೋಗಿದೆ ಎಂದು ವರದಿ ಬಂದಿದೆ. ಇಂತಹ ಸಮಯದಲ್ಲಿ ವಿದೇಶ ಪ್ರವಾಸ ಕಡಿಮೆ ಮಾಡಿದರೆ, ದೇಶದ ವಿದೇಶಿ ವಿನಿಮಯವನ್ನು ಉಳಿಸಲು ಸಹಾಯವಾಗುತ್ತದೆ.