ರಾಹುಲ್ ಗಾಂಧಿ ಸಮ್ಮುಖದಲ್ಲೇ ಪೂರ್ಣ ವಂದೇ ಮಾತರಂ ಹಾಡಿಸಿದ ವಿಜಯ್ ಸೇತುಪತಿ ; ಪಶ್ಚಿಮ ಬಂಗಾಳದಲ್ಲೇ ಮಹತ್ವ ಕೊಟ್ಟಿರದ ಬಿಜೆಪಿಗೆ ಮೊದಲ ದಿನವೇ ಠಕ್ಕರ್ !

10-05-26 09:15 pm       HK News Desk   ದೇಶ - ವಿದೇಶ

ತಮಿಳಿನ ಸೂಪರ್ ಸ್ಟಾರ್ ನಟರಾಗಿದ್ದ ವಿಜಯ್ ಈಗ ತಮಿಳುನಾಡು ಮುಖ್ಯಮಂತ್ರಿ ಪದವಿಗೇರಿದ್ದಾರೆ. ಸಾಮಾನ್ಯ ಚಿತ್ರ ನಟನಾಗಿದ್ದ ಮನುಷ್ಯ ಇಷ್ಟು ಬೇಗ ಸಿಎಂ ಪದವಿಗೇರುತ್ತಾನೆಂದು ಯಾವೊಬ್ಬ ರಾಜಕಾರಣಿಯೂ ಅಂದುಕೊಂಡಿರಲಿಲ್ಲ. ಅಂಥದ್ದರಲ್ಲಿ ಇದೀಗ ಪ್ರಮಾಣ ವಚನ ಸಮಾರಂಭದಲ್ಲೂ ವಿಶೇಷ ಎನ್ನಿಸುವಷ್ಟರ ಮಟ್ಟಿಗೆ ವಿಜಯ್ ಗಮನ ಸೆಳೆದಿದ್ದಾರೆ.

ಚೆನ್ನೈ, ಮೇ 10: ತಮಿಳಿನ ಸೂಪರ್ ಸ್ಟಾರ್ ನಟರಾಗಿದ್ದ ವಿಜಯ್ ಈಗ ತಮಿಳುನಾಡು ಮುಖ್ಯಮಂತ್ರಿ ಪದವಿಗೇರಿದ್ದಾರೆ. ಸಾಮಾನ್ಯ ಚಿತ್ರ ನಟನಾಗಿದ್ದ ಮನುಷ್ಯ ಇಷ್ಟು ಬೇಗ ಸಿಎಂ ಪದವಿಗೇರುತ್ತಾನೆಂದು ಯಾವೊಬ್ಬ ರಾಜಕಾರಣಿಯೂ ಅಂದುಕೊಂಡಿರಲಿಲ್ಲ. ಅಂಥದ್ದರಲ್ಲಿ ಇದೀಗ ಪ್ರಮಾಣ ವಚನ ಸಮಾರಂಭದಲ್ಲೂ ವಿಶೇಷ ಎನ್ನಿಸುವಷ್ಟರ ಮಟ್ಟಿಗೆ ವಿಜಯ್ ಗಮನ ಸೆಳೆದಿದ್ದಾರೆ.

ಕಾಂಗ್ರೆಸ್, ಮುಸ್ಲಿಂ ಲೀಗ್ ಇನ್ನಿತರ ಸೆಕ್ಯುಲರ್ ಪಕ್ಷಗಳೊಂದಿಗೆ ಸೇರಿ ವಿಜಯ್ ಮೈತ್ರಿ ಸರ್ಕಾರ ರಚಿಸಿದರೂ ಪ್ರಮಾಣ ವಚನ ಸಮಾರಂಭದಲ್ಲೇ ವಂದೇ ಮಾತರಂ ಗೀತೆಯನ್ನು ಸಂಪೂರ್ಣ ಹಾಡಿಸುವ ಮೂಲಕ ಇಡೀ ದೇಶಕ್ಕೆ ಹೊಸ ಸಂದೇಶ ನೀಡಿದ್ದಾರೆ. ಇತ್ತೀಚೆಗಷ್ಟೇ ಕೇಂದ್ರ ಬಿಜೆಪಿ ಸರ್ಕಾರ ಸ್ವಾತಂತ್ರ್ಯ ಕಾಲದಲ್ಲಿ ಜನರನ್ನು ಒಂದುಗೂಡಿಸಿದ್ದ ವಂದೇ ಮಾತರಂ ಗೀತೆಗೆ ರಾಷ್ಟ್ರಗೀತೆ ಜನಗಣ ಮನ ಗೀತೆಯಷ್ಟೇ ಪ್ರಾಮುಖ್ಯತೆ ಕೊಡಬೇಕೆಂದು ಕಾನೂನು ಆದೇಶ ಮಾಡಿತ್ತು. ಆದರೆ ಸೆಕ್ಯುಲರ್, ತುಷ್ಟೀಕರಣದ ರಾಜಕೀಯದ ಕಾರಣಕ್ಕೆ ಬಿಜೆಪಿ ಸರ್ಕಾರದ ನಡೆಗೆ ಕಾಂಗ್ರೆಸ್ ಟೀಕೆ ಮಾಡಿತ್ತು.

ಆದರೆ ಗೀತೆಯನ್ನು ವಿರೋಧಿಸಿದ್ದ ರಾಹುಲ್ ಗಾಂಧಿ ಎದುರಲ್ಲೇ ಇದೀಗ ವಂದೇ ಮಾತರಂ ಗೀತೆಯನ್ನು ವಿಜಯ್ ತನ್ನ ಪ್ರಮಾಣವಚನ ಸಮಾರಂಭದಲ್ಲಿ ಹಾಡಿಸಿ ಗಮನ ಸೆಳೆದಿದ್ದಾರೆ. ಪೂರ್ಣ ಗೀತೆ ಹಾಡಿಸಿದ್ದಲ್ಲದೆ, ರಾಹುಲ್ ಸೇರಿದಂತೆ ಎಲ್ಲ ಸೆಕ್ಯುಲರ್ ನಾಯಕರೂ ಗೀತೆಗೆ ಎದ್ದು ನಿಂತು ಗೌರವ ಸೂಚಿಸುವಂತೆ ಮಾಡಿಸಿದ್ದಾರೆ. ವಿಶೇಷ ಅಂದರೆ, ನಿನ್ನೆ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸರ್ಕಾರ ಪ್ರಮಾಣ ವಚನ ಸ್ವೀಕರಿಸಿದರೂ ವಂದೇ ಮಾತರಂ ಪೂರ್ಣ ಗೀತೆಗೆ ಆದ್ಯತೆ ಕೊಟ್ಟಿರಲಿಲ್ಲ. ಬಂಗಾಳದ್ದೇ ಆದ ಬಂಕಿಮಚಂದ್ರ ಚಟರ್ಜಿ ವಂದೇ ಮಾತರಂ ಗೀತೆಯನ್ನು ರಚಿಸಿದ್ದರೂ, ರಾಷ್ಟ್ರಗೀತೆಯ ಮಾನ್ಯತೆ ಕೊಟ್ಟಿದ್ದ ಬಿಜೆಪಿ ಅವರದೇ ನಾಡಿನಲ್ಲಿ ಹೆಚ್ಚು ಮಹತ್ವ ಕೊಟ್ಟಿರಲಿಲ್ಲ.

ಸೆಕ್ಯುಲರ್ ಕಾರಣಕ್ಕೆ ಬಿಜೆಪಿ ಮತ್ತು ಅದರ ಸಿದ್ಧಾಂತವನ್ನು ವಿರೋಧಿಸುತ್ತ ಇದೀಗ ಸೆಕ್ಯುಲರ್ ಪಕ್ಷಗಳ ಜೊತೆಗೇ ಸೇರಿಕೊಂಡು ಸರ್ಕಾರ ರಚಿಸಿದ ಜೋಸೆಫ್ ವಿಜಯ್ ಅಧಿಕಾರ ಸ್ವೀಕರಿಸಿದ ಮೊದಲ ದಿನವೇ ಬಿಜೆಪಿಗೆ ಠಕ್ಕರ್ ನೀಡಿ ರಾಜ್ಯಕ್ಕೆ ಹೊಸ ಸಂದೇಶ ನೀಡಿರುವುದು ವಿಶೇಷ. ತನ್ನ ಭಾಷಣದಲ್ಲಿಯೂ ಸೆಕ್ಯುಲರ್ ಆಡಳಿತದ ಹೊಸ ಅನುಭವ ಜನರಿಗೆ ನೀಡಲಿದ್ದೇನೆ ಎನ್ನುವ ವಾಗ್ದಾನವನ್ನೂ ವಿಜಯ್ ಮಾಡಿದ್ದಾರೆ.