ಬಂಗಾಳದಲ್ಲಿ ಕೇಸರಿ ಯುಗಾರಂಭ ; ಮೊದಲ ಬಿಜೆಪಿ ಸಿಎಂ ಆಗಿ ಸುವೇಂದು ಅಧಿಕಾರಿ ಆಯ್ಕೆ , ದೀದಿ ಕೋಟೆಯಲ್ಲಿ ಇನ್ಮುಂದೆ ದಾದ ಅಬ್ಬರ !

08-05-26 06:45 pm       HK News Staffer   ದೇಶ - ವಿದೇಶ

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಐತಿಹಾಸಿಕ ತಿರುವು ಉಂಟಾಗಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ದಾಖಲಿಸಿದ ಬೆನ್ನಲ್ಲೇ, ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುವೇಂದ್ರ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು.

ಕೋಲ್ಕತ್ತಾ, ಮೇ 8: ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಐತಿಹಾಸಿಕ ತಿರುವು ಉಂಟಾಗಿದ್ದು, ಬಿಜೆಪಿ ನಾಯಕ ಸುವೇಂದು ಅಧಿಕಾರಿ ರಾಜ್ಯದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಬಹುಮತ ದಾಖಲಿಸಿದ ಬೆನ್ನಲ್ಲೇ, ಇಂದು ನಡೆದ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಸುವೇಂದ್ರ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಯಿತು.

ಈ ಮೂಲಕ ದಶಕಗಳ ಕಾಲ ಎಡಪಕ್ಷಗಳು ಮತ್ತು ನಂತರ ತೃಣಮೂಲ ಕಾಂಗ್ರೆಸ್ ಆಳ್ವಿಕೆ ಕಂಡಿದ್ದ ಬಂಗಾಳದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ವೇದಿಕೆ ಸಿದ್ಧವಾಗಿದೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ವಿಧಾನಸಭಾ ಪಕ್ಷದ ನಾಯಕರ ಆಯ್ಕೆ ಪ್ರಕ್ರಿಯೆಗೆ ವೀಕ್ಷಕರಾಗಿ ಕೋಲ್ಕತ್ತಾಗೆ ಆಗಮಿಸಿದ್ದರು. ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ ಸಹಾಯಕ ವೀಕ್ಷಕರಾಗಿ ಪಾಲ್ಗೊಂಡಿದ್ದರು.

ಬಿಸ್ವಾ ಬಾಂಗ್ಲಾ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಸಭೆಯಲ್ಲಿ ಸುವೇಂದು ಅಧಿಕಾರಿ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಯಾವುದೇ ವಿರೋಧ ವ್ಯಕ್ತವಾಗಲಿಲ್ಲ. ಬಳಿಕ ಮಾತನಾಡಿದ ಅಮಿತ್ ಶಾ,
“ಮೊದಲ ಹೆಸರಾಗಿ ಸುವೇಂದು ಅಧಿಕಾರಿ ಅವರನ್ನೇ ಪ್ರಸ್ತಾಪಿಸಲಾಯಿತು. ಎರಡನೇ ಹೆಸರನ್ನು ಸೂಚಿಸಲು ಸಮಯ ನೀಡಲಾಯಿತು. ಆದರೆ ಯಾರೂ ಮತ್ತೊಂದು ಹೆಸರು ಸೂಚಿಸಲಿಲ್ಲ. ಹೀಗಾಗಿ ಸುವೇಂದು ಅಧಿಕಾರಿ ಅವರನ್ನು ಸರ್ವಾನುಮತದಿಂದ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡಲಾಗಿದೆ” ಎಂದು ಘೋಷಿಸಿದರು.

‘ಜೈಂಟ್ ಕಿಲ್ಲರ್’ನ ರಾಜಕೀಯ ಏರಿಕೆ
ಸುವೇಂದು ಅಧಿಕಾರಿ ಬಂಗಾಳ ರಾಜಕೀಯದಲ್ಲಿ ‘ಜೈಂಟ್ ಕಿಲ್ಲರ್’ ಎಂದೇ ಗುರುತಿಸಿಕೊಂಡಿದ್ದಾರೆ. ಕಳೆದ ಚುನಾವಣೆಯಲ್ಲಿ ನಂದಿಗ್ರಾಮದಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಸೋಲಿಸಿ ದೇಶದ ಗಮನ ಸೆಳೆದಿದ್ದ ಅವರು, ಈ ಬಾರಿ ಮಮತಾ ಅವರ ಭದ್ರಕೋಟೆಯಾದ ಭವಾನಿಪುರದಲ್ಲೂ ಜಯಗಳಿಸಿ ಮತ್ತೊಮ್ಮೆ ತಮ್ಮ ಪ್ರಭಾವ ಸಾಬೀತುಪಡಿಸಿದ್ದಾರೆ.

ಒಂದು ಕಾಲದಲ್ಲಿ ಮಮತಾ ಬ್ಯಾನರ್ಜಿ ಅವರ ಆಪ್ತರಾಗಿದ್ದ ಸುವೇಂದು, ನಂತರ ಬಿಜೆಪಿ ಸೇರಿ ರಾಜ್ಯದಾದ್ಯಂತ ಪಕ್ಷವನ್ನು ತಳಮಟ್ಟದಿಂದ ಸಂಘಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅವರ ಸಂಘಟನಾ ಸಾಮರ್ಥ್ಯವನ್ನು ಬಿಜೆಪಿ ಹೈಕಮಾಂಡ್ ವಿಶೇಷವಾಗಿ ಮೆಚ್ಚಿಕೊಂಡಿದೆ.

ನಾಳೆ ಬ್ರಿಗೇಡ್ ಮೈದಾನದಲ್ಲಿ ಪ್ರಮಾಣವಚನ
ಶನಿವಾರ ಬೆಳಗ್ಗೆ 11 ಗಂಟೆಗೆ ಕೋಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಭವ್ಯ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕೇಂದ್ರ ಸಚಿವ ನಿತಿನ್ ಗಡ್ಕರಿ, ಧರ್ಮೇಂದ್ರ ಪ್ರಧಾನ್ ಸೇರಿದಂತೆ ಹಲವು ಕೇಂದ್ರ ಸಚಿವರು ಭಾಗವಹಿಸಲಿದ್ದಾರೆ.

ಬಿಜೆಪಿ ಆಡಳಿತವಿರುವ 20ಕ್ಕೂ ಹೆಚ್ಚು ರಾಜ್ಯಗಳ ಮುಖ್ಯಮಂತ್ರಿಗಳಿಗೂ ಆಹ್ವಾನ ನೀಡಲಾಗಿದೆ. ಸಮಾರಂಭವನ್ನು ಐತಿಹಾಸಿಕ ಕ್ಷಣವಾಗಿ ರೂಪಿಸಲು ಬಿಜೆಪಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.

ಇಬ್ಬರು ಡಿಸಿಎಂ ಸಾಧ್ಯತೆ
ರಾಜ್ಯದಲ್ಲಿ ಪ್ರಾದೇಶಿಕ ಮತ್ತು ಸಂಘಟನಾ ಸಮತೋಲನ ಕಾಯ್ದುಕೊಳ್ಳಲು ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಹಿರಿಯ ನಾಯಕಿ ಹಾಗೂ ನಟಿ ರೂಪಾ ಗಂಗೂಲಿ ಅವರ ಹೆಸರು ಉಪಮುಖ್ಯಮಂತ್ರಿ ಹುದ್ದೆಗೆ ಪ್ರಮುಖವಾಗಿ ಕೇಳಿಬರುತ್ತಿದೆ.

‘ಸೋನಾರ್ ಬಾಂಗ್ಲಾ’ ಕನಸು
ನಂದಿಗ್ರಾಮ ಚಳವಳಿಯಿಂದ ಜನ ನಾಯಕನಾಗಿ ಹೊರಹೊಮ್ಮಿದ್ದ ಸುವೇಂದು ಅಧಿಕಾರಿ, ಈಗ ಬಂಗಾಳದ ಆಡಳಿತ ಚುಕ್ಕಾಣಿ ಹಿಡಿಯಲು ಸಜ್ಜಾಗಿದ್ದಾರೆ. “ಸೋನಾರ್ ಬಾಂಗ್ಲಾ” ನಿರ್ಮಾಣದ ಭರವಸೆಯೊಂದಿಗೆ ಬಿಜೆಪಿ ಹೊಸ ಅಧ್ಯಾಯ ಆರಂಭಿಸುತ್ತಿದೆ.