ತಿರುಪತ್ತೂರಿನಲ್ಲಿ ಒಂದು ಮತದಿಂದ ಗೆದ್ದ ಟಿವಿಕೆ ಅಭ್ಯರ್ಥಿ; ಒಂದು ವೋಟಿನ ಮಹತ್ವದ ಬಗ್ಗೆ ಆನಂದ್ ಮಹೀಂದ್ರಾ ಟ್ವೀಟ್, ಶಾಲಾ ಹಂತದಲ್ಲೇ ತಿಳಿಯಬೇಕೆಂದ ಉದ್ಯಮಿ

07-05-26 06:20 pm       HK News Staffer   ದೇಶ - ವಿದೇಶ

ಕ್ರಿಕೆಟ್ ನಲ್ಲಿ ಒಂದೊಂದು ರನ್ ಎಷ್ಟು ಮುಖ್ಯವಾಗುತ್ತೆ ಎನ್ನುವುದನ್ನು ನೋಡಿದ್ದೇವೆ. ಚುನಾವಣಾ ಕಣದಲ್ಲಿಯೂ ಒಂದು ಮತ ಎಷ್ಟು ಮಹತ್ವದ್ದು ಎನ್ನುವುದನ್ನು ತಮಿಳುನಾಡು ಚುನಾವಣೆ ಫಲಿತಾಂಶ ಮುಂದಿಟ್ಟು ಮಹೀಂದ್ರ ಗ್ರೂಪ್ ಆಫ್ ಕಂಪೆನಿ ಮಾಲೀಕ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ.

ಬೆಂಗಳೂರು, ಮೇ 7: ಕ್ರಿಕೆಟ್ ನಲ್ಲಿ ಒಂದೊಂದು ರನ್ ಎಷ್ಟು ಮುಖ್ಯವಾಗುತ್ತೆ ಎನ್ನುವುದನ್ನು ನೋಡಿದ್ದೇವೆ. ಚುನಾವಣಾ ಕಣದಲ್ಲಿಯೂ ಒಂದು ಮತ ಎಷ್ಟು ಮಹತ್ವದ್ದು ಎನ್ನುವುದನ್ನು ತಮಿಳುನಾಡು ಚುನಾವಣೆ ಫಲಿತಾಂಶ ಮುಂದಿಟ್ಟು ಮಹೀಂದ್ರ ಗ್ರೂಪ್ ಆಫ್ ಕಂಪೆನಿ ಮಾಲೀಕ ಆನಂದ್ ಮಹೀಂದ್ರಾ ಟ್ವೀಟ್ ಮಾಡಿದ್ದಾರೆ. 

ತಮಿಳುನಾಡು ಚುನಾವಣೆ ಫಲಿತಾಂಶವನ್ನು ಉಲ್ಲೇಖಿಸಿ ಆನಂದ್ ಮಹೀಂದ್ರಾ ಪೋಸ್ಟ್ ಮಾಡಿದ್ದಾರೆ. ಒಂದು ಮತದ ಮಹತ್ವ ಏನು ಎನ್ನುವುದನ್ನು ಶಾಲಾ ಹಂತದಲ್ಲೇ ಮಕ್ಕಳು ಅರಿಯುವಂತಾಗಬೇಕು. ಒಂದು ವೋಟಿನ ಮಹತ್ವ ಏನು ಎನ್ನುವುದು ಇದರಿಂದ ಅರ್ಥವಾಗುತ್ತದೆ ಎಂದು ಮಹೀಂದ್ರಾ ಹೇಳಿದ್ದಾರೆ. 

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ತಿರುಪತ್ತೂರು ಕ್ಷೇತ್ರದ ಚುನಾವಣೆ ಫಲಿತಾಂಶ ದೇಶದ ಗಮನ ಸೆಳೆದಿತ್ತು.‌ ಡಿಎಂಕೆ - ಬಿಜೆಪಿ ಅಭ್ಯರ್ಥಿ ನಡುವೆ ಜಿದ್ದಾಜಿದ್ದು ನಿರೀಕ್ಷೆ ಮಾಡಿದ್ದರೂ ಟಿವಿಕೆ ಸ್ಪರ್ಧೆಯಿಂದಾಗಿ ಮತದಾರರ ತೀರ್ಪು ವ್ಯತಿರಿಕ್ತವಾಗಿತ್ತು. ಟಿವಿಕೆ ಅಭ್ಯರ್ಥಿ ಶ್ರೀನಿವಾಸ ಸೇತುಪತಿ, ಡಿಎಂಕೆಯ ಕೆಆರ್ ಪೆರಿಯಕರುಪ್ಪನ್ ಅವರನ್ನು ಕೇವಲ ಒಂದು ಮತದಿಂದ ಸೋಲಿಸಿ ಅಚ್ಚರಿ ಸೃಷ್ಟಿಸಿದ್ದಾರೆ. ಫಲಿತಾಂಶವನ್ನು ಆನಂದ್ ಮಹೀಂದ್ರಾ, ತಮ್ಮ ಟ್ವೀಟ್’ನಲ್ಲಿ ಉಲ್ಲೇಖಿಸಿದ್ದಾರೆ.

ತಿರುಪತ್ತೂರು ಕ್ಷೇತ್ರದ ಚುನಾವಣೆ ಫಲಿತಾಂಶ ನಾಟಕೀಯ ತಿರುವುಗಳನ್ನು ಪಡೆಯುತ್ತಲೇ ಇತ್ತು. ನನಗೆ ಮಾತ್ರ ಈ ಫಲಿತಾಂಶ ಜೀವನದಲ್ಲಿ ಮರೆಯಲಾಗದ್ದು ಎಂದು ಆನಂದ್ ಮಹೀಂದ್ರಾ ಹೇಳಿದ್ದಾರೆ. ಮಹೀಂದ್ರಾ ಅವರ ಪೋಸ್ಟ್ ಸುಮಾರು ಸುಮಾರು ಹತ್ತು ಲಕ್ಷ ವೀವ್ಸ್ ಪಡೆದುಕೊಂಡಿದೆ. ಇದಕ್ಕೆ ನೂರಾರು ಕಾಮೆಂಟುಗಳು ಬಂದಿದೆ. 

ತಿರುಪತ್ತೂರಿನಲ್ಲಿ ಸುಮಾರು 1,66,000 ಮತದಾರರು ಮತ ಚಲಾಯಿಸಿದ್ದರು. ಇಬ್ಬರ ನಡುವೆ ಬಹುತೇಕ ಈ ಮತಗಳು ಹಂಚಿಹೋದವು. ಒಂದೇ ಒಂದು ಮತ, ಇತಿಹಾಸವನ್ನು ಬರೆಯಿತು. ಕ್ಷೇತ್ರದ ಫಲಿತಾಂಶದ ಬಗ್ಗೆ ಪ್ರಪಂಚದ ಎಲ್ಲಾ ಕಡೆ ಜನರಿಗೆ ತಿಳಿಯಬೇಕು. ಆ ಮೂಲಕ ಒಂದು ವ್ಯಕ್ತಿ ಎನ್ನುವುದು ಜಗತ್ತಿನ ದೊಡ್ಡ ಶಕ್ತಿ ಎನ್ನುವುದು ಪ್ರತೀ ಮಗುವಿಗೆ ತಿಳಿಯಲಿ ಎಂದು ಆನಂದ್ ಮಹೀಂದ್ರಾ ತಮ್ಮ ಟ್ವೀಟ್ ನಲ್ಲಿ ಬರೆದುಕೊಂಡಿದ್ದಾರೆ.