ವಿಜಯ್ ಪಕ್ಷಕ್ಕೆ ಕಾಂಗ್ರೆಸ್ ಬೇಷರತ್ ಬೆಂಬಲ ; ಲೋಕಸಭೆ, ರಾಜ್ಯಸಭೆ ಚುನಾವಣೆಗಳಿಗೂ ಟಿವಿಕೆ ಮೈತ್ರಿಯೆಂದ ಕೈ ಪಕ್ಷ ! ಅಧಿಕಾರಕ್ಕಾಗಿ ತನ್ನನ್ನು ಬಿಟ್ಟು ಹೋಗಿದ್ದಕ್ಕೆ ಡಿಎಂಕೆ ಕಿಡಿ

06-05-26 11:02 pm       HK News Desk   ದೇಶ - ವಿದೇಶ

ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆಗಾಗಿ ಕಾಂಗ್ರೆಸ್, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಗೆ ತನ್ನ ಸಂಪೂರ್ಣ ಬೆಂಬಲವನ್ನು ಅಧಿಕೃತವಾಗಿ ಘೋಷಿಸಿದೆ. ಇದೇ ವೇಳೆ, ವಿಜಯ್ ಅವರು ಸರ್ಕಾರ ರಚನೆಗೆ ರಾಜ್ಯಪಾಲರಲ್ಲಿ ಹಕ್ಕು ಮಂಡಿಸಿದ್ದು ಶೀಘ್ರ ಸರ್ಕಾರ ರಚನೆ ಮಾಡಲು ಮುಂದಾಗಿದ್ದಾರೆ. 

ಚೆನ್ನೈ, ಮೇ 6 ತಮಿಳುನಾಡಿನಲ್ಲಿ ಹೊಸ ಸರ್ಕಾರ ರಚನೆಗಾಗಿ ಕಾಂಗ್ರೆಸ್, ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ)ಗೆ ತನ್ನ ಸಂಪೂರ್ಣ ಬೆಂಬಲವನ್ನು ಅಧಿಕೃತವಾಗಿ ಘೋಷಿಸಿದೆ. ಇದೇ ವೇಳೆ, ವಿಜಯ್ ಅವರು ಸರ್ಕಾರ ರಚನೆಗೆ ರಾಜ್ಯಪಾಲರಲ್ಲಿ ಹಕ್ಕು ಮಂಡಿಸಿದ್ದು ಶೀಘ್ರ ಸರ್ಕಾರ ರಚನೆ ಮಾಡಲು ಮುಂದಾಗಿದ್ದಾರೆ. 

ಇದೇ ವೇಳೆ, ತಮಿಳುನಾಡು ಕಾಂಗ್ರೆಸ್ ಹೇಳಿಕೆ ಬಿಡುಗಡೆ ಮಾಡಿದ್ದು ರಾಜ್ಯದ ಜನತೆ ವಿಜಯ್ ನೇತೃತ್ವದ ಟಿವಿಕೆಗೆ ಸ್ಪಷ್ಟ, ಬಲವಾದ ಮತ್ತು ಭಾರೀ ತೀರ್ಪು ನೀಡಿದ್ದಾರೆ. ತಮಿಳುನಾಡು ಕಾಂಗ್ರೆಸ್ ಸಮಿತಿ ಟಿವಿಕೆ ಸರ್ಕಾರ ರಚನೆಗೆ ಸಂಪೂರ್ಣ ಬೆಂಬಲ ನೀಡಲು ತೀರ್ಮಾನಿಸಿದೆ ಎಂದು ಪತ್ರದಲ್ಲಿ ಹೇಳಿದೆ. ಅಲ್ಲದೆ, ಭಾರತ ಸಂವಿಧಾನವನ್ನು ನಂಬದ ಯಾವುದೇ ಶಕ್ತಿಗಳನ್ನು ಈ ಮೈತ್ರಿಯಿಂದ ದೂರವಿಡುವ ವರೆಗೆ ನಮ್ಮ ಬೆಂಬಲ ಮುಂದುವರಿಯುತ್ತದೆ ಎಂದು ಪಕ್ಷ ಸ್ಪಷ್ಟಪಡಿಸಿದೆ.

ಟಿವಿಕೆ ಮತ್ತು ತಮಿಳುನಾಡು ಕಾಂಗ್ರೆಸ್ ನಡುವಿನ ಈ ಮೈತ್ರಿ, ಪೆರುಂತಲೈವರ್ ಕಾಮರಾಜ್ ಅವರ ತಮಿಳುನಾಡಿನ ಸುವರ್ಣಯುಗವನ್ನು ಮರಳಿ ತರಲು ಪ್ರಯತ್ನಿಸಲಿದೆ. ಜೊತೆಗೆ ತಂದೈ ಪೆರಿಯಾರ್ ಅವರ ಸಾಮಾಜಿಕ ನ್ಯಾಯದ ತತ್ವಗಳು ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನಾತ್ಮಕ ಆದರ್ಶಗಳನ್ನು ಮುಂದಿನ ವರ್ಷಗಳಲ್ಲಿ ಮುಂದುವರಿಸುವ ಬದ್ಧತೆಯೂ ಇದೆ ಎಂದು ಹೇಳಿದೆ. ಕಾಂಗ್ರೆಸ್, ಟಿವಿಕೆಯೊಂದಿಗೆ ಈ ಮೈತ್ರಿ ಕೇವಲ ಸರ್ಕಾರ ರಚನೆಗೆ ಮಾತ್ರ ಸೀಮಿತವಾಗದೇ, ಭವಿಷ್ಯದ ಲೋಕಸಭೆ ಮತ್ತು ರಾಜ್ಯಸಭೆ ಚುನಾವಣೆಗಳಲ್ಲಿಯೂ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. 

ತನ್ನ ಪಕ್ಷಕ್ಕೆ ಬೆಂಬಲ ನೀಡಿದ ಕಾಂಗ್ರೆಸ್ ನಾಯಕರನ್ನು ವಿಜಯ್ ಅವರು ಹೂಮಾಲೆ ಸ್ವಾಗತಿಸಿದ್ದಾರೆ. ಇದೇ ವೇಳೆ, ತನ್ನೊಂದಿಗಿನ ಮೈತ್ರಿ ಮುರಿದುಕೊಂಡು ಟಿವಿಕೆ ಜೊತೆ ಸೇರಿದ ಕಾಂಗ್ರೆಸ್ ಬಗ್ಗೆ ಡಿಎಂಕೆ ನಾಯಕ ಸ್ಟಾಲಿನ್ ಕಿಡಿಕಾರಿದ್ದು ಬೆನ್ನಿಗೆ ಚೂರಿ ಹಾಕಿದ್ದಾಗಿ ಕಟು ನುಡಿಯಾಡಿದೆ