ಸಾಮಾನ್ಯ ಆಟೋ ಚಾಲಕನನ್ನು ಶಾಸಕನಾಗಿಸಿದ 'ದಳಪತಿ' ; ಎಐಎಡಿಎಂಕೆ ಭದ್ರಕೋಟೆ ರಾಯಪುರಂನಲ್ಲಿ ಸಂಚಲನ ! 

05-05-26 10:30 pm       HK News Staffer   ದೇಶ - ವಿದೇಶ

ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ಭಾರತದ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸ್ಪರ್ಧಿಸಿದ ಮೊದಲ ಬಾರಿಯಲ್ಲೇ ನೇರವಾಗಿ ತನ್ನ ಪಕ್ಷವನ್ನು ಬಹುಮತದತ್ತ ಒಯ್ದು ಸಿಎಂ ಗಾದಿಗೇರುತ್ತಿದ್ದಾರೆ.

ಚೆನ್ನೈ, ಮೇ 5: ದಳಪತಿ ವಿಜಯ್ ಅವರ ಟಿವಿಕೆ ಪಕ್ಷವು ಭಾರತದ ಇತಿಹಾಸದಲ್ಲೇ ಹೊಸ ಇತಿಹಾಸ ಸೃಷ್ಟಿಸಿದ್ದಾರೆ. ಸ್ಪರ್ಧಿಸಿದ ಮೊದಲ ಬಾರಿಯಲ್ಲೇ ನೇರವಾಗಿ ತನ್ನ ಪಕ್ಷವನ್ನು ಬಹುಮತದತ್ತ ಒಯ್ದು ಸಿಎಂ ಗಾದಿಗೇರುತ್ತಿದ್ದಾರೆ. ವಿಚಿತ್ರ ಎಂದರೆ, ತಮ್ಮೊಂದಿಗೆ ಆಟೋ ಚಾಲಕರು ಸೇರಿದಂತೆ ತೀರಾ ಸಾಮಾನ್ಯರನ್ನೂ ಶಾಸಕರನ್ನಾಗಿ ಮಾಡಿದ್ದಾರೆ. 

ರಾಯಪುರಂ ಕ್ಷೇತ್ರದಲ್ಲಿ ಸಾಮಾನ್ಯ ಆಟೋ ಚಾಲಕ ಕೆ. ವಿಜಯ್ ಧಾಮು ಚುನಾವಣಾ ಕಣಕ್ಕಿಳಿದು ಜಯಭೇರಿ ಬಾರಿಸಿದ್ದು ಎಲ್ಲರ ಹುಬ್ಬೇರುವಂತೆ ಮಾಡಿದೆ. ರಿಕ್ಷಾ ಓಡಿಸಿ ಕುಟುಂಬವನ್ನು ನಿಭಾಯಿಸುತ್ತಿದ್ದ ವಿಜಯ್ ಧಾಮು ಮೊದಲ ಬಾರಿಗೆ ಚುನಾವಣೆಗೆ ನಿಂತಿದ್ದರು. ಮೊದಲ ನಡೆಯಲ್ಲೇ ರಾಜ್ಯದ ರಾಜಕೀಯ ದಿಗ್ಗಜರಿಗೆ ಶಾಕ್ ನೀಡಿ ಇತಿಹಾಸ ಬರೆದಿದ್ದಾರೆ. 

ವಿಜಯ್ ಧಾಮು ಅವರು 55,000ಕ್ಕೂ ಹೆಚ್ಚು ಮತಗಳನ್ನು ಪಡೆದು 14,000 ಮತಗಳ ಅಂತರದಿಂದ ಜಯ ಗಳಿಸಿದ್ದಾರೆ. ಹಿರಿಯ ನಾಯಕ, ಐದು ಬಾರಿಯ ಶಾಸಕ ಎಐಎಡಿಎಂಕೆ ಪಕ್ಷದ ಡಿ. ಜಯಕುಮಾ‌ರ್ ಅವರನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದು ಸಂಚಲನ ಮೂಡಿಸಿದೆ. ಡಿಎಂಕೆ ಅಭ್ಯರ್ಥಿ ಸುಬೈರ್ ಖಾನ್ ಎರಡನೇ ಸ್ಥಾನ ಪಡೆದಿದ್ದು ಟಿವಿಕೆ ಪರವಾಗಿದ್ದ ಅಲೆಯ ಮುಂದೆ ಆಟೋ ಚಾಲಕ ಗೆಲುವಿನ ದಾಖಲೆ ಬರೆದಿದ್ದಾರೆ. 

ಮೀನುಗಾರ ಸಮುದಾಯ ಮತ್ತು ಕಾರ್ಮಿಕ ವರ್ಗವೇ ಹೆಚ್ಚಿರುವ ರಾಯಪುರಂ ಕ್ಷೇತ್ರದಲ್ಲಿ ಧಾಮು ಅವರ ಸ್ಥಳೀಯ ಪ್ರಣಾಳಿಕೆ ಕೆಲಸ ಮಾಡಿದೆ. ಹಾರ್ಬರ್ ಮೂಲಸೌಕರ್ಯ ಅಭಿವೃದ್ಧಿ, ಮೀನುಗಾರರಿಗೆ ಕಲ್ಯಾಣ ಯೋಜನೆಗಳು, ಕರಾವಳಿ ಭದ್ರತೆ ಮತ್ತು ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತೆಯ ಭರವಸೆಗಳು ಮತದಾರರನ್ನು ಸೆಳೆದಿದ್ದು ಮತವಾಗಿ ಪರಿವರ್ತನೆಯಾಗಿದೆ. 

1990ರ ದಶಕದಿಂದ ರಾಯಪುರಂನಲ್ಲಿ ಹಿಡಿತ ಹೊಂದಿದ್ದ ಎಐಎಡಿಎಂಕೆಗೆ ಈ ಸೋಲು ಭಾರಿ ಹಿನ್ನಡೆಯಾಗಿದೆ. ಮತ್ತೊಂದೆಡೆ, ಹಾಲಿ ಶಾಸಕರನ್ನು ಬದಲಿಸಿ ಹೊಸ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದ ಡಿಎಂಕೆಯ ಪ್ರಯೋಗವೂ ವಿಫಲವಾಗಿದ್ದು, ಮತದಾರರು ಪರ್ಯಾಯ ರಾಜಕೀಯ ಶಕ್ತಿಯನ್ನು ಕೈಹಿಡಿದಿದ್ದಾರೆ. 

ರಾಜಕೀಯ ಹಿನ್ನೆಲೆ ಇಲ್ಲದ ಧಾಮು, ನಟ ವಿಜಯ್ ಅವರ 'ವಿಜಯ್ ಮಕ್ಕಳ್ ಇಯಕ್ಕಂ' ಸಂಘಟನೆಯಲ್ಲಿ ಸಕ್ರಿಯವಾಗಿದ್ದರು. ದಿನನಿತ್ಯ ರಸ್ತೆಗಳಲ್ಲಿ ಆಟೋದಲ್ಲಿ ಸುತ್ತಾಡುತ್ತಾ ಪ್ರಯಾಣಿಕರ ಸೇವೆ ಮಾಡುತ್ತಿದ್ದ ವ್ಯಕ್ತಿ ಇಂದು ಜನರ ಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸುತ್ತಿರುವುದು ಜನಸಾಮಾನ್ಯರಲ್ಲಿ ಅಚ್ಚರಿ ಮೂಡಿಸಿದೆ.

In a remarkable political development, actor-turned-politician Vijay, widely known as “Dalapathi,” has created waves by backing an ordinary auto driver who has now emerged as an MLA. The unexpected victory has sent shockwaves across Royapuram, long considered a stronghold of the All India Anna Dravida Munnetra Kazhagam (AIADMK).