ತಿರುವನಂತಪುರಂ ಜಿಲ್ಲೆಯಲ್ಲೇ ಕಮಲ ಕಮಾಲ್ ; ಮೂರು ಕ್ಷೇತ್ರಗಳನ್ನು ಗೆದ್ದು ಬಿಜೆಪಿ ಇತಿಹಾಸ, ಖಾತೆ ತೆರೆಯದ ಪಾಲಕ್ಕಾಡ್, ತ್ರಿಶ್ಶೂರ್

04-05-26 07:04 pm       HK News Staffer   ದೇಶ - ವಿದೇಶ

ಕೇರಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮೂರು ಅಸೆಂಬ್ಲಿ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ರಾಜಧಾನಿ ತಿರುವನಂತಪುರಂ ಜಿಲ್ಲೆಯ ನೆಮ್ಮಾಮ್, ಕಜಕ್ಕೂಟ್ಟಮ್, ಚಾತನೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ‌.

ತಿರುವನಂತಪುರಂ, ಮೇ 4: ಕೇರಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಮೂರು ಅಸೆಂಬ್ಲಿ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ರಾಜಧಾನಿ ತಿರುವನಂತಪುರಂ ಜಿಲ್ಲೆಯ ನೆಮ್ಮಾಮ್, ಕಜಕ್ಕೂಟ್ಟಮ್, ಚಾತನೂರು ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿ ವಿಧಾನಸಭೆ ಪ್ರವೇಶಿಸಿದ್ದಾರೆ‌. 

ಬಿಜೆಪಿ ರಾಜ್ಯಾಧ್ಯಕ್ಷ, ಮಾಜಿ ಕೇಂದ್ರ ಸಚಿವ ರಾಜೀವ ಚಂದ್ರಶೇಖರ್ ಅವರು ಸಿಪಿಎಂ ಅಭ್ಯರ್ಥಿ, ಹಾಲಿ ಸಚಿವ ಶಿವನ್ ಕುಟ್ಟಿ ಅವರನ್ನು 3500 ಮತಗಳಿಂದ ಸೋಲಿಸಿ ಶಾಸಕರಾಗಿದ್ದಾರೆ. ತಿರುವನಂತಪುರಂ ಜಿಲ್ಲೆಯ ಮತ್ತೊಂದು ಕ್ಷೇತ್ರ ಕಜಕ್ಕೂಟ್ಟಂನಲ್ಲಿ ಮಾಜಿ ಕೇಂದ್ರ ಸಚಿವ ಮುರಳೀಧರನ್ ಗೆಲುವು ಸಾಧಿಸಿದ್ದು ಸಿಪಿಎಂ ಅಭ್ಯರ್ಥಿ ಕಡಕಂಪಳ್ಳಿ ಸುರೇಂದ್ರನ್ ಅವರನ್ನು ಅಲ್ಪ ಮತಗಳಿಂದ ಸೋಲಿಸಿ ಗೆಲುವು ಸಾಧಿಸಿದ್ದಾರೆ. 

ಅದೇ ಜಿಲ್ಲೆಯ ಚಾತನೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿಬಿ ಗೋಪಕುಮಾರ್ 4300 ಮತಗಳಿಂದ ಸಿಪಿಎಂ ಅಭ್ಯರ್ಥಿ ರಾಜೇಂದ್ರನ್ ಅವರನ್ನು ಸೋಲಿಸಿ ಇತಿಹಾಸ ನಿರ್ಮಿಸಿದ್ದಾರೆ. 2016ರಲ್ಲಿ ಓ ರಾಜಗೋಪಾಲ್ ನೆಮ್ಮಾಮ್ ಕ್ಷೇತ್ರದಲ್ಲಿ ಗೆಲುವು ಕಂಡಿದ್ದು ಬಿಟ್ಟರೆ ಬಿಜೆಪಿ ಬೇರಾವುದೇ ಶಾಸಕ ಸ್ಥಾನ ಗೆದ್ದಿರಲಿಲ್ಲ. ಇದೇ ಮೊದಲ ಬಾರಿಗೆ ಒಂದಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ಬಿಜೆಪಿ ಗೆಲುವಿನ ನಗೆ ಬೀರಿದೆ. 

ಪಾಲಕ್ಕಾಡ್ ನಲ್ಲಿ ಶೋಭಾ ಸುರೇಂದ್ರನ್ ಖಾತೆ ತೆರೆಯುವ ಲಕ್ಷಣ ಇದ್ದರೂ, ಕಾಂಗ್ರೆಸಿನ ರಮೇಶ್ ಪಿಶರೋಡಿ ಮುಂದೆ ಸೋಲನುಭವಿಸಿದ್ದಾರೆ. ತ್ರಿಶೂರ್ ಜಿಲ್ಲೆಯಲ್ಲಿ ಸುರೇಶ್ ಗೋಪಿ ಸಂಸದನಾಗಿದ್ದರೂ ಅಲ್ಲಿನ ಅಸೆಂಬ್ಲಿ ಕ್ಷೇತ್ರದಲ್ಲಿ ಪದ್ಮಜಾ ವೇಣುಗೋಪಾಲ್ ಗೆ ಗೆಲುವು ದಕ್ಕಲಿಲ್ಲ. ವಿಶ್ವಾಸ ಮೂಡಿಸಿದ್ದ ಕೇಂದ್ರ ಸಚಿವ ಜಾರ್ಜ್ ಕುರಿಯನ್ ಅವರು ಕೊಟ್ಟಾಯಂ ಜಿಲ್ಲೆಯ ಕಂಜಿರಪಳ್ಳಿ ಕ್ಷೇತ್ರದಲ್ಲಿ ಮೂರನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ. 

ಕಾಂಗ್ರೆಸ್ ನೇತೃತ್ವದ ಯುಡಿಎಫ್ ನೂರು ಸೀಟು ಗೆಲ್ಲುವ ಮೂಲಕ ಹತ್ತು ವರ್ಷಗಳ ಬಳಿಕ ಕೇರಳದಲ್ಲಿ ಅಧಿಕಾರ ಹಿಡಿದಿದೆ.‌ ಆಡಳಿತ ರೂಢ ಎಡರಂಗ 35 ಸ್ಥಾನಗಳೊಂದಿಗೆ ಹೀನಾಯ ಸೋಲು ಕಂಡು ಅಧಿಕಾರದಿಂದ ಹೊರಬಿದ್ದಿದೆ.