ಶಾಂತಿ ಮಾತುಕತೆಗಿಳಿದ ಪಾಕಿಸ್ತಾನ ವಿರುದ್ಧ ಕಿಡಿಕಾರಿದ ಇಸ್ರೇಲ್ ; ಕ್ಯಾನ್ಸರ್ ರಾಜ್ಯವೆಂದು ಟೀಕಿಸಿದ್ದಕ್ಕೆ ಕಿಡಿ, ಅಸ್ತಿತ್ವಕ್ಕಾಗಿ ಯಾವ ಕ್ರಮಕ್ಕೂ ಹಿಂಜರಿಯಲ್ಲ ಎಂದ ನೆತನ್ಯಾಹು 

10-04-26 11:05 pm       HK News Staffer   ದೇಶ - ವಿದೇಶ

ಅಮೆರಿಕ - ಇರಾನ್ ಮಧ್ಯೆ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಮುಂದಾಗಿರುವ ಪಾಕಿಸ್ತಾನ ವಿರುದ್ಧ ಇಸ್ರೇಲ್ ಕಿಡಿಕಾರಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಅವರು,  ಇಸ್ರೇಲ್ ಕದನ ವಿರಾಮ ಉಲ್ಲಂಘಿಸಿ ಲೆಬನಾನ್ ಮೇಲೆ ದಾಳಿ ನಡೆಸಿದ್ದಕ್ಕೆ ಎಲ್ಲ ನಾಶವಾಗಲಿ, ಅದು ಕ್ಯಾನ್ಸರ್ ದೇಶ ಎಂದು ಟೀಕಿಸಿದ್ದಕ್ಕೆ ಇಸ್ರೇಲ್ ತೀವ್ರ ಕಿಡಿಕಾರಿದೆ.

ಟೆಲ್ ಅವೀವ್, ಎಪ್ರಿಲ್ 10: ಅಮೆರಿಕ - ಇರಾನ್ ಮಧ್ಯೆ ಶಾಂತಿ ಮಾತುಕತೆಗೆ ಮಧ್ಯಸ್ಥಿಕೆ ವಹಿಸಲು ಮುಂದಾಗಿರುವ ಪಾಕಿಸ್ತಾನ ವಿರುದ್ಧ ಇಸ್ರೇಲ್ ಕಿಡಿಕಾರಿದೆ. ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸೀಫ್ ಅವರು,  ಇಸ್ರೇಲ್ ಕದನ ವಿರಾಮ ಉಲ್ಲಂಘಿಸಿ ಲೆಬನಾನ್ ಮೇಲೆ ದಾಳಿ ನಡೆಸಿದ್ದಕ್ಕೆ ಎಲ್ಲ ನಾಶವಾಗಲಿ, ಅದು ಕ್ಯಾನ್ಸರ್ ದೇಶ ಎಂದು ಟೀಕಿಸಿದ್ದಕ್ಕೆ ಇಸ್ರೇಲ್ ತೀವ್ರ ಕಿಡಿಕಾರಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‘ಇಸ್ರೇಲ್ ವಿನಾಶಕ್ಕೆ ಪಾಕ್ ರಕ್ಷಣಾ ಸಚಿವರು ಕರೆ ನೀಡಿರುವುದು “ಅಸ್ವೀಕಾರಾರ್ಹ” ಎಂದು ಖಂಡಿಸಿದ್ದಾರೆ. ಯಾವುದೇ ದೇಶ ಅಥವಾ ಸರ್ಕಾರದಿಂದ ಇಂತಹ ಹೇಳಿಕೆಯನ್ನು ಸಹಿಸಲು ಸಾಧ್ಯವಿಲ್ಲ. ಅದರಲ್ಲೂ ಶಾಂತಿ ಮಧ್ಯಸ್ಥಿಕೆಯ ಪಾತ್ರ ವಹಿಸುವ ದೇಶ ಇಂತಹ ಪದ ಬಳಕೆ ಮಾಡುವುದು ಸರಿಯಲ್ಲ. ಇಸ್ರೇಲ್ ತನ್ನ ಭದ್ರತೆ ಮತ್ತು ಅಸ್ತಿತ್ವವನ್ನು ರಕ್ಷಿಸಿಕೊಳ್ಳಲು ಯಾವ ಕ್ರಮಕ್ಕೂ ಹಿಂದೇಟು ಹಾಕುವುದಿಲ್ಲ ಎಂದು ಗುಡುಗಿದ್ದಾರೆ. 

ಇದಲ್ಲದೆ, ಇಸ್ರೇಲ್ ವಿದೇಶಾಂಗ ಸಚಿವ ಗಿಡಿಯಾನ್ ಸಾರ್ ಕೂಡ ಪಾಕಿಸ್ತಾನದ ಹೇಳಿಕೆಗಳನ್ನು ತೀವ್ರವಾಗಿ ವಿರೋಧಿಸಿದ್ದು ಇಂತಹ ಭಾಷೆ ದ್ವೇಷವನ್ನು ಉತ್ತೇಜಿಸುವಂತಾಗಿದೆ ಎಂದು ಹೇಳಿದ್ದಾರೆ. “ಕ್ಯಾನ್ಸರ್‌ ರಾಜ್ಯ” ಎಂಬ ಪದ ಬಳಕೆ ಇಸ್ರೇಲ್‌ನ ಅಸ್ತಿತ್ವವನ್ನೇ ಪ್ರಶ್ನಿಸುವಂತಾಗಿದೆ ಎಂದು ಕಿಡಿಕಾರಿದ್ದಾರೆ. ಶಾಂತಿ ಮಾತುಕತೆ ನಡೆಸುವ ದೇಶದ ಜವಾಬ್ದಾರಿಯುತ ಸಚಿವರು ಇಂತಹ ಭಾಷೆ ಬಳಸುವುದು ಸರಿಯಲ್ಲ ಎಂದು ಹೇಳಿದ್ದಾರೆ.

ಖವಾಜಾ ಆಸಿಫ್ ಇಸ್ರೇಲ್‌ ವಿರುದ್ಧ ಸಿಟ್ಟು ಹೊರಹಾಕುವುದು ಇದೇ ಮೊದಲೇನಲ್ಲ. ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಮಾನವಕುಲದ ಅತ್ಯಂತ ದೊಡ್ಡ ಅಪರಾಧಿ. ಅಮೆರಿಕ ವೆನೆಜುವೆಲಾದ ಅಧ್ಯಕ್ಷರನ್ನು ಸೆರೆಹಿಡಿದಂತೆಯೇ ನೆತನ್ಯಾಹು ಅವರನ್ನು ಅಪಹರಿಸಿ ಅಂತರಾಷ್ಟ್ರೀಯ ನ್ಯಾಯಾಲಯಕ್ಕೆ ಒಪ್ಪಿಸಬೇಕು ಎಂದು ಅವರು ಈ ಹಿಂದೆ ಆಗ್ರಹಿಸಿದ್ದರು.