ಯುಪಿಎಸ್ಸಿ ಪಾಸ್, ಐಎಎಸ್ ಅಧಿಕಾರಿ ಆಗುತ್ತೇನೆಂದು ನಂಬಿಸಿದ್ದ ಯುವಕ ; ಬಿಹಾರದ ಗ್ರಾಮಸ್ಥರಿಂದ ಅದ್ದೂರಿ ಪಾರ್ಟಿ, ಸ್ಥಳೀಯ ಶಾಸಕರಿಂದ ಸನ್ಮಾನ, ಅಸಲಿ ಸತ್ಯ ತಿಳಿದು ಶಾಕ್!

16-03-26 12:38 pm       HK News Staffer   ದೇಶ - ವಿದೇಶ

ಬಿಹಾರದ ಶೇಖ್ ಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಒಂದು ವಿಲಕ್ಷಣ ಘಟನೆ ನಡೆದಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಎಎಸ್ ಅಧಿಕಾರಿಯಾಗಿದ್ದಾನೆ ಎಂದು ನಂಬಿ ಇಡೀ ಗ್ರಾಮವೇ ಒಬ್ಬ ಯುವಕನಿಗಾಗಿ ಅದ್ಧೂರಿ ಪಾರ್ಟಿ ಆಯೋಜಿಸಿತ್ತು. ಆದರೆ ನಂತರ ಆ ರ್ಯಾಂಕ್ ಆತನದ್ದಲ್ಲ, ಬೇರೆಯವರದ್ದು ಎಂದು ತಿಳಿದುಬಂದಿದೆ.

ಪಾಟ್ನಾ, ಮಾರ್ಚ್ 10: ಬಿಹಾರದ ಶೇಖ್ ಪುರ ಜಿಲ್ಲೆಯಲ್ಲಿ ಇತ್ತೀಚೆಗೆ ಒಂದು ವಿಲಕ್ಷಣ ಘಟನೆ ನಡೆದಿದೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಐಎಎಸ್ ಅಧಿಕಾರಿಯಾಗಿದ್ದಾನೆ ಎಂದು ನಂಬಿ ಇಡೀ ಗ್ರಾಮವೇ ಒಬ್ಬ ಯುವಕನಿಗಾಗಿ ಅದ್ಧೂರಿ ಪಾರ್ಟಿ ಆಯೋಜಿಸಿತ್ತು. ಆದರೆ ನಂತರ ಆ ರ್ಯಾಂಕ್ ಆತನದ್ದಲ್ಲ, ಬೇರೆಯವರದ್ದು ಎಂದು ತಿಳಿದುಬಂದಿದೆ. 

ಫತೇಪುರ್ ಜಿಲ್ಲೆಯ ಮೂಲದ ಯುವಕ ರಂಜಿತ್ ಕುಮಾರ್ ಎಂಬ ಯುವಕ ತಾನು 2025ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು ಐಎಎಸ್ ಅಧಿಕಾರಿಯಾಗಲಿದ್ದೇನೆ ಎಂದು ಹೇಳಿಕೊಂಡಿದ್ದ. ಈ ಸುದ್ದಿ ಕೇಳಿ ಸಂತಸಗೊಂಡ ಗ್ರಾಮಸ್ಥರು ಆತನನ್ನು ಹೂಮಾಲೆ ಹಾಕಿ, ಮೆರವಣಿಗೆ ಮಾಡಿ, ಸಿಹಿ ಹಂಚಿ ಸಡಗರ ಮಾಡಿದ್ದರು. ಆರ್ಜೆಡಿ ಪಕ್ಷದ ಮಾಜಿ‌ ಶಾಸಕ ವಿಜಯ್ ಸಾಮ್ರಾಟ್ ತನ್ನ ಬೆಂಬಲಿಗರೊಂದಿಗೆ ರಂಜಿತ್ ಕುಮಾರ್ ಮನೆಗೆ ಬಂದು ಸನ್ಮಾನಿಸಿ ಗಿಫ್ಟ್ ಕೊಟ್ಟು ಹೋಗಿದ್ದರು. 

ಸಂಭ್ರಮಾಚರಣೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ವಿಡಿಯೋದಲ್ಲಿ ಗ್ರಾಮಸ್ಥರು ಯುವಕನನ್ನು ಹೆಗಲ ಮೇಲೆ ಹೊತ್ತು ಸಂಭ್ರಮಿಸುತ್ತಿರುವುದು ಕಂಡುಬಂದಿತ್ತು. ಸಂಭ್ರಮ ಮುಗಿದ ಕೆಲವೇ ದಿನಗಳಲ್ಲಿ ಅಸಲಿ ವಿಷಯ ಹೊರಬಂದಿದೆ. ಯುವಕ ಹೇಳಿಕೊಂಡಿದ್ದ ರ್ಯಾಂಕ್ ಸಂಖ್ಯೆ ಮತ್ತು ಹೆಸರು ವಾಸ್ತವವಾಗಿ ಬೇರೆ ರಾಜ್ಯದ ಮತ್ತೊಬ್ಬ ಅಭ್ಯರ್ಥಿಗೆ ಸೇರಿತ್ತು. ಕೇವಲ ಹೆಸರಿನ ಸಾಮ್ಯತೆಯನ್ನು ಬಳಸಿಕೊಂಡು, ಉದ್ದೇಶಪೂರ್ವಕ ಈ ಯುವಕ ಸುಳ್ಳು ಹೇಳಿದ್ದ ಎಂಬುದು ಪತ್ತೆಯಾಗಿದೆ.

ಯುಪಿಎಸ್ಸಿ ರ್ಯಾಂಕ್ ಲಿಸ್ಟ್ ಪರಿಶೀಲಿಸಿದಾಗ, ಆತ ಹೇಳಿದ್ದ 440 ನೇ ಲಿಸ್ಟ್ ಕರ್ನಾಟಕದ ಚಿಕ್ಕಬಳ್ಳಾಪುರ ಜಿಲ್ಲೆಯ ರಂಜಿತ್ ಕುಮಾರ್ ಆರ್. ಎಂದು ಉಲ್ಲೇಖ ಆಗಿತ್ತು. ಫತೇಪುರ್ ಜಿಲ್ಲೆಯ ರಂಜಿತ್ ಕುಮಾರ್ ಎಂದು ನಮೂದು ಇರಲಿಲ್ಲ. ಅದನ್ನೇ ನೆಪವಾಗಿಸಿ ಕೆಲವು ಗ್ರಾಮಸ್ಥರನ್ನು ನಂಬಿಸಿ ಪ್ರಚಾರಕ್ಕಾಗಿ ಛೂ ಬಿಟ್ಟಿದ್ದ. ಸತ್ಯ ತಿಳಿಯುತ್ತಿದ್ದಂತೆ ಅದ್ದೂರಿ ಪಾರ್ಟಿ ಮಾಡಿದ್ದ ಗ್ರಾಮಸ್ಥರು ತೀವ್ರ ಮುಜುಗರಕ್ಕೆ ಒಳಗಾಗಿದ್ದಾರೆ. ಯುವಕನ ಈ ವಂಚನೆಯ ಬಗ್ಗೆ ಪೊಲೀಸರು ಫೋನ್ ಮಾಡಿ ಕರೆದಿದ್ದು ದಾಖಲೆ ಪತ್ರಗಳನ್ನು ನೀಡುವಂತೆ ಹೇಳಿದಾಗ ಯಾರಿಗೂ ಹೇಳದೆ ದೆಹಲಿಗೆ ಪರಾರಿಯಾಗಿದ್ದಾನೆ. ಘಟನೆ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.