ಹರ್ಮುಜ್ ಜಲಸಂಧಿ ನಿರ್ಬಂಧ ಉಲ್ಲಂಘಿಸಿದ 10 ತೈಲ ಹಡಗಿನ ಮೇಲೆ ಇರಾನ್ ದಾಳಿ ; ಬಾಂಬ್ ಹಾಕಿ ಉಡಾಯಿಸಿದ್ದಾಗಿ ರೆವೊಲ್ಯುಶನರಿ ಗಾರ್ಡ್ ಮಾಹಿತಿ

04-03-26 10:09 pm       HK News Staffer   ದೇಶ - ವಿದೇಶ

ಏಷ್ಯಾ ರಾಷ್ಟ್ರಗಳ ಪಾಲಿಗೆ ನೌಕಾ ಯಾನಕ್ಕೆ ಪ್ರಮುಖ ಕೊಂಡಿಯಾಗಿದ್ದ ಹರ್ಮುಜ್ ಜಲಸಂಧಿಗೆ ಇರಾನ್ ನಿರ್ಬಂಧ ಹೇರಿದೆ. ನಿರ್ಬಂಧ ಉಲ್ಲ‌ಂಘಿಸಿದರೆ ದಾಳಿ ನಡೆಸುವುದಾಗಿ ಇರಾನ್ ಘೋಷಿಸಿದ್ದು ಇದರಿಂದಾಗಿ ನೂರಾರು ಹಡಗುಗಳು ಅಲ್ಲಿ ಸಿಕ್ಕಿಬಿದ್ದಿವೆ. .

ಟೆಹ್ರಾನ್, ಮಾರ್ಚ್ 4: ಏಷ್ಯಾ ರಾಷ್ಟ್ರಗಳ ಪಾಲಿಗೆ ನೌಕಾ ಯಾನಕ್ಕೆ ಪ್ರಮುಖ ಕೊಂಡಿಯಾಗಿದ್ದ ಹರ್ಮುಜ್ ಜಲಸಂಧಿಗೆ ಇರಾನ್ ನಿರ್ಬಂಧ ಹೇರಿದೆ. ನಿರ್ಬಂಧ ಉಲ್ಲ‌ಂಘಿಸಿದರೆ ದಾಳಿ ನಡೆಸುವುದಾಗಿ ಇರಾನ್ ಘೋಷಿಸಿದ್ದು ಇದರಿಂದಾಗಿ ನೂರಾರು ಹಡಗುಗಳು ಅಲ್ಲಿ ಸಿಕ್ಕಿಬಿದ್ದಿವೆ. ಇದೇ ವೇಳೆ, ನಿರ್ಬಂಧವನ್ನು ಉಲ್ಲಂಘಿಸಿ ತೈಲ ಸಾಗಿಸುತ್ತಿದ್ದ 10 ಹಡಗುಗಳ ಮೇಲೆ ದಾಳಿ ನಡೆಸಿರುವುದಾಗಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (ಐಆರ್‌ಜಿಸಿ) ಮಾಹಿತಿ ನೀಡಿದೆ. 

ಜಲಸಂಧಿಯು ವಿಶ್ವದ ಒಟ್ಟು ತೈಲ ಪೂರೈಕೆಯ ಶೇಕಡ 20 ರಷ್ಟು ಭಾಗವನ್ನು ಸಾಗಿಸುವ ಪ್ರಮುಖ ಜಲಮಾರ್ಗವಾಗಿದೆ. ಜಲಸಂಧಿ ನಿರ್ಬಂಧ ವಿಧಿಸಿರುವ ಘಟನೆಯಿಂದ ಭಾರತದ ಮೇಲೆ ನೇರ ಪರಿಣಾಮ ಬೀರಿದೆ. ಸುಮಾರು 37 ಭಾರತೀಯ ಹಡಗುಗಳು, 10,000 ಕೋಟಿ ರೂ. ಮೌಲ್ಯದ ಸರಕುಗಳೊಂದಿಗೆ ಮತ್ತು 1,109 ನಾವಿಕರೊಂದಿಗೆ ಹೊರ್ಮುಜ್ ಜಲಸಂಧಿ ಅಥವಾ ಒಮಾನ್ ಕೊಲ್ಲಿಯಲ್ಲಿ ಸಿಕ್ಕಿಕೊಂಡಿವೆ. 

ಭಾರತವು ಈ ಜಲಸಂಧಿಯ ಮೂಲಕ ಪ್ರತಿದಿನ ಸುಮಾರು 26 ಲಕ್ಷ ಬ್ಯಾರೆಲ್ ತೈಲವನ್ನು ಆಮದು ಮಾಡಿಕೊಳ್ಳುತ್ತದೆ. ಸದ್ಯದ ಪರಿಸ್ಥಿತಿ ಮುಂದುವರಿದರೆ, ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳಲ್ಲಿ ತೈಲ ಪೂರೈಕೆ ಇಲ್ಲದೆ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ. ಭಾರತ ಸರ್ಕಾರ ಪರ್ಯಾಯ ವ್ಯವಸ್ಥೆಗಳ ಬಗ್ಗೆ ಚಿಂತಿಸುತ್ತಿದ್ದು, ಒಂದು ತಿಂಗಳ ಕಾಲಕ್ಕೆ ಬೇಕಾಗುವಷ್ಟು ತೈಲ ಸಂಗ್ರಹ ಇದೆ ಎನ್ನುತ್ತಿದೆ. 

ಈಗ ಹರ್ಮುಜ್ ಸಮುದ್ರದಲ್ಲಿ ದಾಳಿಗೀಡಾಗಿರುವ ಹಡಗು ಯಾವ ದೇಶದ್ದು ಎಂದು ಗೊತ್ತಾಗಿಲ್ಲ. ಅಲ್ಲಿ ವಿವಿಧ ರಾಷ್ಟ್ರಗಳಿಗೆ ಸೇರಿದ ನೂರಾರು ಹಡಗುಗಳಿದ್ದು ಯಾವುದಕ್ಕೆ ಬಾಂಬ್ ದಾಳಿಯಾಗಿದೆ ಎಂಬ ಮಾಹಿತಿ ಲಭಿಸಿಲ್ಲ.