Ahmedabad Plane Crash, 241 Dead, One survives, Air India: ಅಹ್ಮದಾಬಾದ್ ವಿಮಾನ ದುರಂತ ; ಹಾಸ್ಟೆಲ್ ಮಕ್ಕಳಿದ್ದ ಕಟ್ಟಡಕ್ಕೆ ಬಡಿದು ಭಸ್ಮ, ಒಬ್ಬರನ್ನು ಬಿಟ್ಟು 241 ಜನ ಮೃತ್ಯು, ಮೃತರಿಗೆ ತಲಾ ಒಂದು ಕೋಟಿ ಪರಿಹಾರ ಘೋಷಿಸಿದ ಟಾಟಾ ಕಂಪನಿ 

12-06-25 08:52 pm       HK News Desk   ದೇಶ - ವಿದೇಶ

ಏರ್ ಇಂಡಿಯಾ ಬೋಯಿಂಗ್ ವಿಮಾನ ಅಪಘಾತದಲ್ಲಿ ಅದರಲ್ಲಿದ್ದ 12 ಸಿಬಂದಿ ಮತ್ತು ಪ್ರಯಾಣಿಕರು ಸೇರಿ ಒಟ್ಟು 241 ಮಂದಿ ಸಜೀವ ದಹನವಾಗಿದ್ದಾರೆ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಯಂತ್ರಣ ತಪ್ಪಿದ್ದು ಹಾಸ್ಟೆಲ್ ಮಕ್ಕಳಿದ್ದ ಕಟ್ಟಡಕ್ಕೆ ಬಡಿದು ಬೆಂಕಿ ಹೊತ್ತಿಕೊಂಡು ಸ್ಫೋಟವಾಗಿದೆ.

ಅಹಮದಾಬಾದ್, ಜೂನ್ 12 : ಏರ್ ಇಂಡಿಯಾ ಬೋಯಿಂಗ್ ವಿಮಾನ ಅಪಘಾತದಲ್ಲಿ ಅದರಲ್ಲಿದ್ದ 12 ಸಿಬಂದಿ ಮತ್ತು ಪ್ರಯಾಣಿಕರು ಸೇರಿ ಒಟ್ಟು 241 ಮಂದಿ ಸಜೀವ ದಹನವಾಗಿದ್ದಾರೆ. ಟೇಕಾಫ್ ಆದ ಕೆಲವೇ ಕ್ಷಣಗಳಲ್ಲಿ ವಿಮಾನ ನಿಯಂತ್ರಣ ತಪ್ಪಿದ್ದು ಹಾಸ್ಟೆಲ್ ಮಕ್ಕಳಿದ್ದ ಕಟ್ಟಡಕ್ಕೆ ಬಡಿದು ಬೆಂಕಿ ಹೊತ್ತಿಕೊಂಡು ಸ್ಫೋಟವಾಗಿದೆ. ವಿಮಾನ ಸ್ಫೋಟಕ್ಕೂ ಮೊದಲಿನ 40 ಸೆಕಂಡಿನ ವಿಡಿಯೋ ಏರ್ಪೋರ್ಟ್ ಆವರಣದ ಸಿಸಿಟಿವಿಯಲ್ಲಿ ದಾಖಲಾಗಿದ್ದು ಟೇಕಾಫ್ ಆಗಿ ನಿಧಾನಗತಿಯತ್ತ ಸಾಗುತ್ತ ಕೆಳಮುಖವಾಗಿ ಬಂದು ಅವಘಡಕ್ಕೀಡಾಗಿತ್ತು. 

ಅಹ್ಮದಾಬಾದ್ ಪೊಲೀಸ್ ಕಮಿಷನರ್ ಪ್ರಕಾರ, 11 ಸೀಟ್ ನಂಬರಿನಲ್ಲಿದ್ದ ವ್ಯಕ್ತಿ ತೀವ್ರ ಸುಟ್ಟ ಗಾಯಗಳೊಂದಿಗೆ ಬದುಕಿ ಉಳಿದಿದ್ದಾರೆ. ಅವರ ಸ್ಥಿತಿ ಹೇಗಿದೆ ಎನ್ನುವ ಬಗ್ಗೆ ತಿಳಿಸಿಲ್ಲ. ವಿಮಾನ ಯಾನ ಸಚಿವ ರಾಮಮೋಹನ್ ನಾಯ್ಡು ಸ್ಥಳದಲ್ಲಿದ್ದು ಕಾರ್ಯಾಚರಣೆಗೆ ನೇತೃತ್ವ ನೀಡಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಕೂಡ ಸ್ಥಳಕ್ಕೆ ಬಂದಿದ್ದಾರೆ. ಇದೇ ವೇಳೆ, ಏರ್ ಇಂಡಿಯಾ ಸಂಸ್ಥೆಯ ನಿರ್ವಹಣೆ ಮಾಡುತ್ತಿರುವ ಟಾಟಾ ಸನ್ಸ್ ಕಂಪನಿ, ಮೃತಪಟ್ಟ ಎಲ್ಲರ ಕುಟುಂಬಸ್ಥರಿಗೂ ತಲಾ ಒಂದು ಕೋಟಿ ಪರಿಹಾರ ಘೋಷಣೆ ಮಾಡಿದೆ. ಅಲ್ಲದೆ, ಅಪಘಾತ ಸ್ಥಳದಲ್ಲಿ ಗಾಯಗೊಂಡವರಿಗೂ ಪರಿಹಾರ ಘೋಷಿಸಿದೆ. 

ವಿಮಾನವನ್ನು ಪೈಲಟ್ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ನಿರ್ವಹಿಸುತ್ತಿದ್ದರು. ಅವರಿಗೆ 8200 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವವಿತ್ತು. ಅವರ ಜೊತೆ ಸಹ ಪೈಲಟ್ ಆಗಿ ಮಂಗಳೂರು ಮೂಲದ ಮುಂಬೈ ನಿವಾಸಿ ಕ್ಲೈವ್ ಕುಂದರ್ ಇದ್ದರು. ಇವರಿಗೆ 1100 ಗಂಟೆಗಳ ಹಾರಾಟದ ಅನುಭವವಿತ್ತು. ವಿಮಾನವು ಅಹಮದಾಬಾದ್ ವಿಮಾನ ನಿಲ್ದಾಣದ ರನ್‌ವೇ 23 ರಿಂದ 13:39 IST (0809 UTC) ಕ್ಕೆ ಹೊರಟಿತ್ತು. ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ತುರ್ತು ಪರಿಸ್ಥಿತಿಯನ್ನು ಸೂಚಿಸುವ "ಮೇಡೇ" ಕರೆ ನಿಯಂತ್ರಣ ಕೊಠಡಿಗೆ ಬಂದಿತ್ತು. ಇದರ ನಂತರ, ATC ಕಡೆಯಿಂದ ಪೈಲಟ್ ಗೆ ಕರೆ ಮಾಡಿದಾಗ ಪ್ರತಿಕ್ರಿಯೆ ಬರಲಿಲ್ಲ. ಕೆಲವೇ ಕ್ಷಣಗಳಲ್ಲಿ, ವಿಮಾನವು ರನ್‌ವೇಯಿಂದ ಸ್ವಲ್ಪ ದೂರದಲ್ಲಿರುವ ವಸತಿ ಪ್ರದೇಶದಲ್ಲಿ ಪತನವಾಗಿತ್ತು. 

ಪ್ರತ್ಯಕ್ಷದರ್ಶಿಗಳ ಪ್ರಕಾರ, ಟೇಕ್ ಆಫ್ ಆದ ಕೆಲವು ನಿಮಿಷಗಳ ನಂತರ, ವಿಮಾನವು ನಿಯಂತ್ರಣ ಕಳಕೊಂಡಿದ್ದು ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಆಸ್ಪತ್ರೆ ಪಕ್ಕದಲ್ಲೇ ಘಟನೆ ನಡೆದಿದ್ದರಿಂದ ಗಾಯಾಳುಗಳನ್ನು ಅದೇ ಆಸ್ಪತ್ರೆ ಮತ್ತು ಹತ್ತಿರದ ಇತರ ವೈದ್ಯಕೀಯ ಕೇಂದ್ರಗಳಿಗೆ ದಾಖಲಿಸಲಾಗಿತ್ತು. ವಿಮಾನ ದುರಂತ ಪ್ರಕರಣದಲ್ಲಿ ಯಾರೂ ಬದುಕುಳಿದಿಲ್ಲ ಎಂದು ಮೂಲಗಳು ಮಾಹಿತಿ ನೀಡಿದ್ದು, ವಿಮಾನ ಪ್ರಯಾಣಿಕರಲ್ಲದೇ ಕಟ್ಟಡದಲ್ಲಿದ್ದ ಐವರು ಹಾಸ್ಟೆಲ್ ವಿದ್ಯಾರ್ಥಿಗಳೂ ಸಾವನ್ನಪ್ಪಿದ್ದಾರೆ. ಹೀಗಾಗಿ ದುರಂತದಲ್ಲಿ ಒಟ್ಟು 247 ಮಂದಿ ಸಾವಿಗೀಡಾಗಿದ್ದಾರೆ. ವಿಮಾನದಲ್ಲಿದ್ದ 242 ಜನರಲ್ಲಿ 169 ಭಾರತೀಯ ಪ್ರಜೆಗಳು, 53 ಬ್ರಿಟಿಷ್ ಪ್ರಜೆಗಳು, 1 ಕೆನಡಾ ಪ್ರಜೆ ಮತ್ತು 7 ಪೋರ್ಚುಗೀಸ್ ಪ್ರಜೆಗಳು ಇದ್ದರು ಎಂದು ತಿಳಿದುಬಂದಿದೆ. ಇದೇ ವಿಮಾನದಲ್ಲಿ ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ಅವರು ಲಂಡನ್ ಹೊರಟಿದ್ದರು. 

ಮಂಗಳೂರು ದುರಂತ ನೆನಪಿಸಿದ ವಿಮಾನ ಪತನ  

15 ವರ್ಷಗಳ ಹಿಂದೆ ಇದೇ ಮಾದರಿಯಲ್ಲಿ ಮಂಗಳೂರಿನ ಅಂತಾರಾಷ್ಟ್ರೀಯ ನಿಲ್ದಾಣದಲ್ಲಿ ವಿಮಾನ ಪತನಗೊಂಡಿತ್ತು. ದುರಂತದಲ್ಲಿ ಸಿಬ್ಬಂದಿ ಸೇರಿ 158 ಮಂದಿ ಮೃತಪಟ್ಟಿದ್ದರು. ವಿಮಾನದಲ್ಲಿ 19 ಮಕ್ಕಳು ಹಾಗೂ 6 ಸಿಬ್ಬಂದಿ ಸಹಿತ 166 ಮಂದಿ ಪ್ರಯಾಣಿಸುತ್ತಿದ್ದರು. 8 ಮಂದಿ ಪವಾಡಸದೃಶ ಬದುಕಿ ಬಂದಿದ್ದರು. 2010ರ ಮೇ 22ರಂದು ಬೆಳಗ್ಗೆ 6.20ಕ್ಕೆ ದುಬೈನಿಂದ ಮಂಗಳೂರಿಗೆ ಬಂದಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ರನ್‌ವೇ ಬದಲು ಸೂಚನಾ ಗೋಪುರದ ಕಂಬಗಳಿಗೆ ಡಿಕ್ಕಿ ಹೊಡೆದು ಗುಡ್ಡ ಭಾಗದಲ್ಲಿ ಉರುಳಿ ಬಿದ್ದಿತ್ತು. ಪೈಲೆಟ್‌ ತಪ್ಪಿನಿಂದಾಗಿ ಘಟನೆ ನಡೆದಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿತ್ತು.

In a catastrophic tragedy, an Air India Boeing aircraft crashed shortly after takeoff from Ahmedabad airport, killing 241 people, including five hostel students on the ground. The aircraft, carrying 242 passengers and crew members, lost control within moments of takeoff and crashed into a residential building housing children, bursting into flames and triggering a massive explosion.