Karnataka Bhavan, Sujay Kumar Shetty: ದಿಲ್ಲಿಯಲ್ಲಿ ನೂತನ ಕರ್ನಾಟಕ ಭವನ ಉದ್ಘಾಟನೆ ; ಕಾಮಗಾರಿ ನಡೆಸಿಕೊಟ್ಟ ಕಾರ್ಕಳ ಮೂಲದ ಗುತ್ತಿಗೆದಾರ ಸುಜಯ್ ಕುಮಾರ್ ಶೆಟ್ಟಿಗೆ ಮುಖ್ಯಮಂತ್ರಿ ಸನ್ಮಾನ 

06-04-25 09:23 pm       HK News Desk   ದೇಶ - ವಿದೇಶ

ರಾಜಧಾನಿ ದೆಹಲಿಯಲ್ಲಿ ರಾಜ್ಯ ಸರಕಾರದ ವತಿಯಿಂದ ನಿರ್ಮಿಸಲಾಗಿರುವ ಕರ್ನಾಟಕ ಭವನ -1 (ಕಾವೇರಿ) ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್‌, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇದ್ದರು.

ನವದೆಹಲಿ, ಎ.6 : ರಾಜಧಾನಿ ದೆಹಲಿಯಲ್ಲಿ ರಾಜ್ಯ ಸರಕಾರದ ವತಿಯಿಂದ ನಿರ್ಮಿಸಲಾಗಿರುವ ಕರ್ನಾಟಕ ಭವನ -1 (ಕಾವೇರಿ) ಕಟ್ಟಡವನ್ನು ಸಿಎಂ ಸಿದ್ದರಾಮಯ್ಯ ಹಾಗೂ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಲೋಕಾರ್ಪಣೆಗೊಳಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ್‌, ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಇದ್ದರು.

ಕರ್ನಾಟಕ ಭವನ-2 ಚಿಂತನೆ ; ಸಿಎಂ 

ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಈ ಹಿಂದೆ ಇದು ಮೈಸೂರು ಭವನವಾಗಿತ್ತು. ದೆಹಲಿಯಲ್ಲಿ ಒಟ್ಟು ಮೂರು ಕರ್ನಾಟಕ ಭವನಗಳು ಇವೆ. ಸುಭದ್ರ ರಾಜ್ಯ ನಿರ್ಮಾಣದಲ್ಲಿ ಎಲ್ಲರ ಭಾಗವಹಿಸುವಿಕೆ ಅಗತ್ಯವಾಗಿದ್ದು, ಕೇಂದ್ರ ಸರ್ಕಾರದ ಬಳಿ ಹಲವು ಕೆಲಸ ಕಾರ್ಯಗಳಿಗಾಗಿ ಅಧಿಕಾರಿಗಳು, ಸಚಿವರು, ಶಾಸಕರು ದೆಹಲಿಗೆ ಬರಬೇಕಾಗುತ್ತದೆ. ಇವರೆಲ್ಲರಿಗೂ ಕರ್ನಾಟಕ ಭವನ ತಂಗಲು ಸಹಾಯವಾಗುತ್ತದೆ ಎಂದರು. ಅಲ್ಲದೆ, ಕರ್ನಾಟಕ ಭವನ-2ರ ಪುನರ್‌ ನಿರ್ಮಾಣ ಮಾಡುವ ಯೋಜನೆಯೂ ಇದೆ ಎಂದು ತಿಳಿಸಿದರು. 

ಕೊರೋನಾ ಸೇರಿ ಹಲವು ಸಂಕಷ್ಟಗಳಿಂದಾಗಿ ಕಟ್ಟಡ ಕಾಮಗಾರಿಗೆ ವಿಳಂಬವಾಯಿತು. ಈಗ ಭವ್ಯ ಕಟ್ಟಡ ನಿರ್ಮಾಣಗೊಂಡಿದೆ. ಕರ್ನಾಟಕ ಭವನ ಬೆಳೆದು ಬಂದ ಇತಿಹಾಸ ಕುರಿತು ಬೋರ್ಡ್ ಹಾಕಲು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ಸೂಚಿಸಿದ್ದಾರೆ. ಈ ಬಗ್ಗೆ ಕ್ರಮ ಕೈಗೊಳ್ಳುತ್ತೇವೆ.  ಖರ್ಗೆ ಯವರ ಸಲಹೆಯಂತೆ ಶಾಸಕರು ತಂಗಲು ಇನ್ನಷ್ಟು ಅನುಕೂಲಗಳನ್ನು ಮಾಡಿಕೊಡುತ್ತೇವೆ ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ನೂತನ ಕಟ್ಟಡದಲ್ಲಿ ಮುಖ್ಯಮಂತ್ರಿ, ರಾಜ್ಯಪಾಲರು ಹಾಗೂ ಸಚಿವರ ಕೊಠಡಿಗಳು ಚೆನ್ನಾಗಿವೆ. ಶಾಸಕರ ಕೊಠಡಿಗಳಿಗೆ ಸಿಟ್ ಔಟ್ ಅಳವಡಿಸುವಂತೆ ಸಲಹೆ ನೀಡಿದರು.  ಈ ಸಂದರ್ಭದಲ್ಲಿ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ, ಸಹಕಾರ ಸಚಿವ ಕೆ.ಎನ್. ರಾಜಣ್ಣ, ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಕೆ.ಎಚ್. ​​ಮುನಿಯಪ್ಪ, ನವದೆಹಲಿಯಲ್ಲಿ ರಾಜ್ಯದ ವಿಶೇಷ ಪ್ರತಿನಿಧಿಗಳಾದ ಟಿ.ಬಿ. ಜಯಚಂದ್ರ ಮತ್ತು ಪ್ರಕಾಶ್ ಹುಕ್ಕೇರಿ, ರಾಜ್ಯಸಭಾ ಸದಸ್ಯರಾದ ಜೈರಾಮ್ ರಮೇಶ್ ಮತ್ತು ಸುಧಾ ನಾರಾಯಣ ಮೂರ್ತಿ, ವಿಧಾನಸಭೆಯ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್, ಕರ್ನಾಟಕ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತಾ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಗುತ್ತಿಗೆದಾರ ಸುಜಯ ಶೆಟ್ಟಿಗೆ ಸನ್ಮಾನ 

ಇದೇ ಸಂದರ್ಭದಲ್ಲಿ ಕರ್ನಾಟಕ ಭವನದ ಕಾಮಗಾರಿಯನ್ನು ಅತ್ಯುತ್ತಮವಾಗಿ ನಿರ್ವಹಿಸಿದ  ಎಸ್ ಕೆ ಎಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ, ಕಾರ್ಕಳ ಮೂಲದ ಗುತ್ತಿಗೆದಾರ ಸುಜಯ್ ಕುಮಾರ್ ಶೆಟ್ಟಿ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸನ್ಮಾನಿಸಿದರು. ಇತ್ತೀಚೆಗೆ ಅಪೂರ್ವ ವಾಸ್ತುಶಿಲ್ಪದ ಕಾರ್ಕಳ ನ್ಯಾಯಾಲಯ ಸಂಕೀರ್ಣ, ಕಾಪು ಮಾರಿಗುಡಿ ಆಕರ್ಷಕ ದೇವಸ್ಥಾನವನ್ನು ಸುಜಯ ಕುಮಾರ್ ಶೆಟ್ಟಿ ಪರಿಕಲ್ಪನೆಯಲ್ಲಿ ಮಾಡಲಾಗಿತ್ತು. 

ಹೇಗಿದೆ ಕರ್ನಾಟಕ ಭವನ ? 

ದಿಲ್ಲಿಯ ಪ್ರತಿಷ್ಠಿತ ಪ್ರದೇಶವಾದ ಚಾಣಕ್ಯಪುರಿಯ 12,212 ಚದರ ಮೀಟರ್‌ ಪೈಕಿ 3,532 ಚದರ ಮೀಟರ್‌ನಲ್ಲಿ ತಲೆ ಎತ್ತಿರುವ 9 ಅಂತಸ್ತಿನ ಕಟ್ಟಡವು ಸುಮಾರು 138 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದ್ದು, ಈ ಕಟ್ಟಡದಲ್ಲಿ ಒಟ್ಟು 52 ಕೊಠಡಿಗಳಿದ್ದು, 2 ವಿವಿಐಪಿ ಸೂಟ್‌, 32 ಸಾಧಾರಣ ಸೂಟ್‌ ರೂಮ್‌, 19 ಸಿಂಗಲ್‌ ರೂಮ್‌, 86 ಶೌಚಾಲಯ ಸೇರಿದಂತೆ ಎಲ್ಲ ರೀತಿಯ ಮೂಲಸೌಕರ್ಯಗಳೂ ಇವೆ. ಜತೆಗೆ ವಾಹನ ನಿಲುಗಡೆಗೂ ಅಚ್ಚುಕಟ್ಟಾದ ವ್ಯವಸ್ಥೆ ಇದೆ.

Karnataka Bhavan Inaugurated in Delhi, CM Honors Contractor Sujay Kumar Shetty for Successful Project Completion.