Odisha Train Accident, CBI Arrest: ಒಡಿಶಾ ರೈಲು ದುರಂತ ; ಮೂವರು ರೈಲ್ವೇ ಅಧಿಕಾರಿಗಳನ್ನು ಬಂಧಿಸಿದ ಸಿಬಿಐ ಅಧಿಕಾರಿಗಳು, ಸಿಗ್ನಲ್ ವ್ಯವಸ್ಥೆ ಲೋಪದಿಂದಲೇ ದುರ್ಘಟನೆ

08-07-23 09:09 pm       HK News Desk   ದೇಶ - ವಿದೇಶ

ಒಡಿಶಾದಲ್ಲಿ ನಡೆದ ರೈಲು ದುರಂತ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಮೂವರು ರೈಲ್ವೇ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ನವದೆಹಲಿ, ಜುಲೈ 8: ಒಡಿಶಾದಲ್ಲಿ ನಡೆದ ರೈಲು ದುರಂತ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿಗಳು ಮೂವರು ರೈಲ್ವೇ ಅಧಿಕಾರಿಗಳನ್ನು ಬಂಧಿಸಿದ್ದಾರೆ. ಸೀನಿಯರ್ ಸೆಕ್ಷನ್ ಇಂಜಿನಿಯರ್ ಅರುಣ್ ಕುಮಾರ್ ಮಹಾಂತ, ಸೀನಿಯರ್ ಸೆಕ್ಷನ್ ಇಂಜಿನಿಯರ್ ಅಮೀರ್ ಖಾನ್ ಮತ್ತು ಟೆಕ್ನೀಶಿಯನ್ ಪಪ್ಪು ಕುಮಾರ್ ಯಾದವ್ ಬಂಧಿತರು.

ಈ ಮೂವರು ಅಧಿಕಾರಿಗಳು ರೈಲು ದುರಂತ ನಡೆದಿರುವ ಬಾಲಾಸೋರ್ ರೈಲು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದವರು. ಇವರ ವಿರುದ್ಧ ಐಪಿಸಿ ಸೆಕ್ಷನ್ 304 ಅಡಿ ಕೊಲೆಗೆ ಸಮಾನವಾದ ಅಪರಾಧ, 201 ಸೆಕ್ಷನ್ ಅಡಿ ಸಾಕ್ಷ್ಯಗಳ ನಾಶಪಡಿಸಿದ ಆರೋಪದಲ್ಲಿ ಸಿಬಿಐ ಪ್ರಕರಣ ದಾಖಲಿಸಿದೆ. ಈ ಕುರಿತ ಎಫ್ಐಆರ್ ನಲ್ಲಿ ಐಪಿಸಿ ಸೆಕ್ಷನ್ 337, 338, 304ಎ (ನಿರ್ಲಕ್ಷ್ಯದಿಂದ ಮರಣಕ್ಕೆ ಕಾರಣವಾಗುವುದು), 34 ಸೆಕ್ಷನ್ (ಸಮಾನ ದುರುದ್ದೇಶ), 153 (ಪ್ರಯಾಣಿಕರ ಪ್ರಾಣಕ್ಕೆ ಕುತ್ತು ಬರುವ ರೀತಿ ನಿರ್ಲಕ್ಷ್ಯ ವಹಿಸುವುದು), ರೈಲ್ವೇ ಕಾಯ್ದೆಯಡಿ 154 ಮತ್ತು 175 (ಪ್ರಾಣಕ್ಕೆ ಕುತ್ತು ತಂದಿರುವುದು) ಅಡಿ ಬಾಲಾಸೋರ್ ರೈಲ್ವೇ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಿಸಲಾಗಿದೆ.

CBI court to pronounce order in CDSCO bribery case today

ಕಳೆದ ಜೂನ್ 2ರಂದು ಬಾಲಾಸೋರ್ ರೈಲು ನಿಲ್ದಾಣದ ಬಳಿಯೇ ಮೂರು ರೈಲುಗಳು ಡಿಕ್ಕಿಯಾಗಿ ಭೀಕರ ಅಪಘಾತ ನಡೆದಿತ್ತು. ಘಟನೆಯಲ್ಲಿ 293 ಪ್ರಯಾಣಿಕರು ಸಾವು ಕಂಡಿದ್ದರು. ಘಟನೆ ಬಗ್ಗೆ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದು, ಬಾಲಾಸೋರ್ ಮತ್ತು ಬಹನಾಗ ನಿಲ್ದಾಣಕ್ಕೆ ಬಂದು ಅಲ್ಲಿನ ಸಿಗ್ನಲ್ ವ್ಯವಸ್ಥೆ, ಅಲ್ಲಿ ಅಂದು ಕರ್ತವ್ಯದಲ್ಲಿದ್ದ ಅಧಿಕಾರಿಗಳ ವಿವರ ಮತ್ತು ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ರೈಲ್ವೇ ಕಮಿಷನರ್ ಪ್ರತ್ಯೇಕ ತನಿಖೆ

ಇದೇ ವೇಳೆ, ರೈಲ್ವೇ ಇಲಾಖೆಯ ಕಮಿಷನರ್ ತನಿಖೆ ನಡೆಸಿದ್ದು ಸಿಗ್ನಲ್ ವ್ಯವಸ್ಥೆ ನೋಡಿಕೊಳ್ಳುವ ಸಿಬಂದಿಯೇ ಘಟನೆಗೆ ಹೊಣೆ ಎಂದು ಹೇಳಿದ್ದರು. ಕಮಿಷನರ್ ನೀಡಿದ್ದ ವರದಿ ಪ್ರಕಾರ, ಬಹನಾಗ ರೈಲು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಮೂವರು ಅಧಿಕಾರಿಗಳ ಬಗ್ಗೆ ಬೊಟ್ಟು ಮಾಡಲಾಗಿತ್ತು. ಸಿಗ್ನಲ್ ವ್ಯವಸ್ಥೆಯ ಲೊಕೇಶನ್ ಬಾಕ್ಸ್ ನಲ್ಲಿ ಮಾಡಿದ್ದ ತಪ್ಪಾದ ವೈರಿಂಗ್ ಸಿಗ್ನಲ್ ತಪ್ಪಾಗಿ ತೋರಿಸಲು ಕಾರಣವಾಗಿತ್ತು. ಇದರಿಂದಾಗಿ ಕೋರಮಂಡಲ್ ಎಕ್ಸ್ ಪ್ರೆಸ್ ರೈಲು ಲೂಪ್ ಲೈನ್ ಮೂಲಕ ಇನ್ನೊಂದು ಹಳಿಗೆ ಎಂಟ್ರಿ ಕೊಡುವಂತಾಗಿತ್ತು. ಹೀಗಾಗಿ ಅಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಡಿಕ್ಕಿಯಾಗಿತ್ತು ಎಂದು ಹೇಳಿದೆ.

ಸಿಗ್ನಲ್ ಸಿಬಂದಿಯೇ ಹೊಣೆ ಎಂದಿದ್ದ ವರದಿ

ಅಂದು ರೈಲು ನಿಲ್ದಾಣದಲ್ಲಿ ಕರ್ತವ್ಯದಲ್ಲಿದ್ದ ಅರುಣ್ ಮಹಾಂತ ಸಿಗ್ನಲ್ ವ್ಯವಸ್ಥೆಯ ತಂಡಕ್ಕೆ ಸುಪರ್ ವೈಸರ್ ಆಗಿದ್ದರು. ಅಮೀರ್ ಖಾನ್ ಟೆಕ್ನೀಶಿಯನ ಗಳ ತಂಡದ ನೇತೃತ್ವ ವಹಿಸಿದ್ದರು. ಪಪ್ಪು ಯಾದವ್ ಬೇರೆ ಕಡೆಯಲ್ಲಿ ಕರ್ತವ್ಯಕ್ಕೆ ನಿಯೋಜನೆ ಆಗಿದ್ದರೂ, ಅಮೀರ್ ಖಾನ್ ತಂಡದಲ್ಲಿ ಜೊತೆಗಿದ್ದು ಲೆವೆಲ್ ಕ್ರಾಸಿಂಗ್ ಸೂಚನೆ ನೀಡುವ ಲೊಕೇಶನ್ ಬಾಕ್ಸ್ ನಲ್ಲಿ ರಿ ವೈರಿಂಗ್ ಮಾಡಿದ್ದರು. ಅಪಘಾತ ನಡೆದ ಕೂಡಲೇ ಅರುಣ್ ಮಹಾಂತ ಸ್ಥಳದಲ್ಲಿದ್ದು, ಆಗಿರುವ ತಪ್ಪನ್ನು ಗಮನಿಸಿದ್ದಾರೆ. ಟೆಸ್ಟ್ ರೂಮ್ ನಲ್ಲಿ 17ಎ-ಬಿ ಸಿಗ್ನಲ್ ನಾರ್ಮಲ್ ಇದ್ದರೆ, 17ಎ ಮತ್ತು 17 ಬಿ ಸಿಗ್ನಲ್ ಮೆಷಿನ್ ಸಿಡಿದು ಹೋಗಿತ್ತು. ಕೂಡಲೇ ವೈರಿಂಗ್ ಮಿಸ್ಟೇಕ್ ಆಗಿದೆಯೇ ಎಂದು ತಪಾಸಣೆ ನಡೆಸುವಂತೆ ಅರುಣ್ ಮಹಾಂತ ಅಲ್ಲಿನ ಸಿಬಂದಿಗೆ ಸೂಚನೆ ನೀಡಿದ್ದರು. ಬಳಿಕ ಮಹಾಂತ ಮತ್ತು ಖಾನ್ ಸಮಕ್ಷಮದಲ್ಲಿ ಯಾದವ್ ಲೊಕೇಶನ್ ಬಾಕ್ಸ್ ನಲ್ಲಿ ವೈರಿಂಗ್ ಮಿಸ್ಟೇಕ್ ಆಗಿರುವುದನ್ನು ಪತ್ತೆ ಮಾಡಿದ್ದರು ಎಂಬ ಮಾಹಿತಿಯನ್ನು ರೈಲ್ವೇ ಸೇಫ್ಟಿ ಕಮಿಷನರ್ ನಡೆಸಿರುವ ತನಿಖಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

The Central Bureau of Investigation (CBI) has arrested three Railways personnel in the case related to the Odisha train tragedy for destruction of evidence and culpable homicide. The three personnel who have been arrested have been identified as Senior Section Engineer (Signal) Arun Kumar Mahanta, Section Engineer Mohammed Amir Khan, and Technician Pappu Kumar.