ಕೊಯಮತ್ತೂರು ಕಾರು ಬ್ಲಾಸ್ಟ್ ಪ್ರಕರಣ ; ತಮಿಳುನಾಡು, ಕರ್ನಾಟಕ, ಕೇರಳದ 60 ಸ್ಥಳಗಳಲ್ಲಿ ಎನ್‌ಐಎ ದಾಳಿ

15-02-23 01:03 pm       HK News Desk   ದೇಶ - ವಿದೇಶ

ಕೊಯಮತ್ತೂರಿನಲ್ಲಿ ಕಾರಿನಲ್ಲಿ ಎಲ್​ಪಿಜಿ ಸಿಲಿಂಡರ್ ಇಟ್ಟು ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಕೆಲವು ಪ್ರದೇಶಗಳ ಇಂದು ದಾಳಿ ನಡೆಸಿದೆ.

ನವದೆಹಲಿ: ಕೊಯಮತ್ತೂರಿನಲ್ಲಿ ಕಾರಿನಲ್ಲಿ ಎಲ್​ಪಿಜಿ ಸಿಲಿಂಡರ್ ಇಟ್ಟು ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್​ಐಎ) ಕೇರಳ, ತಮಿಳುನಾಡು ಮತ್ತು ಕರ್ನಾಟಕದ ಕೆಲವು ಪ್ರದೇಶಗಳ ಇಂದು ದಾಳಿ ನಡೆಸಿದೆ.

ಇಂದು ಬೆಳಗ್ಗೆ ಕೇರಳದ ಎರ್ನಾಕುಲಂ ಜಿಲ್ಲೆಯ ಅಲುವಾ ಮತ್ತು ಮಟ್ಟೆಂಚೆರಿ ಹಾಗೂ ಕೊಲ್ಲಂ ಜಿಲ್ಲೆ ಪರವೂರ್​ನಲ್ಲಿ ದಾಳಿ ನಡೆದಿದೆ. ಸುಮಾರು 60 ಪ್ರದೇಶಗಳ ಮೇಲೆ ದಾಳಿ ನಡೆದಿದೆ. ಅದರಲ್ಲಿ ಕರ್ನಾಟಕ ಒಂದರಲ್ಲೇ 45 ಸ್ಥಳಗಳ ಮೇಲೆ ಎನ್​ಐಎ ದಾಳಿ ಮಾಡಿದೆ. ಐಸಿಸ್ ಉಗ್ರ ಸಂಘಟನೆ ಜೊತೆ ಸಂಪರ್ಕ ಇಟ್ಟುಕೊಂಡಿರುವ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಮನೆ ಮತ್ತು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಸ್ಫೋಟ ಪ್ರಕರಣದ ಆರೋಪಿಗಳು ಭೇಟಿ ನೀಡಿದ ಸ್ಥಳಗಳ ಮೇಲೂ ದಾಳಿ ನಡೆಸಲಾಗಿದೆ. ಸ್ಫೋಟದಲ್ಲಿ ಹತರಾದ ಆರೋಪಿ ಜಮೇಶಾ ಮುಬಿನ್ ಅವರ ಪತ್ನಿ ಹೇಳಿಕೆಯ ಮೇರೆಗೆ ಎನ್​ಐಎ ತಂಡ ದಾಳಿ ನಡೆಸಿದೆ.

ಜಮೇಶಾ ಮುಬಿನ್ ತನ್ನ ಪತ್ನಿಗೆ ಗೊತ್ತಿಲ್ಲದಂತೆ ಮನೆಯಲ್ಲಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದನ್ನು ತನಿಖಾ ತಂಡ ಪತ್ತೆ ಮಾಡಿದೆ. ಬಾಕ್ಸ್‌ನಲ್ಲಿ ಹಳೆಯ ಬಟ್ಟೆಗಳಿವೆ ಎಂದು ಕಿವುಡ ಮತ್ತು ಮೂಕ ಪತ್ನಿ ನಜ್ರತ್‌ಗೆ ತಿಳಿಸಿದ್ದ. ಐಸಿಸ್ ಧ್ವಜವನ್ನು ಹೋಲುವ ಚಿಹ್ನೆಯನ್ನು ಹೊಂದಿರುವ ಸ್ಲೇಟ್, ಮೂಲಭೂತ ಧಾರ್ಮಿಕ ಧರ್ಮೋಪದೇಶಗಳು, ಮನೆಯಲ್ಲಿ ಅರೇಬಿಕ್ ಮತ್ತು ತಮಿಳಿನ ಪುಸ್ತಕಗಳನ್ನು ಓದಿದ ನಂತರ ಸಿದ್ಧಪಡಿಸಿದ ಟಿಪ್ಪಣಿಗಳನ್ನು ತಮಿಳುನಾಡು ಪೊಲೀಸರು ಪತ್ತೆ ಈ ಹಿಂದೆಯೇ ಪತ್ತೆ ಮಾಡಿದ್ದರು.

ಆತನ ಮನೆಯ ಮೇಲೆ ಪೊಲೀಸರು ನಡೆಸಿದ ದಾಳಿಯಲ್ಲಿ ಐಸಿಸ್ ಪ್ರಚಾರದ ವಿಡಿಯೋಗಳನ್ನು ಒಳಗೊಂಡ ಪೆನ್ ಡ್ರೈವ್ ವಶಪಡಿಸಿಕೊಳ್ಳಲಾಗಿತ್ತು. ಕಳೆದ ನಾಲ್ಕು ವರ್ಷಗಳಲ್ಲಿ ಆತನ ಚಲನವಲನ ಮತ್ತು ಸಂಬಂಧಗಳ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದರು. ಐಸಿಸ್ ವಿಚಾರಗಳನ್ನು ಹರಡಲು, ಜನರನ್ನು ನೇಮಿಸಿಕೊಳ್ಳಲು ಮತ್ತು ಕೇರಳ ಮತ್ತು ತಮಿಳುನಾಡಿನಲ್ಲಿ ಭಯೋತ್ಪಾದಕ ದಾಳಿಗಳನ್ನು ನಡೆಸಲು ಆತ ಯೋಜಿಸುತ್ತಿದ್ದ ಎಂಬ ಶಂಕೆಯ ಹಿನ್ನೆಲೆಯಲ್ಲಿ 2019 ರಲ್ಲಿ ಎನ್‌ಐಎ ಆತನನ್ನು ವಿಚಾರಣೆಗೆ ಒಳಪಡಿಸಿತ್ತು.

ಘಟನೆ ಹಿನ್ನೆಲೆ ಏನು?

ಕಳೆದ ವರ್ಷ ಅಕ್ಟೋಬರ್ 23 ರಂದು, ಕೊಯಮತ್ತೂರು ಟೌನ್ ಹಾಲ್ ಬಳಿಯ ಕೋಟೈ ಈಶ್ವರನ್ ದೇವಸ್ಥಾನದ ಮುಂಭಾಗದಲ್ಲಿ ಬೆಳಿಗ್ಗೆ 5 ಗಂಟೆಗೆ ಕಾರಿನಲ್ಲಿ ಸ್ಫೋಟ ಸಂಭವಿಸಿತ್ತು. ಕಾರಿನಲ್ಲಿದ್ದ ಎರಡು ಗ್ಯಾಸ್ ಸಿಲಿಂಡರ್‌ಗಳಲ್ಲಿ ಒಂದು ಸಿಲಿಂಡರ್ ಸ್ಫೋಟಗೊಂಡಿತ್ತು. ಕಾರು ಎರಡು ಭಾಗವಾಗಿತ್ತು. ಕಾರಿನಲ್ಲಿ ಮೊಳೆಗಳೂ ಪತ್ತೆಯಾಗಿದ್ದವು. ಈ ಘಟನೆಯಲ್ಲಿ ಶಂಕಿತ ಉಗ್ರ ಜಮೇಶಾ ಮುಬೀನ್​ ಮೃತಪಟ್ಟಿದ್ದ.

ಘಟನೆಯ ನಂತರ ಜಮೇಶಾ ಗ್ಯಾಸ್ ಸಿಲಿಂಡರ್‌ನಂತಹ ವಸ್ತುವನ್ನು ಕಾರಿನೊಳಗೆ ಸಾಗಿಸುತ್ತಿರುವ ಸಿಸಿಟಿವಿ ದೃಶ್ಯಾವಳಿಗಳು ಬಿಡುಗಡೆಯಾಗಿದ್ದವು. ಜಮೇಶ ಅವರ ಮನೆಯಲ್ಲಿ ಪೊಲೀಸರು ನಡೆಸಿದ ತಪಾಸಣೆಯಲ್ಲಿ ಕೆಲವು ಮಹತ್ವದ ದಾಖಲೆಗಳು ಪತ್ತೆಯಾಗಿದ್ದವು. ಅದರಲ್ಲಿ ನಗರದ ಕೆಲವು ದೇವಸ್ಥಾನಗಳ ಹೆಸರುಗಳು ಮತ್ತು ಸರ್ಕಾರಿ ಸಂಸ್ಥೆಗಳ ವಿವರಗಳಿದ್ದವು. ಅವರ ಮನೆಯಲ್ಲಿ ಸ್ಫೋಟಕ್ಕೆ ಬಳಸಲಾದ ಸುಮಾರು 75 ಕೆಜಿ ರಾಸಾಯನಿಕ ಸಂಯುಕ್ತಗಳು ಪತ್ತೆಯಾಗಿದ್ದವು. ಪೊಲೀಸರು ಪೊಟ್ಯಾಸಿಯಮ್ ನೈಟ್ರೇಟ್ ಮತ್ತು ಅಲ್ಯೂಮಿನಿಯಂ ಪೌಡರ್ ಅನ್ನು ಸಹ ಪತ್ತೆ ಮಾಡಿದ್ದರು.


ಇ-ಕಾಮರ್ಸ್ ಪ್ಲಾಟ್‌ಫಾರ್ಮ್‌ನಲ್ಲಿ ಸ್ಫೋಟಕಗಳನ್ನು ಖರೀದಿಸಲು ಮತ್ತು ಅವರ ಬಾಡಿಗೆ ಮನೆಯಿಂದ ಮತ್ತೊಂದು ಮನೆಗೆ ಸಾಗಿಸಲು ಮುಬೀನ್‌ಗೆ ಸಹಾಯ ಮಾಡಿದ ಆರೋಪದ ಮೇಲೆ ಆರು ಜನರನ್ನು ಪೊಲೀಸರು ಈಗಾಗಲೇ ಬಂಧಿಸಿದ್ದಾರೆ.

The National Investigation Agency (NIA) on Wednesday, February 15, 2023, carried out searches at 40 locations across Tamil Nadu, including 16 areas in Coimbatore, in connection with the October 2022 car cylinder blast.