ಇಸ್ಲಾಂ ಶ್ರೇಷ್ಠ ಧರ್ಮ, ನಾನು ಮಠ ಮಂದಿರ ಹೋಗಲ್ಲ, ಹಜ್ ಹೋಗಬೇಕೆಂಬ ಆಸೆ ಇದೆ ; ಸಚಿವ ರಾಯರೆಡ್ಡಿ !

30-08-26 10:09 pm       HK News Desk   ಕರ್ನಾಟಕ

ಇಸ್ಲಾಂ ಇಡೀ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಧರ್ಮವಾಗಿದ್ದು, ನನಗೆ ಹಜ್ ಯಾತ್ರೆಗೆ ಹೋಗುವ ಆಸೆಯಿದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.

ಕೊಪ್ಪಳ, ಆ.30: ಇಸ್ಲಾಂ ಇಡೀ ಜಗತ್ತಿನಲ್ಲಿ ಅತ್ಯಂತ ಶ್ರೇಷ್ಠ ಧರ್ಮವಾಗಿದ್ದು, ನನಗೆ ಹಜ್ ಯಾತ್ರೆಗೆ ಹೋಗುವ ಆಸೆಯಿದೆ ಎಂದು ಸಚಿವ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ. 

ಕೊಪ್ಪಳ ಜಿಲ್ಲೆಯ ಕುಕನೂರಿನಲ್ಲಿ ನಡೆದ ಮುಸ್ಲಿಂ ಸಮಾಜದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ರಾಯರೆಡ್ಡಿ, ನಾನು ಹೆಚ್ಚಾಗಿ ಮಠ, ಮಂದಿರಕ್ಕೆ ಹೋಗಲ್ಲ. ಆದರೆ ಒಂದು ಬಾರಿಯಾದರೂ ಹಜ್ ಯಾತ್ರೆ ಕೈಗೊಳ್ಳಬೇಕು ಎಂಬ ಆಸೆ ಇದೆ.‌ಆದರೆ ನನಗೆ ಅವಕಾಶ ಇಲ್ಲ‌. ಮುಸ್ಲಿಂ ಅಲ್ಲದವರಿಗೆ ಹಜ್ ಯಾತ್ರೆಗೆ ಬಿಡಲ್ಲ.‌ ಅದಕ್ಕೆ ಬೇಕಾಗಿ ಖುರಾನ್ ಓದಲು ಸಿದ್ಧನಿದ್ದೇನೆ ಎಂದು ರಾಯರೆಡ್ಡಿ ಹೇಳಿದ್ದಾರೆ. 

ಇಸ್ಲಾಂ ಅತ್ಯಂತ ಮಾನವೀಯತೆಯಿಂದ ಕೂಡಿದ ಧರ್ಮವಾಗಿದೆ. ಆದರೆ ಇಸ್ಲಾಂ ಧರ್ಮದ ಬಗ್ಗೆ ಸಮಾಜದಲ್ಲಿ ತಪ್ಪು ಕಲ್ಪನೆಗಳನ್ನು ಹರಡಲಾಗುತ್ತಿದೆ. ಮನುಷ್ಯ ಸಮಾಜದಲ್ಲಿ ಹೇಗೆ ಬದುಕಬೇಕು ಎಂಬುದನ್ನು ಈ ಧರ್ಮ ಹೇಳಿಕೊಡುತ್ತದೆ. ಕುರಾನ್ ಕೇವಲ ಮುಸ್ಲಿಮರಿಗೆ ಮಾತ್ರ ಸೀಮಿತವಲ್ಲ. ಮಹಮ್ಮದ್ ಪೈಗಂಬರರು ಇಡೀ ಬ್ರಹ್ಮಾಂಡಕ್ಕೆ ಕುರಾನ್ ನೀಡಿದ್ದಾರೆ. ಯಾರು ಬೇಕಾದರೂ ಕುರಾನ್ ಓದಬಹುದು, ನಾನೂ ಸಹ ಕುರಾನ್ ಅಧ್ಯಯನ ಮಾಡಲು ಸಿದ್ಧನಿದ್ದೇನೆ ಎಂದರು. 

ದೇವರು ನಿರಾಕಾರ, ಆಕಾರವಿಲ್ಲ, ವ್ಯಕ್ತಿಪೂಜೆ ಇಲ್ಲ. ಯಾವುದೇ ಧರ್ಮ ಕೆಟ್ಟದ್ದು ಮಾಡು ಎಂದು ಹೇಳಿಲ್ಲ. ಇಸ್ಲಾಂ ಧರ್ಮದಲ್ಲಿ ಕುಡಿಯುವಂತಿಲ್ಲ, ದಿನಕ್ಕೆ ಐದು ಬಾರಿ ನಮಾಜು ಮಾಡಬೇಕು. ವಾರ್ಷಿಕವಾಗಿ ರೋಜಾ ಆಚರಣೆ ಮಾಡಬೇಕು. ಜಕಾತ್ ನೀಡಬೇಕು. ಮಧ್ಯದಂಗಡಿ ವ್ಯಾಪಾರ ಮಾಡುವಂತಿಲ್ಲ. ಉರ್ದು ಭಾಷೆ ಹೊಸದಿಲ್ಲಿಯಲ್ಲಿ ಹುಟ್ಟಿದ್ದು, ಇಸ್ಲಾಂ ಧರ್ಮದ ಬಗ್ಗೆ ತಪ್ಪು ಕಲ್ಪನೆಗಳನ್ನು ಕೆಲವರು ಬಿತ್ತುತ್ತಿದ್ದಾರೆ. ಮುಸಲ್ಮಾನರು ರಕ್ತ ಕುಡಿಯಂಗಿಲ್ಲ. ಇಂತಹ ಕಾನೂನು ಇಸ್ಲಾಂ ಧರ್ಮದಲ್ಲಿದೆ ಎಂದು ಹೇಳಿದರು.