ವಂದೇ ಮಾತರಂ ವಿವಾದ ; ಜೈಲಿಗೆ ಹಾಕಿದ್ರೂ ನಾನು ವಂದೇ ಮಾತರಂ ಪೂರ್ತಿ ಹಾಡಲ್ಲ , ಬಿಜೆಪಿಗೆ ಬಿಕೆ ಹರಿಪ್ರಸಾದ್ ಸವಾಲ್

19-08-26 02:15 pm       HK News Staffer   ಕರ್ನಾಟಕ

ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ‘ವಂದೇ ಮಾತರಂ’ ಹಾಡುವ ವೇಳೆ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿವಾದ ಇದೀಗ ಮತ್ತಷ್ಟು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ಆರೋಪಗಳಿಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡುತ್ತಿದ್ದು, ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹಾಗೂ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.

ದೆಹಲಿ, ಆಗಸ್ಟ್ 19: ಸ್ವಾತಂತ್ರ್ಯೋತ್ಸವದ ಸಂದರ್ಭದಲ್ಲಿ ‘ವಂದೇ ಮಾತರಂ’ ಹಾಡುವ ವೇಳೆ ಸೋನಿಯಾ ಗಾಂಧಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದ ವಿವಾದ ಇದೀಗ ಮತ್ತಷ್ಟು ರಾಜಕೀಯ ಸ್ವರೂಪ ಪಡೆದುಕೊಂಡಿದೆ. ಬಿಜೆಪಿ ಆರೋಪಗಳಿಗೆ ಕಾಂಗ್ರೆಸ್ ನಾಯಕರು ತಿರುಗೇಟು ನೀಡುತ್ತಿದ್ದು, ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಹಾಗೂ ಕಾಂಗ್ರೆಸ್ ನಾಯಕ ಬಿ.ಕೆ. ಹರಿಪ್ರಸಾದ್ ಹೇಳಿಕೆಗಳು ಚರ್ಚೆಗೆ ಗ್ರಾಸವಾಗಿವೆ.

‘ವಂದೇ ಮಾತರಂ’ ಪೂರ್ಣವಾಗಿ ಹಾಡುವುದಿಲ್ಲ;

ದೆಹಲಿಯಲ್ಲಿ ಮಾತನಾಡಿದ ಬಿ.ಕೆ. ಹರಿಪ್ರಸಾದ್, ‘ವಂದೇ ಮಾತರಂ’ನ ಎರಡು ಚರಣಗಳನ್ನು ಮಾತ್ರ ಹಾಡಲಾಗುತ್ತದೆ, ಸಂಪೂರ್ಣ ಪದ್ಯವನ್ನು ಹಾಡುವುದಿಲ್ಲ ಎಂದು ಹೇಳಿದ್ದಾರೆ. ಈ ವಿಚಾರದಲ್ಲಿ ತಮ್ಮ ನಿಲುವಿನಿಂದ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ ಅವರು, ತಮ್ಮನ್ನು ಜೈಲಿಗೆ ಕಳುಹಿಸಿದರೂ ಸಿದ್ಧ ಎಂದು ಹೇಳಿಕೆ ನೀಡಿದ್ದಾರೆ.

“ನಾವು ನಮ್ಮ ಪೂರ್ವಜರ ತ್ಯಾಗ ಮತ್ತು ಬಲಿದಾನದಿಂದ ಬಂದ ಸ್ವಾತಂತ್ರ್ಯವನ್ನು ಗೌರವಿಸುತ್ತೇವೆ. ರಾಷ್ಟ್ರಗೀತೆ ಹಾಗೂ ವಂದೇ ಮಾತರಂನ ಮಹತ್ವವನ್ನೂ ಒಪ್ಪಿಕೊಳ್ಳುತ್ತೇವೆ” ಎಂದು ಅವರು ಹೇಳಿದ್ದಾರೆ.

ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಹರಿಪ್ರಸಾದ್, ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಬಿಜೆಪಿಯ ಪೂರ್ವರೂಪದ ಸಂಘಟನೆಗಳ ಪಾತ್ರದ ಕುರಿತು ಟೀಕೆ ಮಾಡಿದ್ದಾರೆ.

ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ವೇಳೆ ಸೋನಿಯಾ ಗಾಂಧಿ ‘ವಂದೇ ಮಾತರಂ’ ಹಾಡುವುದಕ್ಕೆ ಅಡ್ಡಿಪಡಿಸಿದ್ದಾರೆ ಎಂಬ ಆರೋಪವನ್ನು ಬಿ.ಕೆ. ಹರಿಪ್ರಸಾದ್ ತಳ್ಳಿಹಾಕಿದ್ದಾರೆ. ಅವರ ಪ್ರಕಾರ, ಗೀತೆ ಹಾಡುವ ವೇಳೆ ತಪ್ಪಾಗಿ ಹಾಡಿದ ಭಾಗವನ್ನು ಸರಿಪಡಿಸಿಕೊಳ್ಳುವಂತೆ ಸೋನಿಯಾ ಗಾಂಧಿ ಸೂಚಿಸಿದ್ದರು. ಇದನ್ನು ಬಿಜೆಪಿ ರಾಜಕೀಯವಾಗಿ ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

ಅದೇ ರೀತಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ವಯಸ್ಸು ಹಾಗೂ ಕಾಲಿನ ಸಮಸ್ಯೆಯನ್ನು ಉಲ್ಲೇಖಿಸಿದ ಹರಿಪ್ರಸಾದ್, ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರಿಗೆ ಕುರ್ಚಿ ನೀಡುವಂತೆ ಸೂಚಿಸಲಾಗಿತ್ತು ಎಂದು ಹೇಳಿದ್ದಾರೆ.

‘ನಾನು ವಂದೇ ಮಾತರಂ ಹಾಡುವುದಿಲ್ಲ’- ಇಮ್ರಾನ್ ಮಸೂದ್

ಇದರ ನಡುವೆ ಉತ್ತರ ಪ್ರದೇಶದ ಸಹರಾನ್‌ಪುರ ಕ್ಷೇತ್ರದ ಕಾಂಗ್ರೆಸ್ ಸಂಸದ ಇಮ್ರಾನ್ ಮಸೂದ್ ಅವರ ಹೇಳಿಕೆಯೂ ವಿವಾದಕ್ಕೆ ಮತ್ತಷ್ಟು ಕಾವು ನೀಡಿದೆ. “ನಾನು ವಂದೇ ಮಾತರಂ ಅನ್ನು ಗೌರವಿಸುತ್ತೇನೆ. ಆದರೆ ಹಾಡುವುದಿಲ್ಲ” ಎಂದು ಅವರು ಹೇಳಿದ್ದಾರೆ.

ತಮ್ಮ ಧಾರ್ಮಿಕ ನಂಬಿಕೆ ಹಾಗೂ ಸಂವಿಧಾನ ನೀಡಿರುವ ಹಕ್ಕುಗಳನ್ನು ಉಲ್ಲೇಖಿಸಿರುವ ಮಸೂದ್, ತಾವು ಅಲ್ಲಾಹನನ್ನು ಹೊರತುಪಡಿಸಿ ಯಾರನ್ನೂ ಪೂಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

‘ಹಾಡುವುದಿಲ್ಲ, ಆದರೆ ಎದ್ದು ನಿಲ್ಲುತ್ತೇನೆ’

ವಂದೇ ಮಾತರಂ ಹಾಡನ್ನು ತಾನು ಅವಮಾನಿಸುವುದಿಲ್ಲ ಎಂದು ಹೇಳಿರುವ ಇಮ್ರಾನ್ ಮಸೂದ್, ಗೀತೆ ನುಡಿಸಿದಾಗ ತಾನು ಗೌರವ ಸೂಚಿಸಿ ಎದ್ದು ನಿಲ್ಲುತ್ತೇನೆ, ಆದರೆ ಹಾಡುವುದಿಲ್ಲ ಎಂದು ಹೇಳಿದ್ದಾರೆ. ತಮ್ಮ ನಿಲುವು ಧಾರ್ಮಿಕ ನಂಬಿಕೆ ಹಾಗೂ ಸಂವಿಧಾನಾತ್ಮಕ ಹಕ್ಕಿಗೆ ಸಂಬಂಧಿಸಿದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಅಲ್ಲದೆ, ವಂದೇ ಮಾತರಂ ಕುರಿತು ರಾಜಕೀಯ ವಾದ-ವಿವಾದ ನಡೆಸುವ ಮೊದಲು ಗೀತೆಯ ಇತಿಹಾಸ, ಅದರ ರಚನೆಯ ಹಿನ್ನೆಲೆ ಹಾಗೂ ಅದರ ಮೂಲ ಸಂದರ್ಭವನ್ನು ಅಧ್ಯಯನ ಮಾಡಬೇಕು ಎಂದು ಅವರು ಹೇಳಿದ್ದಾರೆ.

ಬಿಜೆಪಿ-ಕಾಂಗ್ರೆಸ್ ನಡುವೆ ರಾಜಕೀಯ ವಾಕ್ಸಮರ

ವಂದೇ ಮಾತರಂ ವಿಚಾರ ಇದೀಗ ಕೇವಲ ಗೀತೆಯ ಆಚರಣೆಗೆ ಸೀಮಿತವಾಗದೆ ರಾಷ್ಟ್ರೀಯತೆ, ಧಾರ್ಮಿಕ ಸ್ವಾತಂತ್ರ್ಯ ಹಾಗೂ ರಾಜಕೀಯ ನಿಲುವುಗಳ ಕುರಿತ ಚರ್ಚೆಯಾಗಿ ರೂಪುಗೊಳ್ಳುತ್ತಿದೆ. ಒಂದೆಡೆ ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ದೇಶಪ್ರೇಮದ ಪ್ರಶ್ನೆಯಾಗಿ ಮುಂದಿಟ್ಟುಕೊಂಡು ಟೀಕಿಸುತ್ತಿದ್ದರೆ, ಮತ್ತೊಂದೆಡೆ ಕಾಂಗ್ರೆಸ್ ನಾಯಕರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸುತ್ತಿದ್ದಾರೆ.