ಡಿಕೆ ಸಂಪುಟ ಚಾಲ್ತಿಗೆ ಬರುವ ಮುನ್ನವೇ ಸರ್ಜರಿ ! ಸಚಿವ ಸ್ಥಾನಕ್ಕೆ ಪಟ್ಟುಹಿಡಿದ ಲೇಔಟ್ ಕೃಷ್ಣಪ್ಪ, ಚಾನ್ಸ್ ಕೊಡಿಸಲು ಒಬ್ಬರ ರಾಜಿನಾಮೆ, ಓಕೆ ಎಂದ ಮಾಗಡಿ ಬಾಲಕೃಷ್ಣ

07-08-26 10:42 pm       HK News Desk   ಕರ್ನಾಟಕ

ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ವಿಜಯನಗರ ಶಾಸಕ ಎಂ. ಕೃಷ್ಣಪ್ಪ ತಮಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಬೆಂಗಳೂರು, ಆ.7: ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೇತೃತ್ವದ ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್ ನಲ್ಲಿ ಅಸಮಾಧಾನ ಭುಗಿಲೆದ್ದಿದ್ದು, ವಿಜಯನಗರ ಶಾಸಕ ಎಂ. ಕೃಷ್ಣಪ್ಪ ತಮಗೆ ಸಚಿವ ಸ್ಥಾನ ಕೊಡಲೇಬೇಕು ಎಂದು ಪಟ್ಟು ಹಿಡಿದಿದ್ದಾರೆ. 

ಕೃಷ್ಣಪ್ಪ ಅವರನ್ನು ಸಮಾಧಾನ ಪಡಿಸಲು ಖುದ್ದು ಮುಖ್ಯಮಂತ್ರಿ ಡಿಕೆ ಶಿವಕುಮಾರ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಬಿ.ಕೆ. ಹರಿಪ್ರಸಾದ್, ಅವರ ನಿವಾಸಕ್ಕೆ ಭೇಟಿ ನೀಡಿ ಮಾತುಕತೆ ನಡೆಸಿದರೂ ಯಾವುದೇ ಪ್ರಯೋಜನೆ ಆಗಿಲ್ಲ. ಹಲವು ಹುದ್ದೆಗಳನ್ನು ಆಫರ್ ಮಾಡಿದ್ದರೂ, ಅವರು ಯಾವುದನ್ನೂ ಸ್ವೀಕರಿಸದೆ ಸಚಿವ ಸ್ಥಾನವೇ ಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದು ಪಕ್ಷಕ್ಕೆ ಡ್ಯಾಮೇಜ್​ ಆಗುವ ಸಾಧ್ಯತೆ ಇದೆ.

ಇದೀಗ ಕೃಷ್ಣಪ್ಪ ಅವರನ್ನು ಸಮಾಧಾನ ಪಡಿಸಲು ಒಬ್ಬರು ಸಚಿವ ಸ್ಥಾನ ತ್ಯಾಗ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎಂದು ಹೇಳಲಾಗುತ್ತಿದೆ. ಇದರ ಬೆನ್ನಲ್ಲೇ ಸಚಿವ ಎಚ್.ಸಿ ಬಾಲಕೃಷ್ಣ ಅವರು ನಾನು ರಾಜೀನಾಮೆಗೆ ಸಿದ್ಧ ಎಂದು ಹೇಳಿದ್ದು, ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. 

ಮಾಗಡಿ ಶಾಸಕ ಬಾಲಕೃಷ್ಣ ಅವರಿಗೆ ಮೊದಲ ಬಾರಿ ಸಚಿವ ಸ್ಥಾನ ಸಿಕ್ಕಿದ್ದರೂ ರಾಜೀನಾಮೆ ಬಗ್ಗೆ ಮಾತಾಡಿದ್ದಾರೆ. ಪಕ್ಷ ಹೇಳಿದರೆ ತ್ಯಾಗಕ್ಕೆ ಸಿದ್ಧವಿದ್ದೇನೆ ಎಂದು ನೂತನ ಸಚಿವ ಬಾಲಕೃಷ್ಣ ಸ್ಪಷ್ಟಪಡಿಸಿದ್ದಾರೆ. ಅಲ್ಲದೇ ಅಸಮಾಧಾನಿತರು ಸಚಿವ ಸ್ಥಾನ ಕೇಳುತ್ತಿರುವುದರಲ್ಲಿ ತಪ್ಪಿಲ್ಲ ಎಂದೂ ಹೇಳಿದ್ದಾರೆ. ಕೆಲವರನ್ನು ಸಮಾಧಾನಪಡಿಸಲಾಗಿದೆ. ಇನ್ನೂ ಕೆಲವರೊಂದಿಗೆ ಸಂಧಾನ ನಡೆಯುತ್ತಿದೆ. ಕೃಷ್ಣಪ್ಪ ಅವರು ಒಕ್ಕಲಿಗರು. ಅವರನ್ನು ಸಂಪುಟದಲ್ಲಿ ಸೇರಿಸಲು ನಾನು ಬೇಕಿದ್ದರೆ ರಾಜೀನಾಮೆಗೆ ಸಿದ್ಧ’ ಎಂದು ಹೇಳಿದ್ದಾರೆ. ಪಕ್ಷ ಹೇಳಿದರೆ ತ್ಯಾಗಕ್ಕೆ ಸಿದ್ಧವಿದ್ದೇನೆ, ನನ್ನ ಸ್ಥಾನ ಅವರಿಗೆ ಕೊಡ್ತಾರೆ ಎಂದರೆ ನನಗೆ ಅಭ್ಯಂತರ ಇಲ್ಲ ಎಂದು ಹೇಳಿದ್ದಾರೆ.