ಮುಡಿಪು ಬಳಿ ಹಾಡಹಗಲೇ ಒಂಟಿ ವೃದ್ಧೆಯ ಮೇಲೆ ಹಲ್ಲೆ ನಡೆಸಿ ಚಿನ್ನಾಭರಣ ದರೋಡೆ ; ಕ್ಷಿಪ್ರ ಕಾರ್ಯಾಚರಣೆ ನಡೆಸಿ ಇಬ್ಬರು ದರೋಡೆಕೋರರ ಹೆಡೆಮುರಿ ಕಟ್ಟಿದ ಕೊಣಾಜೆ ಪೊಲೀಸರು

07-08-26 09:23 pm       HK News Staffer   ಕ್ರೈಂ

ಮುಡಿಪು ಸಮೀಪದ ಕಾಯರ್ ಗೋಳಿ ಎಂಬಲ್ಲಿನ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿ ಒಂಟಿ ವೃದ್ಧೆಯೋರ್ವರಿಗೆ ಹಲ್ಲೆ ನಡೆಸಿ ಚಿನ್ನದ ಸರ ಹಾಗೂ ಬಲೆಗಳನ್ನು ದರೋಡೆಗೈದು ಪರಾರಿಯಾಗಿದ್ದ ಇಬ್ಬರು ದರೋಡೆಕೋರರನ್ನ ಕೊಣಾಜೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಉಳ್ಳಾಲ, ಆ.7: ಮುಡಿಪು ಸಮೀಪದ ಕಾಯರ್ ಗೋಳಿ ಎಂಬಲ್ಲಿನ ಮನೆಯೊಂದಕ್ಕೆ ಹಾಡಹಗಲೇ ನುಗ್ಗಿ ಒಂಟಿ ವೃದ್ಧೆಯೋರ್ವರಿಗೆ ಹಲ್ಲೆ ನಡೆಸಿ ಚಿನ್ನದ ಸರ ಹಾಗೂ ಬಲೆಗಳನ್ನು ದರೋಡೆಗೈದು ಪರಾರಿಯಾಗಿದ್ದ ಇಬ್ಬರು ದರೋಡೆಕೋರರನ್ನ ಕೊಣಾಜೆ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಉರ್ವಾ ಮಠದಕಣಿ ನಿವಾಸಿ ಬಾಲಸುಬ್ರಮಣ್ಯ(49) ಹಾಗೂ ಮೂಲತಃ ತೊಕ್ಕೊಟ್ಟು ನಿವಾಸಿ ಪ್ರಸ್ತುತ ಮಂಗಳೂರಿನ ಬೊಕ್ಕಪಟ್ಣದಲ್ಲಿ ನೆಲೆಸಿರುವ ಶ್ಯಾಮ್ ಕುಮಾರ್ (33) ಬಂಧಿತ ಆರೋಪಿಗಳು. ಮುಡಿಪು ಕಾಯರ್ ಗೋಳಿಯ 76 ರ ಹರೆಯದ ಭವಾನಿ ಆಚಾರ್ಯ ಎಂಬವರ ಮನೆಯಲ್ಲಿ ಆ.3ರ ಸೋಮವಾರ ದರೋಡೆ ಘಟನೆ ನಡೆದಿತ್ತು. ಭವಾನಿಯವರ ಪುತ್ರ ಕೆಲಸಕ್ಕೆ ತೆರಳಿದ್ದ ವೇಳೆ ಬಾಡಿಗೆ ಮನೆಯ ಬಗ್ಗೆ ವಿಚಾರಿಸುವ ಸೋಗಿನಲ್ಲಿ ಬಂದಿದ್ದ ಇಬ್ಬರು ಅಪರಿಚಿತರು ಏಕಾಏಕಿ ಮನೆಯೊಳಗೆ ನುಗ್ಗಿ ವೃದ್ಧೆಗೆ ಹಲ್ಲೆಗೈದು ಸರ ಹಾಗೂ ಬಲೆಯನ್ನು ಕಿತ್ತು ಪರಾರಿಯಾಗಿದ್ದರು.

ಪ್ರಕರಣದ ಆರೋಪಿಗಳ ಪತ್ತೆಗಾಗಿ ರಚಿಸಿದ ವಿಶೇಷ ತಂಡಕ್ಕೆ ದೊರೆತ ಖಚಿತ ಮಾಹಿತಿಯ ಮೇಲೆ ಶುಕ್ರವಾರ ಮಂಗಳೂರಿನ ಮರೋಳಿ ಎಂಬಲ್ಲಿ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಸುಲಿಗೆ ಮಾಡಲಾದ 3 ಲಕ್ಷ ರೂ. ಅಂದಾಜು ಮೌಲ್ಯದ 24 ಗ್ರಾಂ ಚಿನ್ನಾಭರಣ ಹಾಗೂ ಕೃತ್ಯಕ್ಕೆ ಬಳಸಲಾದ ಬೈಕನ್ನು ಪೊಲೀಸರು ವಶಪಡಿಸಿದ್ದಾರೆ.

ಬಂಧಿತ ಆರೋಪಿ ಬಾಲ ಸುಬ್ರಮಣ್ಯ ವಿರುದ್ಧ ಈ ಹಿಂದೆ ಬಜಪೆ ಪೊಲೀಸ್ ಠಾಣೆಯಲ್ಲಿ 2 ಸುಲಿಗೆ ಪ್ರಕರಣಗಳು, ಮುಲ್ಕಿ ಹಾಗೂ ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ತಲಾ 1 ಸುಲಿಗೆ ಪ್ರಕರಣಗಳು, ಮಂಗಳೂರು ಉತ್ತರ ಪೊಲೀಸ್ ಠಾಣೆಯಲ್ಲಿ 1 ಕಳವು ಪ್ರಕರಣ ಹಾಗೂ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 1 ಸುಲಿಗೆ ಪ್ರಕರಣ ದಾಖಲಾಗಿರುತ್ತವೆ.