ಗುಂಡ್ಲುಪೇಟೆ ಬಳಿಯ ಮಲ್ಲಯ್ಯನಪುರ ಗುಡ್ಡದಲ್ಲಿ ಅಪರೂಪದ ಥೋರಿಯಂ ನಿಕ್ಷೇಪ ಪತ್ತೆ ; ಗಣಿಗಾರಿಕೆಗೆ ಮುಂದಾದ ಕೇಂದ್ರ ಸರ್ಕಾರ, ದೇಶಾದ್ಯಂತ ನಡೆಸಿದ ಏರಿಯಲ್ ಸರ್ವೆಯಲ್ಲಿ ಪತ್ತೆ

08-07-26 01:13 pm       Hk Staffer   ಕರ್ನಾಟಕ

ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಮಲ್ಲಯ್ಯನಪುರ ಬಳಿಯ ಅನ್ಗಲ್ ಗುಡ್ಡದ ತಪ್ಪಲಿನ ಪ್ರದೇಶದಲ್ಲಿ ಅಪರೂಪದ ಥೋರಿಯಂ ಖನಿಜದ ನಿಕ್ಷೇಪವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ.

ಮೈಸೂರು, ಜುಲೈ 8: ಗುಂಡ್ಲುಪೇಟೆ ತಾಲೂಕು ವ್ಯಾಪ್ತಿಯ ಮಲ್ಲಯ್ಯನಪುರ ಬಳಿಯ ಅನ್ಗಲ್ ಗುಡ್ಡದ ತಪ್ಪಲಿನ ಪ್ರದೇಶದಲ್ಲಿ ಅಪರೂಪದ ಥೋರಿಯಂ ಖನಿಜದ ನಿಕ್ಷೇಪವನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. 

ಕಳೆದ ಒಂದು ವರ್ಷದಲ್ಲಿ ದೇಶಾದ್ಯಂತ ಭಾರತೀಯ ಭೂ ವೈಜ್ಞಾನಿಕ ಇಲಾಖೆಯಿಂದ ಏರಿಯಲ್ ಸರ್ವೆ ನಡೆಸಲಾಗಿತ್ತು. ಈ ವೇಳೆ, ಕಚ್ಚಾ ತೈಲ, ಚಿನ್ನ ಮತ್ತು ಅಪರೂಪದ ಖನಿಜ ಸಂಪತ್ತಿನ ನಿಕ್ಷೇಪಗಳಿರುವ ಪ್ರದೇಶಗಳನ್ನು ಗುರುತಿಸಲಾಗಿತ್ತು. ಇದೇ ಸರ್ವೆಯಲ್ಲಿ ಗುಂಡ್ಲುಪೇಟೆ ಪಟ್ಟಣ ಮತ್ತು ಮಲ್ಲಯ್ಯನಪುರ ನಡುವಿನ ಅನ್ಗಲ್ ಗುಡ್ಡದ ತಪ್ಪಲಿನ ಮಣಗಹಳ್ಳಿ, ವಿಜಯಪುರ ಮತ್ತು ಕೂತನೂರು ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 700 ಎಕರೆ ವ್ಯಾಪ್ತಿಯಲ್ಲಿ ಅಪರೂಪದ ಖನಿಜ (ರೇರ್ ಅರ್ಥ್ ಮಿನರಲ್) ನಿಕ್ಷೇಪ ಪತ್ತೆಯಾಗಿದೆ.

ಈ ರೀತಿ ನಿಕ್ಷೇಪ ಇರುವ ಪ್ರದೇಶದಲ್ಲಿ 70 ಎಕರೆಯನ್ನು ಥೋರಿಯಂ ಹಾಗೂ ಕೋರ್ ಮಿನರಲ್ಸ್ ಜೋನ್ ಎಂದು ಗುರುತಿಸಿರುವ ಕೇಂದ್ರ ಸರ್ಕಾರ ಗಣಿಗಾರಿಕೆ ನಡೆಸಲು ಮುಂದಾಗಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ. ಅಣ್ಣೂರುಕೇರಿ ಗ್ರಾಮದ ಪೂರ್ವ ಪಾರ್ಶ್ವದ ಚಿಕ್ಕಮ್ಮ ತಾಯಿ ಬೆಟ್ಟದ ಪಶ್ಚಿಮ ಪಾರ್ಶ್ವದಲ್ಲೂ ಈ ಹಿಂದೆ ಖನಿಜ ನಿಕ್ಷೇಪ ಇರುವ ಬಗ್ಗೆ ಸುದ್ದಿಗಳು ಹರಡಿದ್ದವು. ಈಗಲೂ ಈ ಪ್ರದೇಶದ ಒಂದು ಪ್ರದೇಶಕ್ಕೆ ಬೀಗ ಮುದ್ರೆ ಹಾಕಲಾಗಿದೆ. ಈಗ ಥೋರಿಯಂ ನಿಕ್ಷೇಪ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಖನಿಜ ಸಾಧ್ಯತೆಯ ಚರ್ಚೆಗೆ ಮತ್ತಷ್ಟು ಬಲ ಬಂದಿದೆ.

ಥೋರಿಯಂ ನಿಕ್ಷೇಪ ಎಂದರೆ ಭೂಮಿಯಲ್ಲಿನ ಕಲ್ಲು, ಮಣ್ಣು ಮತ್ತು ನೀರಿನಲ್ಲಿ ನೈಸರ್ಗಿಕವಾಗಿ ದೊರೆಯುವ ವಿಕಿರಣಶೀಲ ಲೋಹದ ಶೇಖರಣೆಯಾಗಿದೆ. ಥೋರಿಯಂ ಅಪರೂಪದ ಲೋಹವಾಗಿದ್ದು ಸ್ವತಃ ಇಂಧನವಾಗಿ ಕೆಲಸ ಮಾಡದಿದ್ದರೂ ನ್ಯೂಟ್ರಾನ್ ಹೀರಿಕೊಳ್ಳುವಿಕೆಯ ಮೂಲಕ ಇದನ್ನು ಪರಮಾಣು ಸ್ಥಾವರದ ರಿಯಾಕ್ಟರ್‌ಗಳಲ್ಲಿ ಬಳಸಬಹುದು. ಥೋರಿಯಂ ಪ್ರಮುಖವಾಗಿ ‘ಮೋನಜೈಟ್’ಎಂಬ ಖನಿಜ ಮರಳಿನಲ್ಲಿ ದೊರೆಯುತ್ತದೆ. ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಅಂದರೆ ಸುಮಾರು 8.50 ಲಕ್ಷ ಟನ್‌ಗಳಷ್ಟು ಥೋರಿಯಂ ನಿಕ್ಷೇಪಗಳನ್ನು ಹೊಂದಿದೆ ಎನ್ನಲಾಗುತ್ತದೆ. ವಿಶೇಷವಾಗಿ ಕೇರಳ, ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡಿನ ಕಡಲ ತೀರದ ಮರಳಿನಲ್ಲಿ ಹೇರಳವಾಗಿ ಲಭ್ಯವಿದೆ ಎನ್ನುವ ಅಂದಾಜಿದೆ. ಭವಿಷ್ಯದಲ್ಲಿ ಭಾರತದ ಮಹತ್ವಾಕಾಂಕ್ಷೆಯ ಪರಮಾಣು ವಿದ್ಯುತ್ ಯೋಜನೆಗಳಲ್ಲಿ ಇದು ಅತ್ಯಂತ ಪ್ರಮುಖ ಇಂಧನವಾಗಲಿದೆ.