ನಾಳೆ ರಾಜೀನಾಮೆ ಕೊಡ್ತೀನಿ ಎಂದೇ ಬಂದಿದ್ದಾರೆ..! ಸಿದ್ದರಾಮಯ್ಯ ನಿರ್ಧಾರ ಬಿಚ್ಚಿಟ್ಟ ಆರ್.ವಿ. ದೇಶಪಾಂಡೆ

27-05-26 06:26 pm       HK News Staffer   ಕರ್ನಾಟಕ

ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ವಿಚಾರ ಇದೀಗ ಬಹುತೇಕ ಅಧಿಕೃತ ಸ್ವರೂಪ ಪಡೆದಂತಾಗಿದೆ. ಇದರ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸ್ಫೋಟ ಸೃಷ್ಟಿಸಿದೆ.

ಬೆಂಗಳೂರು, ಮೇ 27:  ಕರ್ನಾಟಕ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ವಿಚಾರ ಇದೀಗ ಬಹುತೇಕ ಅಧಿಕೃತ ಸ್ವರೂಪ ಪಡೆದಂತಾಗಿದೆ. ಇದರ ನಡುವೆ ಹಿರಿಯ ಕಾಂಗ್ರೆಸ್ ನಾಯಕ ಆರ್.ವಿ. ದೇಶಪಾಂಡೆ ನೀಡಿರುವ ಹೇಳಿಕೆ ರಾಜ್ಯ ರಾಜಕೀಯದಲ್ಲಿ ದೊಡ್ಡ ಸ್ಫೋಟ ಸೃಷ್ಟಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಆರ್.ವಿ. ದೇಶಪಾಂಡೆ, “ಸಿದ್ದರಾಮಯ್ಯ ಅವರು ದೆಹಲಿಯಿಂದ ಹಿಂದಿರುಗುವಾಗಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವ ನಿರ್ಧಾರ ಮಾಡಿಕೊಂಡು ಬಂದಿದ್ದಾರೆ” ಎಂದು ಬಹಿರಂಗಪಡಿಸಿದರು.

“ಮುಖ್ಯಮಂತ್ರಿಯವರು ನಮ್ಮನ್ನು ಭೇಟಿ ಮಾಡಿದ ವೇಳೆ ‘ನಾನು ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡ್ತೀನಿ’ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ. ನಾಳೆಯೇ ರಾಜೀನಾಮೆ ನೀಡುತ್ತೇವೆ ಎಂದೂ ಹೇಳಿದ್ದಾರೆ. ಆದರೆ, ನಾವು ಯಾವುದೇ ಕಾರಣಕ್ಕೂ ರಾಜೀನಾಮೆ ಕೊಡಬೇಡಿ ಎಂದು ಬಲವಾಗಿ ಮನವಿ ಮಾಡಿದ್ದೇವೆ,” ಎಂದು ದೇಶಪಾಂಡೆ ತಿಳಿಸಿದ್ದಾರೆ.

ಇದುವರೆಗೆ ರಾಜಕೀಯ ವಲಯದಲ್ಲಿ ಊಹಾಪೋಹವಾಗಿ ಹರಿದಾಡುತ್ತಿದ್ದ ಸುದ್ದಿಗೆ ದೇಶಪಾಂಡೆ ಅವರ ಹೇಳಿಕೆ ಹೊಸ ತಿರುವು ನೀಡಿದ್ದು, ಸಿಎಂ ರಾಜೀನಾಮೆ ಈಗ ಕ್ಷಣಗಣನೆಯ ವಿಷಯ ಎಂಬ ಚರ್ಚೆ ಮತ್ತಷ್ಟು ಗಟ್ಟಿಯಾಗಿದೆ. ಇನ್ನೊಂದೆಡೆ, ಮುಖ್ಯಮಂತ್ರಿ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಕಾನೂನು ಸಚಿವ ಎಚ್.ಕೆ. ಪಾಟೀಲ್ ಕೂಡ ಆತಂಕ ವ್ಯಕ್ತಪಡಿಸಿದ್ದಾರೆ.

“ಕಳೆದ ಕೆಲವು ಗಂಟೆಗಳಿಂದ ಮಾಧ್ಯಮಗಳಲ್ಲಿ ಬರುತ್ತಿರುವ ರಾಜೀನಾಮೆ ಸುದ್ದಿಗಳು ನಮ್ಮಲ್ಲೂ ಕಳವಳ ಮೂಡಿಸಿವೆ. ಅದಕ್ಕಾಗಿ ನಾವು ಸಿಎಂ ಅವರನ್ನು ಭೇಟಿ ಮಾಡಿ, ರಾಜೀನಾಮೆ ನೀಡದಂತೆ ಮನವಿ ಮಾಡಿದ್ದೇವೆ. ಆದರೆ, ನಮ್ಮ ಮಾತುಗಳನ್ನೆಲ್ಲ ಕೇಳಿಸಿಕೊಂಡ ಸಿದ್ದರಾಮಯ್ಯ ಅವರು ಸಂಪೂರ್ಣ ಮೌನವಾಗಿದ್ದರು. ಒಂದು ಮಾತನ್ನೂ ಆಡಲಿಲ್ಲ,” ಎಂದು ಎಚ್.ಕೆ. ಪಾಟೀಲ್ ಹೇಳಿದ್ದಾರೆ.

ಸಿಎಂ ಅವರ ಈ ನಿಗೂಢ ಮೌನವೇ ಇದೀಗ ಕಾಂಗ್ರೆಸ್ ವಲಯದಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದ್ದು, ಹೈಕಮಾಂಡ್ ಸೂಚನೆಗೆ ಸಿದ್ದರಾಮಯ್ಯ ತಲೆಬಾಗಿರುವ ಸಾಧ್ಯತೆಗಳು ಬಲವಾಗಿವೆ. ನಾಳೆ ಬೆಳಗ್ಗೆ ನಡೆಯಲಿರುವ ಜಂಟಿ ಸುದ್ದಿಗೋಷ್ಠಿಯ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲೋಕಭವನಕ್ಕೆ ತೆರಳಿ ಅಧಿಕೃತವಾಗಿ ರಾಜೀನಾಮೆ ಸಲ್ಲಿಸಲಿದ್ದಾರೆ ಎಂಬ ಮಾಹಿತಿ ರಾಜಕೀಯ ವಲಯದಲ್ಲಿ ವೇಗವಾಗಿ ಹರಿದಾಡುತ್ತಿದೆ.

ಒಟ್ಟಾರೆ, ಕಾಂಗ್ರೆಸ್ ಒಳಗಿನ ವೇಗವಾದ ರಾಜಕೀಯ ಬೆಳವಣಿಗೆಗಳು, ಸಚಿವರ ಸರಣಿ ಭೇಟಿ, ಹಿರಿಯ ನಾಯಕರ ಭಾವನಾತ್ಮಕ ಮನವಿಗಳು ಹಾಗೂ ಸಿಎಂ ಅವರ ಮೌನ — ಇವೆಲ್ಲವೂ ಕರ್ನಾಟಕದಲ್ಲಿ ದೊಡ್ಡ ನಾಯಕತ್ವ ಬದಲಾವಣೆಯ ಸೂಚನೆ ನೀಡುತ್ತಿರುವಂತಿದೆ.