ಕಪ್ಪೆಚಿಪ್ಪು ತೆಗೆಯಲು ನದಿಗಿಳಿದಿದ್ದ ಏಳು ಮಹಿಳೆಯರು ಸೇರಿ ಎಂಟು ಜನ ಸಾವು, ಇಬ್ಬರು ನಾಪತ್ತೆ ! ಭಟ್ಕಳದಲ್ಲಿ ಘೋರ ದುರಂತ

24-05-26 05:36 pm       HK News Desk   ಕರ್ನಾಟಕ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ತಟ್ಟೆಹಕ್ಕಲು ಎಂಬಲ್ಲಿ ನದಿಯಲ್ಲಿ ಕಪ್ಪೆ ಚಿಪ್ಪು ಸಂಗ್ರಹಿಸಲು ಹೋದ ಒಂದೇ ಕುಟುಂಬದ ಹತ್ತು ಮಂದಿ ನೀರು ಪಾಲಾಗಿದ್ದಾರೆ.

ಕಾರವಾರ, ಮೇ 24: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ಬಳಿಯ ತಟ್ಟೆಹಕ್ಕಲು ಎಂಬಲ್ಲಿ ನದಿಯಲ್ಲಿ ಕಪ್ಪೆ ಚಿಪ್ಪು ಸಂಗ್ರಹಿಸಲು ಹೋದ ಒಂದೇ ಕುಟುಂಬದ ಹತ್ತು ಮಂದಿ ನೀರು ಪಾಲಾಗಿದ್ದಾರೆ. ಕಪ್ಪೆಚಿಪ್ಪು ತೆಗೆಯಲು ಹೋಗಿದ್ದ 14 ಜನರು ನೀರಿನ ಸುಳಿಗೆ ಸಿಲುಕಿದ್ದು ಎಂಟು ಜನರ ಶವ ಪತ್ತೆಯಾಗಿದ್ದು ಇಬ್ಬರು ನೀರಿನಲ್ಲಿ ನಾಪತ್ತೆಯಾಗಿದ್ದಾರೆ. ನಾಲ್ವರನ್ನ ರಕ್ಷಣೆ ಮಾಡಲಾಗಿದೆ

ಏಳು ಮಹಿಳೆಯರು ಸೇರಿ ಇಂದು (ಮೇ 24) ಬೆಳಗ್ಗೆ ತಟ್ಟಿಹಕ್ಕಲು ಬಳಿ ನದಿಗೆ ಹೋಗಿದ್ದರು. ಕಪ್ಪೆ ಚಿಪ್ಪು ಸಂಗ್ರಹಿಸುತ್ತಿದ್ದ ವೇಳೆ ಏಕಾಏಕಿ ನದಿಯಲ್ಲಿ ನೀರು ಹೆಚ್ಚಾಗಿದ್ದು, ನದಿ ಬದಿಯಲ್ಲಿದ್ದವರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾರೆ. ಎಲ್ಲರೂ ಭಟ್ಕಳದ ಶಿರಾಲಿ ಮೂಲದವರು ಎಂದು ತಿಳಿದು ಬಂದಿದೆ. ಸಾವನ್ನಪ್ಪಿದ ಎಂಟು ಜನರಲ್ಲಿ ಓರ್ವ ಪುರುಷ, 7 ಜನ ಮಹಿಳೆಯರು ಎಂದು ತಿಳಿದುಬಂದಿದೆ. .

ಮೃತದೇಹಗಳನ್ನ ಭಟ್ಕಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಇನ್ನುಳಿದ ಇಬ್ಬರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ ಎಂಬ ಶಂಕೆಯಿದೆ. ಸ್ಥಳಕ್ಕೆ ಭಟ್ಕಳ ಪೋಲಿಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ರಕ್ಷಣಾ ಕಾರ್ಯ ನಡೆಸಲಾಗುತ್ತಿದೆ. ಎಲ್ಲರೂ ಅಕ್ಕಿಪಕ್ಕದ ಸಂಬಂಧಿಕರಾಗಿದ್ದು ಒಂದೇ ಕುಟುಂಬದವರು ಎಂಬ ಮಾಹಿತಿ ಲಭ್ಯವಾಗಿದೆ.