ರಾಜ್ಯಾದ್ಯಂತ ವರುಣಾರ್ಭಟ ; ಒಂದೇ ಮಳೆಗೆ ಬೆಚ್ಚಿಬಿದ್ದ ಬೆಂಗಳೂರು, ರಸ್ತೆ ಕುಸಿತ, ಕಾರುಗಳ ಮೇಲೆ ಬಿದ್ದ ಮರ, ನಗರವೇ ಜಲಾವೃತ

22-05-26 10:45 am       HK News Staffer   ಕರ್ನಾಟಕ

ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಂಪೂರ್ಣ ತತ್ತರಿಸಿ ಹೋಗಿದೆ. ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಿದರೆ, ಬೃಹತ್ ಮರಗಳು ಧರೆಗುರುಳಿ ಕಾರುಗಳು ಜಖಂಗೊಂಡಿವೆ. ಕೆಲವೆಡೆ ರಸ್ತೆ ಕುಸಿತವೂ ಸಂಭವಿಸಿದ್ದು, ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು, ಮೇ 22: ಗುರುವಾರ ಸಂಜೆ ಸುರಿದ ಭಾರೀ ಮಳೆಗೆ ಸಿಲಿಕಾನ್ ಸಿಟಿ ಬೆಂಗಳೂರು ಸಂಪೂರ್ಣ ತತ್ತರಿಸಿ ಹೋಗಿದೆ. ನಗರದ ಹಲವೆಡೆ ರಸ್ತೆಗಳು ಜಲಾವೃತಗೊಂಡು ವಾಹನ ಸವಾರರು ಪರದಾಡಿದರೆ, ಬೃಹತ್ ಮರಗಳು ಧರೆಗುರುಳಿ ಕಾರುಗಳು ಜಖಂಗೊಂಡಿವೆ. ಕೆಲವೆಡೆ ರಸ್ತೆ ಕುಸಿತವೂ ಸಂಭವಿಸಿದ್ದು, ಜನರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಜಯನಗರದಲ್ಲಿ ಮಳೆ ನೀರು ರಸ್ತೆಯನ್ನೇ ಹಳ್ಳದಂತೆ ಮಾಡಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ರಾಜಾಜಿನಗರದ ಶಂಕರ ಮಠ ರಸ್ತೆಯಲ್ಲಿ ಬೃಹತ್ ಮರವೊಂದು ಕಾರಿನ ಮೇಲೆ ಬಿದ್ದ ಪರಿಣಾಮ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ರಾಜಾಜಿನಗರ ಮೆಟ್ರೋ ನಿಲ್ದಾಣದ ಬಳಿ ಮರ ಬಿದ್ದ ಹಿನ್ನೆಲೆ ಸರ್ವೀಸ್ ರಸ್ತೆ ಬಂದ್ ಮಾಡಲಾಗಿದ್ದು, ವಾಹನ ಸವಾರರು ಸಂಕಷ್ಟ ಅನುಭವಿಸಿದರು.

ಮಹಾಲಕ್ಷ್ಮಿ ಲೇಔಟ್‌ನ ಪೈಪ್‌ಲೈನ್ ರಸ್ತೆಯಲ್ಲಿ ಮತ್ತೊಂದು ಬೃಹತ್ ಮರ ಮೂರು ಕಾರುಗಳ ಮೇಲೆ ಬಿದ್ದಿದ್ದು, ವಾಹನಗಳು ಸಂಪೂರ್ಣ ನುಜ್ಜುಗುಜ್ಜಾಗಿವೆ. ಮರಗಳು ಬಿದ್ದು ಹಲವು ಗಂಟೆಗಳಾದರೂ ಅಧಿಕಾರಿಗಳು ತಡವಾಗಿ ಸ್ಪಂದಿಸಿದ್ದಾರೆ ಎಂದು ಸ್ಥಳೀಯರು ಜಿಬಿಎ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದಾರೆ.

ನಂದಿನಿ ಲೇಔಟ್‌ನಲ್ಲಿ ಒಂದೇ ರಸ್ತೆಯಲ್ಲಿ ಐದಕ್ಕೂ ಹೆಚ್ಚು ಮರಗಳು ಧರೆಗುರುಳಿದ್ದು, ಮನೆಗಳು, ಅಂಗಡಿಗಳ ಶೆಡ್‌ಗಳು ಹಾಗೂ ವಾಹನಗಳಿಗೆ ಹಾನಿಯಾಗಿದೆ. ವಿಜಯನಗರ, ಮಲ್ಲೇಶ್ವರ, ಪುಲಿಕೇಶಿನಗರ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಮರ ಬಿದ್ದು ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.

ಇತ್ತ ಯುಬಿ ಸಿಟಿಯ ಸದರ್ನ್ ಸ್ಟಾರ್ ಹೋಟೆಲ್ ಮುಂಭಾಗ ರಸ್ತೆ ಕುಸಿದು ಇನ್ನೋವಾ ಕಾರೊಂದು ಸಿಲುಕಿಕೊಂಡ ಘಟನೆ ಜನರಲ್ಲಿ ಆತಂಕ ಮೂಡಿಸಿದೆ. ರಸ್ತೆ ಕಾಮಗಾರಿ ಕಳಪೆಯಾಗಿರುವುದೇ ಈ ಅವಘಡಕ್ಕೆ ಕಾರಣ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.

ಮಳೆ ಅವಾಂತರದ ನಡುವೆಯೇ ಯಲಹಂಕ ಫ್ಲೈಓವರ್ ಬಳಿ ಕಾರು ಮತ್ತು ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಸಿಗ್ನಲ್ ಜಂಪ್ ಮಾಡಿದ ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರು ಚಾಲಕ ಮದ್ಯಪಾನ ಮಾಡಿ ವಾಹನ ಚಲಾಯಿಸಿದ್ದ ಶಂಕೆ ವ್ಯಕ್ತವಾಗಿದ್ದು, ಪೊಲೀಸರು ಕಾರು ಹಾಗೂ ಚಾಲಕನನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಬೆಂಗಳೂರು ಮಾತ್ರವಲ್ಲ, ರಾಜ್ಯದ ಹಲವು ಜಿಲ್ಲೆಗಳಲ್ಲೂ ಮಳೆ ಆರ್ಭಟ ಮುಂದುವರಿದಿದೆ. ದಾವಣಗೆರೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದ ಕಾರಣ ಮನೆಗಳಿಗೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಲಾರ ಜಿಲ್ಲೆಯ ಮಾಲೂರಿನಲ್ಲಿ ಬಿರುಗಾಳಿ ಮಳೆಗೆ 90 ಲಕ್ಷ ರೂ. ಮೌಲ್ಯದ ಪಾಲಿಹೌಸ್ ಸಂಪೂರ್ಣ ನಾಶವಾಗಿದೆ. ಯಾದಗಿರಿಯ ತುಮಕೂರು ಗ್ರಾಮದಲ್ಲಿ 30ಕ್ಕೂ ಹೆಚ್ಚು ಮರಗಳು ಉರುಳಿಬಿದ್ದರೆ, ಚಿತ್ರದುರ್ಗದಲ್ಲಿ ನಿರಂತರ ತುಂತುರು ಮಳೆ ಜನಜೀವನ ಅಸ್ತವ್ಯಸ್ತಗೊಳಿಸಿದೆ.

ಹವಾಮಾನ ಇಲಾಖೆ ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಮಳೆಯ ಅಬ್ಬರ ಮುಂದುವರೆಯಲಿದೆ ಎಂದು ಎಚ್ಚರಿಕೆ ನೀಡಿದೆ.