ಇರು ಅಂದ್ರೆ ಇರ್ತೀನಿ, ಹೈಕಮಾಂಡ್ ಮಾತನ್ನಷ್ಟೇ ಕೇಳ್ತೀನಿ.. ; ನಾಯಕತ್ವ ಗೊಂದಲ ಬಗ್ಗೆ ಸಿಎಂ ಸಿದ್ದರಾಮಯ್ಯ ಕಟು ನುಡಿ, ಮತ್ತೆ ದೆಹಲಿ ಅಂಗಳಕ್ಕೆ ಚೆಂಡು 

06-05-26 07:41 pm       HK News Desk   ಕರ್ನಾಟಕ

ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದರೂ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿ ಅಚ್ಚರಿ ಮೂಡಿಸಿದ್ದಾರೆ. 

ಬೆಂಗಳೂರು, ಮೇ 6 ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸ್ಪಷ್ಟಪಡಿಸಿದ್ದರೂ, ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ ಅಡ್ಡಗೋಡೆ ಮೇಲೆ ದೀಪವಿಟ್ಟಂತೆ ಉತ್ತರಿಸಿ ಅಚ್ಚರಿ ಮೂಡಿಸಿದ್ದಾರೆ. 

"ಹೈಕಮಾಂಡ್ ಹೇಳಿದರೆ ಪೂರ್ಣ 5 ವರ್ಷ ಮುಖ್ಯಮಂತ್ರಿಯಾಗಿ ನಾನೇ ಇರುತ್ತೇನೆ. ನಾನು ಕೇವಲ ಹೈಕಮಾಂಡ್ ಮಾತನ್ನಷ್ಟೇ ಕೇಳುವುದು. ನೀವು ಎಷ್ಟೇ ಬಾರಿ ಈ ಪ್ರಶ್ನೆ ಕೇಳಿದರೂ ನನ್ನ ಉತ್ತರ ಹೈಕಮಾಂಡ್ ಅಷ್ಟೇ. ನನ್ನನ್ನು ಇರಿ ಎಂದರೆ ಇರುತ್ತೇನೆ ಎಂದು ಹೇಳುವ ಮೂಲಕ ಮತ್ತೊಂದು ದಾಳ ಉರುಳಿಸಿದ್ದಾರೆ. ನಿನ್ನೆಯಷ್ಟೇ ಸಚಿವ ಸತೀಶ್ ಜಾರಕಿಹೊಳಿ ಈ ಗೊಂದಲದ ಬಗ್ಗೆ ಹೈಕಮಾಂಡ್ ನಾಯಕರೇ ಸ್ಪಷ್ಟಪಡಿಸಬೇಕು ಎಂದು ಹೇಳಿಕೆ ನೀಡಿದ್ದರು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ 5 ವರ್ಷ ಸುಭದ್ರವಾಗಿರುತ್ತದೆ. ಸರ್ಕಾರದ ಬಗ್ಗೆ, ನಾಯಕತ್ವದ ಬಗ್ಗೆ ಬೇರೆ ಯಾರು ಏನೇ ಮಾತನಾಡಿದರೂ ಅದು ಅವರ ವೈಯಕ್ತಿಕ ಹೇಳಿಕೆ' ಎಂದು ಸಿದ್ದರಾಮಯ್ಯ ಹೇಳಿದರು. 

ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಯ ಡಿ.ಎನ್. ಜೀವರಾಜ್ ಗೆದ್ದಿರುವ ವಿಚಾರದಲ್ಲಿ ಮಾತನಾಡಿದ ಸಿಎಂ, ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು. 'ಇದು ಬಿಜೆಪಿಯವರು ಮಾಡಿರುವ ಕ್ರಿಮಿನಲ್ ಪಿತೂರಿ. ಅಂದು ಫಲಿತಾಂಶ ಬರುವಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇತ್ತು. ಅವರ ನಿರ್ದೇಶನದಂತೆ ಚುನಾವಣಾ ಸಿಬ್ಬಂದಿಗಳು ಮತ್ತು ಜೀವರಾಜ್ ಸೇರಿಕೊಂಡು ಅಂಚೆ ಮತಗಳನ್ನು ತಿದ್ದಿದ್ದಾರೆ. ಅಂದು ಮತ ಪತ್ರದಲ್ಲಿ ಇಲ್ಲದ ಗೆರೆಗಳು ಈಗ ಹೇಗೆ ಬಂದವು? ಇದು ಖಚಿತವಾಗಿ ನಡೆದಿರುವ ಪಿತೂರಿ. ಈ ವಿಚಾರವಾಗಿ ನಾವು ಸುಮ್ಮನೆ ಕೂರುವುದಿಲ್ಲ, ನ್ಯಾಯಾಲಯದ ಮೊರೆ ಹೋಗುತ್ತೇವೆ' ಎಂದು ಗುಡುಗಿದರು. 

ರಾಹುಲ್ ಗಾಂಧಿ ಭೇಟಿ ಮತ್ತು ಸಂಪುಟ ಪುನಾರಚನೆಯ ಕುರಿತ ಊಹಾಪೋಹಗಳಿಗೆ ತೆರೆ ಎಳೆದ ಸಿಎಂ, 'ರಾಹುಲ್ ಗಾಂಧಿ ಅವರು ಇಲ್ಲಿಯವರೆಗೆ ನನ್ನನ್ನು ದೆಹಲಿಗೆ ಕರೆದಿಲ್ಲ. ನಾನು ಕೂಡ ಅವರ ಅಪಾಯಿಂಟ್ ಮೆಂಟ್ ಕೇಳಿಲ್ಲ. ಅವರು ಕರೆದರೆ ನಾನು ಹೋಗುತ್ತೇನೆ. ಅಪಾಯಿಂಟ್ಮೆಂಟ್ ಫಿಕ್ಸ್ ಆದ ಮೇಲೆ ಸಂಪುಟ ಪುನಾರಚನೆಯೋ ಅಥವಾ ವಿಸ್ತರಣೆಯೋ ಎಂಬುದು ಗೊತ್ತಾಗಲಿದೆ. ಸದ್ಯಕ್ಕಂತೂ ನನ್ನ ದೆಹಲಿ ಪ್ರವಾಸ ನಿಗದಿಯಾಗಿಲ್ಲ' ಎಂದು ತಿಳಿಸಿದ್ದಾರೆ. 

ಒಂದೆಡೆ ಮಲ್ಲಿಕಾರ್ಜುನ ಖರ್ಗೆ ಅಧಿಕಾರ ಹಂಚಿಕೆ ಇಲ್ಲವೆಂದು ಹೇಳಿದ್ದರೂ ಡಿಕೆಶಿ ಕಡೆಯವರು ಮೇ 15ಕ್ಕೆ ಗಿಫ್ಟ್ ನೀಡಲಿದ್ದಾರೆಂದು ಹೇಳಿಕೆ ಕೊಟ್ಟು ಗೊಂದಲ ಸೃಷ್ಟಿಸುತ್ತಿದ್ದಾರೆ. ಇದೇ ವೇಳೆ, ಸಚಿವ ಸಂಪುಟ ಸರ್ಜರಿ ಬಗ್ಗೆಯೂ ಮಾತು ಕೇಳಿಬರುತ್ತಿದ್ದು ಇದಕ್ಕೆಲ್ಲ ಸಿಎಂ ಸಿದ್ದರಾಮಯ್ಯ ದೆಹಲಿಗೆ ತೆರಳಲೇಬೇಕು. ಆದರೆ ಇದನ್ನೇ ಡಿಕೆಶಿ ಪಾಳಯದ ಶಾಸಕರು ಸಿಎಂ ಬುಲಾವ್ ಎಂದು ಸುದ್ದಿ ಹಬ್ಬಿಸುತ್ತಿದ್ದಾರೆ.