ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ; ಶಾಸಕ ಡಿಎನ್ ಜೀವರಾಜ್ ಸೇರಿ ಮೂವರ ಮೇಲೆ ಎಫ್ಐಆರ್ ದಾಖಲು

05-05-26 03:37 pm       HK News Desk   ಕರ್ನಾಟಕ

ಶೃಂಗೇರಿ ಕ್ಷೇತ್ರದ ಅಂಚೆ ಮತಗಳಲ್ಲಿ ಅಕ್ರಮ ಎಸಗಿದ್ದಾರೆಂಬ ಆರೋಪದ ಮೇಲೆ ಹೊಸತಾಗಿ ಆಯ್ಕೆಯಾದ ಬಿಜೆಪಿ ಶಾಸಕ ಡಿ.ಎನ್ ಜೀವರಾಜ್ ಮತ್ತು ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಚಿಕ್ಕಮಗಳೂರು, ಮೇ 5 ಶೃಂಗೇರಿ ಕ್ಷೇತ್ರದ ಅಂಚೆ ಮತಗಳಲ್ಲಿ ಅಕ್ರಮ ಎಸಗಿದ್ದಾರೆಂಬ ಆರೋಪದ ಮೇಲೆ ಹೊಸತಾಗಿ ಆಯ್ಕೆಯಾದ ಬಿಜೆಪಿ ಶಾಸಕ ಡಿ.ಎನ್ ಜೀವರಾಜ್ ಮತ್ತು ಮೂವರು ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಚಿಕ್ಕಮಗಳೂರು ನಗರ ಠಾಣೆಗೆ ಕಾಂಗ್ರೆಸಿನ ಅಂಚೆ ಮತ ಎಣಿಕೆ ಟೇಬಲ್‌ ಏಜೆಂಟ್ ಆಗಿದ್ದ ಸುಧೀರ್ ಕುಮಾರ್ ಮುರೋಳ್ಳಿ ನೀಡಿದ ದೂರಿನಂತೆ, ಶಾಸಕ ಡಿ.ಎನ್.ಜೀವರಾಜ್, ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ಹಾಗೂ ಅಂದಿನ ಜಿಲ್ಲಾಧಿಕಾರಿ ರಮೇಶ್ ಕುಮಾರ್ ವಿರುದ್ಧ ಪ್ರಕರಣ ದಾಖಲಾಗಿದೆ.

ಸ್ಟ್ರಾಂಗ್ ರೂಂ ಸೀಲ್ ಆಗಿರಲಿಲ್ಲ, ಮತಪತ್ರಗಳಿದ್ದ ಟ್ರಂಕ್ ಓಪನ್ ಆಗಿತ್ತು, ಟ್ರಂಕಿನ ಸೀಲ್ ಓಪನ್ ಆಗಿದ್ದು, ಲಾಕ್ ಕಟ್ ಆಗಿತ್ತು. ಹೀಗಾಗಿ ಮತ ಟ್ಯಾಂಪರಿಂಗ್ ಆಗಿರುವ ಅನುಮಾನವಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ದೂರಿನ ಅನ್ವಯ ಮೂವರ ವಿರುದ್ಧ ವಂಚನೆ, ಕ್ರಿಮಿನಲ್ ಹಾಗೂ ಫೋರ್ಜರಿ ಪ್ರಕರಣ ದಾಖಲಾಗಿದೆ. 

2023ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ರಾಜೇಗೌಡ 59171 ಮತ ಪಡೆದು ವಿಜಯ ಗಳಿಸಿದ್ದರು. ಬಿಜೆಪಿಯ ಜೀವರಾಜ್ ಗಳಿಸಿದ್ದು 58970 ಮತಗಳು. ಗೆಲುವಿನ ಅಂತರ 201 ಮತಗಳು. ಆಗ ಚಲಾವಣೆ ಆದ ಅಂಚೆ ಮತಗಳು 1822. ಇದರಲ್ಲಿ ಜೀವರಾಜ್ 692 ಮತಗಳನ್ನು ಪಡೆದರೆ ರಾಜೇಗೌಡ 569 ಮತ ಗಳಿಸಿದ್ದರು. ಆಗ 279 ಮತ ತಿರಸ್ಕೃತ ಆಗಿತ್ತು. ಹೈಕೋರ್ಟ್ ಅದೇಶದಂತೆ ಅಂಚೆ ಮತಗಳ ಮರು ಎಣಿಕೆ ನಡೆದು ಜೀವರಾಜ್ ಗೆದ್ದಿರುವುದಾಗಿ ಚುನಾವಣಾಧಿಕಾರಿ ಘೋಷಣೆ ಮಾಡಿದ್ದರು