ಮಂಜೇಶ್ವರದಲ್ಲಿ ಮತ ಧ್ರುವೀಕರಣ ; 29,252 ಮತಗಳಿಂದ ಮುಸ್ಲಿಂ ಲೀಗ್ ಜಯಭೇರಿ, ಬಿಜೆಪಿ- ಎಡರಂಗಕ್ಕೆ ಭಾರೀ ಮುಖಭಂಗ, ಕಮ್ಯುನಿಸ್ಟ್ ಮತಗಳೇ ಖೋತಾ !

04-05-26 06:27 pm       HK News Staffer   ಕರ್ನಾಟಕ

ಭಾರೀ ಪೈಪೋಟಿ ನಿರೀಕ್ಷಿಸಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಎಕೆಎಂ ಅಶ್ರಫ್ ಎರಡನೇ ಬಾರಿಗೆ ಭಾರೀ ಅಂತರದ ಜಯ ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಧ್ರುವೀಕರಣದಿಂದಾಗಿ ಅಶ್ರಫ್ ಅವರು 29252 ಮತಗಳ ಅಂತರದಿಂದ ಜಯಭೇರಿ ಸಾಧಿಸಿದ್ದಾರೆ.

ಕಾಸರಗೋಡು, ಮೇ 4: ಭಾರೀ ಪೈಪೋಟಿ ನಿರೀಕ್ಷಿಸಿದ್ದ ಮಂಜೇಶ್ವರ ಕ್ಷೇತ್ರದಲ್ಲಿ ಮುಸ್ಲಿಂ ಲೀಗ್ ಅಭ್ಯರ್ಥಿ ಎಕೆಎಂ ಅಶ್ರಫ್ ಎರಡನೇ ಬಾರಿಗೆ ಭಾರೀ ಅಂತರದ ಜಯ ಸಾಧಿಸಿದ್ದಾರೆ. ಕ್ಷೇತ್ರದಲ್ಲಿ ಮುಸ್ಲಿಂ ಮತಗಳ ಧ್ರುವೀಕರಣದಿಂದಾಗಿ ಅಶ್ರಫ್ ಅವರು 29252 ಮತಗಳ ಅಂತರದಿಂದ ಜಯಭೇರಿ ಸಾಧಿಸಿದ್ದಾರೆ. 

ನಿಕಟ ಪ್ರತಿಸ್ಪರ್ಧಿಯಾಗಿದ್ದ ಬಿಜೆಪಿ ಅಭ್ಯರ್ಥಿ ಸುರೇಂದ್ರನ್ 67696 ಮತಗಳನ್ನು ಪಡೆದಿದ್ದರೆ, ಸಿಪಿಎಂ ಪಕ್ಷದ ಕೆ.ಆರ್ ಜಯಾನಂದ್ ಕೇವಲ 21212 ಮತಗಳನ್ನು ಪಡೆದು ಹೀನಾಯ ಸೋಲನುಭವಿಸಿದ್ದಾರೆ. ಉಳಿದಂತೆ, ಪಕ್ಷೇತರ ಸ್ಪರ್ಧಿಸಿದ್ದ ಜೀನ್ ಲವಿನಾ ಮೊಂತೇರೊ 523, ಕಣ್ಣೂರು ಅಬ್ದಲ್ಲ ಮಾಸ್ಟರ್ 283, ಬಿಎಸ್ಪಿಯಿಂದ ಸ್ಪರ್ಧಿಸಿದ್ದ ಸಂಜೀವ 213 ಮತ ಪಡೆದಿದ್ದಾರೆ.  

ಈ ಹಿಂದೆ ಮಂಜೇಶ್ವರದಲ್ಲಿ ಎರಡು ಬಾರಿ ಬಿಜೆಪಿಯ ಸುರೇಂದ್ರನ್ ಅತಿ ಕಡಿಮೆ ಅಂತರದಿಂದ ಸೋಲು ಕಂಡಿದ್ದರಿಂದ ಈ ಬಾರಿ ಗೆಲುವಿನ ಭರವಸೆ ಹುಟ್ಟಿಸಿದ್ದರು.‌ ಇದಕ್ಕಾಗಿ ಬಿಜೆಪಿಯಿಂದ ಭಾರೀ ಶ್ರಮ ಹಾಕಲಾಗಿತ್ತು. ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು, ಪಕ್ಷದ ಮುಖಂಡರು ತಿಂಗಳ ಕಾಲ ಪ್ರಚಾರದಲ್ಲಿ ತೊಡಗಿದ್ದರು.‌ 2016ರಲ್ಲಿ 89 ಮತಗಳಿಂದ ಸೋತಿದ್ದರೆ, 2021ರಲ್ಲಿ ಸುರೇಂದ್ರನ್ 645 ಮತಗಳ ಅಂತರದಿಂದ ಸೋಲು ಕಂಡಿದ್ದರು. 

ಈ ಬಾರಿ ಮತ ಪರಿಷ್ಕರಣೆ ಬಳಿಕ ನಡೆದ ಚುನಾವಣೆಯಲ್ಲಿ ಕೇರಳದಲ್ಲಿ ಮಂಜೇಶ್ವರ, ಕಾಸರಗೋಡು, ತಿರುವನಂತಪುರಂ, ಪಾಲಕ್ಕಾಡ್ ಸೇರಿ ಎಂಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವಿನ ಭರವಸೆ ಹುಟ್ಟಿಸಿತ್ತು. ಆದರೆ ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಮಂಜೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಕಾರ್ಯಕರ್ತರೇ ದಿಗಿಲಾಗುವಂತೆ ಮತ ಗಳಿಕೆ ಪ್ರಮಾಣವೇ ಭಾರೀ ಕಡಿಮೆಯಾಗಿದೆ. ಕಮ್ಯುನಿಸ್ಟ್ ಪಕ್ಷಕ್ಕೆ ಬೀಳುತ್ತಿದ್ದ ಮತಗಳೇ ಖೋತಾ ಆಗಿದ್ದು ಈವರೆಗಿನ ಇತಿಹಾಸದಲ್ಲಿ ಅತಿ ಕಡಿಮೆ ಮತಗಳನ್ನು ಗಳಿಸಲಷ್ಟೆ ಎಡರಂಗ ಶಕ್ತವಾಗಿದೆ. ಬಿಜೆಪಿಗೂ ಸಾಂಪ್ರದಾಯಿಕ ಮತಗಳಷ್ಟೇ ಬಿದ್ದಿದ್ದು ಹೆಚ್ಚುವರಿ ಸಾಧನೆಯಾಗದಿರುವುದು ಕಂಡುಬಂದಿದೆ.