ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ; ರಾತ್ರಿಯಿಡೀ ಹೈಡ್ರಾಮಾ, 258 ಮತಗಳ ಅಸಿಂಧು, ಕಾಂಗ್ರೆಸ್ ಶಾಸಕ ರಾಜೇಗೌಡರಿಗೆ ಹಿನ್ನಡೆ, ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆಲ್ಲುವ ಸಾಧ್ಯತೆ

03-05-26 12:34 pm       HK News Staffer   ಕರ್ನಾಟಕ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೆ ಸಂಬಂಧಿಸಿದಂತೆ ರಾತ್ರಿಯಿಡೀ ಹೈಡ್ರಾಮಾ ನಡೆದಿದ್ದು, ಭಾರೀ ತಿರುವು ಪಡೆದುಕೊಂಡಿದೆ. ಹೈಕೋರ್ಟ್ ಆದೇಶದಂತೆ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ನಿನ್ನೆ ಸಂಜೆ ಗೆಲುವು ಎಂದು ಘೋಷಿಸಲ್ಪಟ್ಟಿದ್ದ ಹಾಲಿ ಶಾಸಕ ಕಾಂಗ್ರೆಸಿನ ಟಿ.ಡಿ. ರಾಜೇಗೌಡ ಅವರಿಗೆ ಹಿನ್ನಡೆಯಾಗಿದೆ.

ಚಿಕ್ಕಮಗಳೂರು, ಮೇ 3: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಗೆ ಸಂಬಂಧಿಸಿದಂತೆ ರಾತ್ರಿಯಿಡೀ ಹೈಡ್ರಾಮಾ ನಡೆದಿದ್ದು, ಭಾರೀ ತಿರುವು ಪಡೆದುಕೊಂಡಿದೆ. ಹೈಕೋರ್ಟ್ ಆದೇಶದಂತೆ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ನಿನ್ನೆ ಸಂಜೆ ಗೆಲುವು ಎಂದು ಘೋಷಿಸಲ್ಪಟ್ಟಿದ್ದ ಹಾಲಿ ಶಾಸಕ ಕಾಂಗ್ರೆಸಿನ ಟಿ.ಡಿ. ರಾಜೇಗೌಡ ಅವರಿಗೆ ಹಿನ್ನಡೆಯಾಗಿದೆ.

ಅಂಚೆ ಮತಗಳ ಮರು ಎಣಿಕೆಯಲ್ಲಿ ನಿನ್ನೆ ಸಾಯಂಕಾಲ ಟಿ.ಡಿ ರಾಜೇಗೌಡ ವಿಜಯ ಸಾಧಿಸಿದರು ಎಂದು ಹೇಳಲಾಗಿತ್ತು. ಆದರೆ ಮತ ಎಣಿಕೆಯಲ್ಲಿ ಭಾರೀ ಗೊಂದಲ ಉಂಟಾಗಿದ್ದರಿಂದ ನಿನ್ನೆ ಬೆಳಗ್ಗೆ ಆರಂಭವಾದ ಮತ ಎಣಿಕೆ ಮಧ್ಯರಾತ್ರಿಯ ವರೆಗೂ ನಡೆಯಿತು. ಇಂದು ಬೆಳಗ್ಗೆ ಎಲ್ಲ ಗೊಂದಲಗಳಿಗೆ ಮಹತ್ವದ ತಿರುವು ಸಿಕ್ಕಿದೆ. 2023ರ ಮೇ 13 ರಂದು ನಡೆದಿದ್ದ ಮತ ಎಣಿಕೆ ವೇಳೆ ಸಿಂಧು ಎಂದು ಪರಿಗಣಿಸಲಾಗಿದ್ದ ಮತಗಳು, ಈಗ ಮರು ಎಣಿಕೆ ವೇಳೆ ತಿರಸ್ಕೃತಗೊಂಡಿವೆ. 

ಮತ ಎಣಿಕೆ ಪತ್ರದಲ್ಲಿ ರಾಜೇಗೌಡ ಮತ್ತು ಮತ್ತೊಬ್ಬ ಅಭ್ಯರ್ಥಿ ಇಬ್ಬರಿಗೂ ‘ಡಬ್ಬಲ್ ಟಿಕ್’ ಮಾಡಿರುವುದು ಕಂಡುಬಂದ ಹಿನ್ನೆಲೆಯಲ್ಲಿ 258 ಮತಗಳು ತಿರಸ್ಕೃತಗೊಂಡವು. ಈ ಹಿಂದೆ 569 ಅಂಚೆ ಮತಗಳನ್ನು ಪಡೆದಿದ್ದ ರಾಜೇಗೌಡರ ಪಟ್ಟಿಯಿಂದ 255 ಮತಗಳು ಮರು ಎಣಿಕೆ ವೇಳೆ ಕಡಿತಗೊಂಡವು. ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ.

ಹೀಗಾಗಿ ಮರು ಎಣಿಕೆಯಲ್ಲಿ ರಾಜೇಗೌಡರ 255 ಅಂಚೆ ಮತಗಳು ಕಡಿತಗೊಂಡಿದ್ದರಿಂದ ತನಗೆ ಬಹುಮತ ಬಂದಿದೆ ಎಂದು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿಶ್ವಾಸ ವ್ಯಕ್ತಪಡಿಸಿದ್ದು ಚುನಾವಣಾ ಆಯೋಗ ಅಧಿಕೃತವಾಗಿ ಘೋಷಣೆ ಮಾಡುವುದು ಬಾಕಿ ಇದೆ. ಮರು ಎಣಿಕೆಯಲ್ಲಿ ಇಷ್ಟೊಂದು ದೊಡ್ಡ ಮಟ್ಟದ ವ್ಯತ್ಯಾಸ ಕಂಡುಬಂದ ಬೆನ್ನಲ್ಲೇ ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಶಾಸಕ ರಾಜೇಗೌಡ ಅವರು ನಸುಕಿನ ಜಾವ 4 ಗಂಟೆಯ ವರೆಗೂ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯಲ್ಲಿ ಬೀಡುಬಿಟ್ಟಿದ್ದರು.

ಇದೇ ವೇಳೆ, ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೋಳಿ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಮತ್ತು ಅಂದಿನ ಚುನಾವಣಾಧಿಕಾರಿ ವೇದಮೂರ್ತಿ ವಿರುದ್ಧ ಮತಗಳ ತಿದ್ದುಪಡಿ ಮಾಡಲಾಗಿದೆ ಎಂದು ದೂರು ನೀಡಿದ್ದಾರೆ. ರಾಜೇಗೌಡರ ಮತಪತ್ರಗಳಲ್ಲಿ ‘ಡಬ್ಬಲ್ ಟಿಕ್’ ಮಾಡಿ ಉದ್ದೇಶಪೂರ್ವಕ ತಿರಸ್ಕೃತ ಆಗುವಂತೆ ಮಾಡಲಾಗಿದೆ ಎಂದು ಕಾಂಗ್ರೆಸ್ ಆರೋಪ ಮಾಡುತ್ತಿದೆ. ಹೈಕೋರ್ಟ್ ಆದೇಶದಂತೆ ಮರು ಎಣಿಕೆ ಮಾಡಿದ್ದೇವೆ. ಹ್ಯಾಂಡ್ ಬುಕ್ ನಿಯಮಗಳ ಪ್ರಕಾರ ಸಿಂಧು ಮತ್ತು ಅಸಿಂಧು ಮತಗಳನ್ನು ನಿರ್ಧರಿಸಲಾಗಿದೆ. ವರದಿಯನ್ನು ಈಗ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿದೆ ಎಂದು ಚುನಾವಣಾ ಅಧಿಕಾರಿ ತಿಳಿಸಿದ್ದಾರೆ.