ತುಮಕೂರಿನಲ್ಲಿ ವಾರದ ಅಂತರದಲ್ಲಿ 44 ನವಿಲು ಸಾವು ; ಬಿಸಿಲು ಕಾರಣ ಎಂದಿದ್ದ ಜಿಲ್ಲಾಡಳಿತ, ಹಕ್ಕಿಜ್ವರ ಹರಡಿದ್ದು ದೃಢವೆಂದ ಪ್ರಯೋಗಾಲಯ ವರದಿ

02-05-26 04:48 pm       HK News Staffer   ಕರ್ನಾಟಕ

ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ತೀವ್ರ ಬಿಸಿಲಿನಿಂದ ನವಿಲುಗಳು ಸಾವನ್ನಪ್ಪಿದ್ದಾಗಿ ಹೇಳಲಾಗಿತ್ತು. ಆದರೆ ಪ್ರಯೋಗಾಲಯದ ವರದಿಗಳು ನವಿಲುಗಳ ಸಾವಿಗೆ ಹಕ್ಕಿಜ್ವರ (H5N1) ಸೋಂಕು ಕಾರಣ ಎಂದು ಹೇಳಿವೆ. ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ 44 ನವಿಲು ಸಾವನ್ನಪ್ಪಿದ್ದು ಭಾರೀ ಆತಂಕಕ್ಕೀಡು ಮಾಡಿತ್ತು.

ತುಮಕೂರು, ಮೇ 2: ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ ತೀವ್ರ ಬಿಸಿಲಿನಿಂದ ನವಿಲುಗಳು ಸಾವನ್ನಪ್ಪಿದ್ದಾಗಿ ಹೇಳಲಾಗಿತ್ತು. ಆದರೆ ಪ್ರಯೋಗಾಲಯದ ವರದಿಗಳು ನವಿಲುಗಳ ಸಾವಿಗೆ ಹಕ್ಕಿಜ್ವರ (H5N1) ಸೋಂಕು ಕಾರಣ ಎಂದು ಹೇಳಿವೆ. ತುಮಕೂರು ಜಿಲ್ಲೆಯಲ್ಲಿ ಇತ್ತೀಚೆಗೆ 44 ನವಿಲು ಸಾವನ್ನಪ್ಪಿದ್ದು ಭಾರೀ ಆತಂಕಕ್ಕೀಡು ಮಾಡಿತ್ತು. 

ಏಪ್ರಿಲ್ 16ರಿಂದ 24ರ ನಡುವೆ, ಬೊಮ್ಮನಹಳ್ಳಿ ಮತ್ತು ಮಾಚೇನಹಳ್ಳಿ ಗ್ರಾಮಗಳಲ್ಲಿ ನವಿಲುಗಳ ಸಾವು ವರದಿಯಾಗಿತ್ತು. ಕಾರ್ಯಾಚರಣೆ ಸಮಯದಲ್ಲಿ ಕೆಸರಮಾಡು, ಹಿರೇಹಳ್ಳಿ ಮತ್ತು ಗೂಳೂರು ಗ್ರಾಮ ಪಂಚಾಯತ್‌ಗಳ ವ್ಯಾಪ್ತಿಯ ಕೃಷಿ ಹೊಲಗಳಲ್ಲಿ ನವಿಲುಗಳ ಸಾವಿನ ಬಗ್ಗೆ ವರದಿಯಾಗಿರುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದರು. ತೀವ್ರ ಬಿಸಿಲಿನ ಕಾರಣದಿಂದ ಸಾವು ಆಗಿರುವುದಾಗಿ ಅಧಿಕಾರಿಗಳು ಸಮಜಾಯಿಷಿ ನೀಡಿದ್ದರು. 

ಆದರೆ ಮೃತ ನವಿಲುಗಳಿಂದ ಸಂಗ್ರಹಿಸಲಾದ ಮಾದರಿಗಳನ್ನು ಭೋಪಾಲ್‌ನಲ್ಲಿರುವ ICAR ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಇದರ ವರದಿ H5N1 ಸಾವಿಗೆ ಕಾರಣ ಎಂದು ದೃಢಪಡಿಸಿದೆ. ಆದಾಗ್ಯೂ, ಏಪ್ರಿಲ್ 23 ರಿಂದ ತುಮಕೂರು ತಾಲ್ಲೂಕಿನ ಯಾವುದೇ ಭಾಗದಲ್ಲಿ ಹೊಸ ಸಾವುಗಳು ವರದಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಯೋಗಾಲಯದ ವರದಿಗಳು, H5N1 ಸೋಂಕಿನಿಂದ ನವಿಲುಗಳು ಸಾವನ್ನಪ್ಪಿವೆ ಎಂದು ದೃಢಪಡಿಸಿವೆ. ಸೋಂಕನ್ನು ತಡೆಗಟ್ಟಲು ಅರಣ್ಯ ಇಲಾಖೆಯು ಆರೋಗ್ಯ ಮತ್ತು ಪಶುಸಂಗೋಪನೆ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖೆಗಳೊಂದಿಗೆ ಸಮನ್ವಯದಿಂದ ಕಾರ್ಯ ನಿರ್ವಹಿಸುತ್ತಿದೆ ಎಂದು ಅರಣ್ಯ ಇಲಾಖೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕುಮಾರ್ ಪುಷ್ಕರ್ ಸುದ್ದಿಸಂಸ್ಥೆ ಪಿಟಿಐಗೆ ತಿಳಿಸಿದ್ದಾರೆ. 

ಸೋಂಕು ಹರಡುವುದನ್ನು ತಪ್ಪಿಸಲು ತುಮಕೂರು ಜಿಲ್ಲಾಡಳಿತವು 33 ಗ್ರಾಮಗಳಲ್ಲಿ ಅಲರ್ಟ್ ಸೂಚನೆ ನೀಡಿದೆ. ಸೋಂಕು ಪೀಡಿತ ಪ್ರದೇಶಗಳ 10 ಕಿಮೀ ವ್ಯಾಪ್ತಿಯಲ್ಲಿ ಕಂಟೋನ್ಮೆಂಟ್ ವಲಯವನ್ನು ಘೋಷಿಸಲಾಗಿದೆ. ವಲಯದೊಳಗಿನ ಎಲ್ಲಾ ಕೋಳಿ ಸಾಕಣೆ ಕೇಂದ್ರಗಳಿಗೆ ಪ್ರೋಟೋಕಾಲ್ ಪ್ರಕಾರ ಎಚ್ಚರಿಕೆ ನೀಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.