ಫಲಿತಾಂಶ ಬರುವ ಮೊದಲೇ ಸೋಲೊಪ್ಪಿಕೊಂಡ ಕಾಂಗ್ರೆಸ್; ದಾವಣಗೆರೆ ಬಿಸಿ ನೆಪದಲ್ಲಿ ಮುಸ್ಲಿಂ ನಾಯಕರ ಟಾರ್ಗೆಟ್, ನಜೀರ್ ಅಹ್ಮದ್ – ಜಮೀರ್ ರಹಸ್ಯ ಭೇಟಿ, ಕವಲುದಾರಿಯಲ್ಲಿ ಅಲ್ಪಸಂಖ್ಯಾತ ನಾಯಕರು!

16-04-26 09:43 pm       HK News Staffer   ಕರ್ನಾಟಕ

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಇನ್ನೂ ಬಂದಿಲ್ಲ, ಆದರೆ ಅದರ ನೆಪದಲ್ಲಿ ಮುಸ್ಲಿಮ್ ನಾಯಕರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿರುವುದು ಪಕ್ಷದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್ ಜೊತೆಗಿದ್ದಾರೆಂಬ ಭಾವನೆಯಲ್ಲಿ ಪಕ್ಷಕ್ಕೆ ಸೋಲಾಗುವ ಮೊದಲೇ ಕ್ರಮಕ್ಕೆ ಮುಂದಾಗಿರುವುದು ರಾಜ್ಯ ಕಾಂಗ್ರೆಸಿನಲ್ಲಿ ನಾನಾ ರೀತಿಯ ಚರ್ಚೆಗೂ ಕಾರಣವಾಗಿದೆ. ಇದರ ನಡುವೆಯೇ ರಾಜ್ಯದ ವಸತಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಜಮೀರ್ ಅಹ್ಮದ್ ಖಾನ್, ನಜೀರ್ ಅಹ್ಮದ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಬೆಂಗಳೂರು, ಎಪ್ರಿಲ್ 16: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪ ಚುನಾವಣೆಯ ಫಲಿತಾಂಶ ಇನ್ನೂ ಬಂದಿಲ್ಲ, ಆದರೆ ಅದರ ನೆಪದಲ್ಲಿ ಮುಸ್ಲಿಮ್ ನಾಯಕರನ್ನು ಕಾಂಗ್ರೆಸ್ ಟಾರ್ಗೆಟ್ ಮಾಡಿರುವುದು ಪಕ್ಷದಲ್ಲಿ ಹೊಸ ವಿವಾದಕ್ಕೆ ಕಾರಣವಾಗಿದೆ. ಅಲ್ಪಸಂಖ್ಯಾತರು ಕಾಂಗ್ರೆಸ್ ಜೊತೆಗಿದ್ದಾರೆಂಬ ಭಾವನೆಯಲ್ಲಿ ಪಕ್ಷಕ್ಕೆ ಸೋಲಾಗುವ ಮೊದಲೇ ಕ್ರಮಕ್ಕೆ ಮುಂದಾಗಿರುವುದು ರಾಜ್ಯ ಕಾಂಗ್ರೆಸಿನಲ್ಲಿ ನಾನಾ ರೀತಿಯ ಚರ್ಚೆಗೂ ಕಾರಣವಾಗಿದೆ. ಇದರ ನಡುವೆಯೇ ರಾಜ್ಯದ ವಸತಿ ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಜಮೀರ್ ಅಹ್ಮದ್ ಖಾನ್, ನಜೀರ್ ಅಹ್ಮದ್ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.

ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ನಜೀರ್ ಅಹ್ಮದ್ ಅವರನ್ನು ತೆಗೆದು ಹಾಕಲಾಗಿದೆ ಎಂಬ ಮಾತುಗಳಿದ್ದರೂ, ಜಮೀರ್‌ ಮಾತ್ರ ಪಕ್ಷದ ನಾಯಕರಿಗೆ ಸೊಪ್ಪು ಹಾಕದೆ ನೇರವಾಗಿ ನಜೀರ್ ಮನೆಗೆ ತೆರಳಿ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಿದ್ದಾರೆ. ಹೀಗಾಗಿ ಹೈಕಮಾಂಡ್‌ ನಿಲುವಿಗೆ ವಿರುದ್ಧವಾಗಿ ನಜೀರ್‌ ಅವರ ಮನೆಗೆ ಜಮೀರ್‌ ಭೇಟಿ ನೀಡಿದ್ದಾರೆ ಎಂಬ ವ್ಯಾಖ್ಯಾನಗಳನ್ನೂ ಹರಿಯಬಿಡಲಾಗಿದೆ. ಬುಧವಾರ ಬೆಳಗ್ಗೆ ನಜೀರ್‌ ಅವರ ಜಯಮಹಲ್‌ ಹತ್ತಿರ ಇರುವ ಸರ್ಕಾರಿ ನಿವಾಸಕ್ಕೆ ಜಮೀರ್‌ ಭೇಟಿ ನೀಡಿ, ರಹಸ್ಯ ಮಾತುಕತೆ ನಡೆಸಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ಷಡ್ಯಂತ್ರಗಳ ಬಗ್ಗೆ ದೆಹಲಿಗೆ ಹೋಗಿ ಹೈಕಮಾಂಡ್‌ ಗಮನಕ್ಕೆ ತರುವಂತೆ ಜಮೀರ್‌ ಸಲಹೆ ಮಾಡಿದ್ದಾರೆ ಎನ್ನಲಾಗಿದೆ. 

ಇದೇ ಜೂನ್‌ ವೇಳೆಗೆ ನಜೀರ್‌ ಅಹಮದ್‌ ಅವರ ವಿಧಾನ ಪರಿಷತ್‌ ಸದಸ್ಯತ್ವ ಮುಕ್ತಾಯವಾಗಲಿದೆ. ಎರಡೂವರೆ ತಿಂಗಳು ಅವಧಿ ಇರುವುದರಿಂದ ಮತ್ತೊಂದು ಅವಧಿಗೆ ಪರಿಷತ್‌ ಸದಸ್ಯರಾಗಲು ನಜೀರ್‌ ಪ್ರಯತ್ನಿಸಿದ್ದರು. ಆದರೆ ದಾವಣಗೆರೆ ಉಪ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದಾರೆಂದು ಅವರನ್ನು ಟಾರ್ಗೆಟ್ ಮಾಡಿರುವುದು ಕಾಂಗ್ರೆಸಿನಲ್ಲಿ ನಜೀರ್ ರಾಜಕೀಯ ಭವಿಷ್ಯವನ್ನೇ ಮಂಕುಗೊಳಿಸಿದೆ. ಸಿಎಂ ಸಿದ್ದರಾಮಯ್ಯ ಆಪ್ತನಾಗಿದ್ದರೂ, ಪಕ್ಷದ ನಾಯಕರು ದಿಢೀರ್ ಹೊರಕ್ಕೆ ತಳ್ಳಿರುವುದು ರಾಜಕೀಯವಾಗಿ ಅವರಿಗೆ ತೀವ್ರ ಹಿನ್ನಡೆಯಾಗಿದೆ.

ಕರ್ನಾಟಕದ ಮಟ್ಟಿಗೆ ಕಾಂಗ್ರೆಸ್ ಬಿಟ್ಟರೆ ಅಲ್ಪಸಂಖ್ಯಾತರಿಗೆ ಅವಕಾಶ ಕಲ್ಪಿಸಬಲ್ಲ ಬೇರೆ ಪಕ್ಷಗಳಿಲ್ಲ ಎಂಬ ಚಿಂತೆ ಮುಸ್ಲಿಮ್ ನಾಯಕರಲ್ಲಿದೆ. ಉಪ ಚುನಾವಣೆಯಲ್ಲಿ ಕೇವಲ ಟಿಕೆಟ್ ಕೇಳಿದ್ದಕ್ಕೆ ಕಾಂಗ್ರೆಸ್ ನಾಯಕರು ಟಾರ್ಗೆಟ್ ಮಾಡಿರುವುದು ಸಮುದಾಯದ ನಾಯಕರನ್ನು ಕೆರಳಿಸಿದೆ. ಉಪ ಚುನಾವಣೆ ಕಾರಣಕ್ಕೆ ದಿಢೀರ್ ಆಗಿ ಹೊರಕ್ಕೆ ದಬ್ಬಿರುವುದು ಸರಿಯಲ್ಲ ಎಂಬ ಮಾತನ್ನು ಹಿರಿಯ ಶಾಸಕ ತನ್ವೀರ್ ಸೇಠ್ ಹೇಳಿದ್ದಾರೆ. ಕರೆದು ಮಾತನಾಡಬಹುದಿತ್ತು, ಹಾಗಂತ ಪಕ್ಷ ವಿರೋಧಿಯೆಂದು ತೆಗೆದುಹಾಕುವುದು ಸಮುದಾಯಕ್ಕೆ ಯಾವ ಸಂದೇಶ ನೀಡುತ್ತದೆ. ಇದನ್ನು ನಾನು ಒಪ್ಪಲ್ಲ ಎಂದು ಡಿಕೆಶಿ ಪರವಾಗಿರುವ ತನ್ವೀರ್ ಸೇಠ್ ಹೇಳಿದ್ದಾರೆ.

ಕ್ಯಾಬಿನೆಟ್‌ ದರ್ಜೆಯ ಸ್ಥಾನಮಾನ ಹೊಂದಿದ್ದ ನಜೀರ್ ಅಹ್ಮದ್, ಏಕಾಏಕಿ ರಾಜಕೀಯದಲ್ಲಿ ಅಪ್ರಸ್ತುತ ಎನ್ನುವಂತಾಗಿದ್ದು ಇದರಿಂದ ತೀವ್ರ ಇಕ್ಕಟ್ಟಿನ ಸ್ಥಿತಿಗೆ ಒಳಗಾಗಿದ್ದಾರೆ. ಕೋಲಾರ ಭಾಗದಲ್ಲಿ ಪ್ರಭಾವಿಯಾಗಿರುವ ನಜೀರ್, ಜಮೀರ್ ಮತ್ತು ಸಿದ್ದರಾಮಯ್ಯ ಪಾಲಿಗೆ ಆಪ್ತರು. ಆದರೆ ಡಿಕೆಶಿ ಬಣ ದಾವಣಗೆರೆ ಚುನಾವಣೆ ನೆಪದಲ್ಲಿ ಸಿದ್ದರಾಮಯ್ಯ ಬಣದ ಶಾಸಕರನ್ನೇ ಟಾರ್ಗೆಟ್ ಮಾಡಿ ಹೈಕಮಾಂಡಿಗೆ ದೂರಿತ್ತಿರುವುದು, ಆಮೂಲಕ ಶಿಸ್ತು ಕ್ರಮ ಜರುಗಿಸಲು ಯಶಸ್ವಿಯಾಗಿದೆ. ವಿಶೇಷ ಅಂದ್ರೆ, ಚುನಾವಣೆ ಫಲಿತಾಂಶ ಬರುವ ಮೊದಲೇ ಉಚ್ಛಾಟನೆಯ ಶಿಕ್ಷೆ ವಿಧಿಸಿರುವುದು ಪಕ್ಷದ ನಾಯಕರ ಒಳಗಡೆ ಚರ್ಚೆಗೂ ಕಾರಣವಾಗಿದೆ. ಹೀಗಾಗಿ ಕಾಂಗ್ರೆಸಿನಿಂದ ಮುನಿಸಿಕೊಂಡ ಅಲ್ಪಸಂಖ್ಯಾತ ನಾಯಕರು ಕವಲುದಾರಿಯಲ್ಲಿದ್ದಾರೆ ಎನ್ನುವ ಸಂದೇಶ ಬಂದಿದ್ದು, ಪಕ್ಷ ಬಿಟ್ಟು ಜೆಡಿಎಸ್ ಅಥವಾ ಬೇರೆ ಪಕ್ಷದತ್ತ ಮುಖ ಮಾಡುವತ್ತ ಚಿಂತನೆ ನಡೆಸಿದ್ದಾರೆ ಎನ್ನುವ ಮಾತು ಕೇಳಿಬಂದಿದೆ. ಮೂಲಗಳ ಪ್ರಕಾರ ಜಮೀರ್‌ ಅವರು ತಮ್ಮ ರಹಸ್ಯ ಮಾತುಕತೆಯಲ್ಲಿ ನಜೀರ್‌ ಅಹಮದ್‌ ಅವರನ್ನು ಜೆಡಿಎಸ್‌‍ ಸೇರುವಂತೆ ಸಲಹೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.