ದಟ್ಟ ಕಾಡಿನ ಮಧ್ಯೆ ದಾರಿ ತಪ್ಪಿದ್ದ ಶರಣ್ಯ ಕಡೆಗೂ ಪತ್ತೆ ; ಮಲೆಕುಡಿಯ ಜನರ ಶೋಧಕ್ಕೆ ಪ್ರತ್ಯಕ್ಷ ! ನಾಲ್ಕು ದಿನ ರಾತ್ರಿ- ಹಗಲು ಒಬ್ಬಂಟಿ ಕಳೆದ ಗಟ್ಟಿಗಿತ್ತಿ

05-04-26 10:45 pm       HK News Staffer   ಕರ್ನಾಟಕ

ಮಡಿಕೇರಿ ಬಳಿಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಹೋಗಿ ಕಾಡಿನಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಟೆಕ್ಕಿ ಶರಣ್ಯ ಕೊನೆಗೂ ಪತ್ತೆಯಾಗಿದ್ದಾರೆ. ಸ್ಥಳೀಯ ಮಲೆಕುಡಿಯ ಸಮುದಾಯದ ಜನರ ಶೋಧ ಕಾರ್ಯ ಸಂದರ್ಭ ಕಾಡಿನ ಮಧ್ಯೆ ದಾರಿ ತಪ್ಪಿದ್ದ ಮಹಿಳೆಯನ್ನು ಪತ್ತೆ ಮಾಡಲಾಗಿದೆ.

ಕೊಡಗು, ಎಪ್ರಿಲ್ 5: ಮಡಿಕೇರಿ ಬಳಿಯ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ಹೋಗಿ ಕಾಡಿನಲ್ಲಿ ನಾಪತ್ತೆಯಾಗಿದ್ದ ಕೇರಳ ಮೂಲದ ಟೆಕ್ಕಿ ಶರಣ್ಯ ಕೊನೆಗೂ ಪತ್ತೆಯಾಗಿದ್ದಾರೆ. ಸ್ಥಳೀಯ ಮಲೆಕುಡಿಯ ಸಮುದಾಯದ ಜನರ ಶೋಧ ಕಾರ್ಯ ಸಂದರ್ಭ ಕಾಡಿನ ಮಧ್ಯೆ ದಾರಿ ತಪ್ಪಿದ್ದ ಮಹಿಳೆಯನ್ನು ಪತ್ತೆ ಮಾಡಲಾಗಿದೆ. 

ಎಪ್ರಿಲ್ 2ರಂದು ಬೆಳಗ್ಗೆ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣ ತೆರಳಿದ್ದ ಶರಣ್ಯ ಕಾಡಿನಿಂದ ಹಿಂತಿರುಗುವಾಗ ನಾಪತ್ತೆಯಾಗಿದ್ದಳು. 36 ವರ್ಷದ ಶರಣ್ಯ ಒಬ್ಬಂಟಿಯಾಗೇ ನಾಲ್ಕು ದಿನಗಳಿಂದ ಕಾಡಿನಲ್ಲಿ ಸಿಕ್ಕಿಬಿದ್ದಿದ್ದ  ಕಾರಣ ಆತಂಕ ವ್ಯಕ್ತವಾಗಿತ್ತು. ತಡಿಯಂಡಮೋಳ್ ಕರ್ನಾಟಕದ ಪಶ್ಚಿಮ ಘಟ್ಟದ ಸಾಲಿನ ಅತಿ ಎತ್ತರದ ಬೆಟ್ಟವಾಗಿದ್ದು ಪ್ರವಾಸಿಗರ ಆಕರ್ಷಕ ತಾಣವಾಗಿದೆ. 

ಮಹಿಳೆ ನಾಪತ್ತೆ ಹಿನ್ನೆಲೆಯಲ್ಲಿ ಅರಣ್ಯ, ಪೊಲೀಸ್ ಇಲಾಖೆ ಮತ್ತು ಗ್ರಾಮಸ್ಥರು ಹಾಗೂ ನಕ್ಸಲ್ ನಿಗ್ರಹ ಪಡೆಯಿಂದ ನಿರಂತರ ಶೋಧ ನಡೆಸಲಾಗಿತ್ತು. ಈ ನಡುವೆ, ಸಿಎಂ ಸಿದ್ದರಾಮಯ್ಯ ಎಲ್ಲ ಸಾಮರ್ಥ್ಯ ಬಳಸಿಕೊಂಡು ಶೋಧ ಕಾರ್ಯಾಚರಣೆಗೆ ಸೂಚಿಸಿದ್ದರು.‌ ಕೊನೆಗೂ ನಾಲ್ಕು ದಿನಗಳ ಸತತ ಹುಡುಕಾಟದ ಬಳಿಕ ಭಾನುವಾರ ಸಂಜೆ ಸ್ಥಳೀಯ ಮಲೆಕುಡಿಯ ಜನಾಂಗದ ಸದಸ್ಯರಿಗೆ ಶರಣ್ಯ ಪತ್ತೆಯಾಗಿದ್ದಾಳೆ. ಇಲ್ಲಿನ ಅರಣ್ಯ ಪ್ರದೇಶದಲ್ಲಿ ಕಾಡಾನೆಗಳ ಸಂಚಾರ ಇರುವುದರಿಂದ ಮಹಿಳೆ ಕಾಡಾನೆ ದಾಳಿಗೆ ತುತ್ತಾಗಿದ್ದಾರೆಯೇ ಎಂಬ ಆತಂಕ ವ್ಯಕ್ತವಾಗಿತ್ತು. ರಾತ್ರಿ ಹಗಲು ಅನ್ನ ನೀರು ಇಲ್ಲದೆ ಬದುಕಿ ಉಳಿದಿರಬಹುದೇ ಎಂಬ ಆತಂಕವೂ ಕೇಳಿಬಂದಿತ್ತು. 

ಪೊಲೀಸರು, ಅರಣ್ಯ ಸಿಬಂದಿ, ಡ್ರೋಣ್ ಶೋಧ, ನಕ್ಸಲ್ ನಿಗ್ರಹ ಪಡೆಗೂ ನಾಲ್ಕು ದಿನಗಳಿಂದ ಶರಣ್ಯ ಕಾಣಸಿಕ್ಕಿರಲಿಲ್ಲ. ಇದೀಗ ದಿಢೀರ್ ಎನ್ನುವಂತೆ ಕಾಡಿನ ಮಧ್ಯದಿಂದ ಮಲೆಕುಡಿಯ ಜನರು ಪತ್ತೆ ಮಾಡಿ ಸುರಕ್ಷಿತವಾಗಿ ಕರೆತಂದಿದ್ದಾರೆ.