ಬಿಜೆಪಿ ಜೊತೆಗಿನ ಮೈತ್ರಿ ತಳ್ಳಿಹಾಕಿದ ನಟ ವಿಜಯ್ ; ಜಾತ್ಯತೀತ ಸಿದ್ಧಾಂತ ಒಪ್ಪುವವರೊಂದಿಗೆ ಮಾತ್ರ ಮೈತ್ರಿ, ಸಿದ್ಧಾಂತದಲ್ಲಿ ರಾಜಿಯಿಲ್ಲ ಎಂದು ಸ್ಪಷ್ಟನೆ

23-03-26 12:48 pm       HK News Staffer   ಕರ್ನಾಟಕ

ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿಕೂಟದ ಜೊತೆಗೆ ಸೇರುವ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖಸ್ಥ ಹಾಗೂ ನಟ ವಿಜಯ್‌ ತೆರೆ ಎಳೆದಿದ್ದಾರೆ. ತಾವೆಂದೂ ಜಾತ್ಯತೀತ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.

ಚೆನ್ನೈ, ಮಾರ್ಚ್ 23: ಎಐಎಡಿಎಂಕೆ ಹಾಗೂ ಬಿಜೆಪಿ ಮೈತ್ರಿಕೂಟದ ಜೊತೆಗೆ ಸೇರುವ ಬಗ್ಗೆ ಹರಿದಾಡುತ್ತಿರುವ ಊಹಾಪೋಹಗಳಿಗೆ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಮುಖಸ್ಥ ಹಾಗೂ ನಟ ವಿಜಯ್‌ ತೆರೆ ಎಳೆದಿದ್ದಾರೆ. ತಾವೆಂದೂ ಜಾತ್ಯತೀತ ಸಿದ್ಧಾಂತದೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ. 

ಡಿಎಂಕೆಯನ್ನು ಅಧಿಕಾರದಿಂದ ಇಳಿಸಲು ಬಿಜೆಪಿ ವಿಜಯ್ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನ ನಡೆಸುತ್ತಿದೆ ಎಂಬ ವದಂತಿಗಳಿದ್ದವು. ಆದರೆ, ಟಿವಿಕೆ ಪಕ್ಷದ ಮುಖ್ಯಸ್ಥ, ನಟ ವಿಜಯ್ ಇದನ್ನು ಅಲ್ಲಗಳೆದಿದ್ದಾರೆ. ಪಕ್ಷದ ವತಿಯಿಂದ ಮಾಮಲ್ಲಪುರಂನ ಪಂಚತಾರಾ ಹೋಟೆಲ್‌ನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ವಿಜಯ್ ಮಾತನಾಡಿ, ತಮ್ಮ ಜಾತ್ಯತೀತ ಅಸ್ಮಿತೆಯೊಂದಿಗೆ ಎಂದಿಗೂ ರಾಜೀ ಮಾಡಿಕೊಳ್ಳುವುದಿಲ್ಲ. ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಕಣಕ್ಕಿಳಿಯುತ್ತೇವೆ. ನಮ್ಮ ರಾಜಕೀಯ ಸಿದ್ಧಾಂತವನ್ನ ಒಪ್ಪಿಕೊಳ್ಳುವವರೊಂದಿಗೆ ಮಾತ್ರವೇ ಹೊಂದಾಣಿಕೆ ಇರಲಿದೆ ಅಂದಿದ್ದಾರೆ. 

ರಾಜಕೀಯ ಸಿದ್ಧಾಂತವನ್ನ ಒಪ್ಪಿಕೊಳ್ಳುವವರೊಂದಿಗೆ ಮಾತ್ರವೇ ಹೊಂದಾಣಿಕೆ ಎಂಬುದನ್ನ ಪುನರುಚ್ಚರಿಸಿರುವ ಅವರು, ನಾವು ಪಕ್ಷವನ್ನು ಆರಂಭಿಸಿದ ಹೊಸತರಲ್ಲಿ ನಮ್ಮ ಎದುರಾಳಿಗಳು ನಮ್ಮನ್ನ ಆ ತಂಡದ ಭಾಗವಾಗಿದ್ದೀವಿ. ಈ ತಂಡದ ಭಾಗವಾಗಿದ್ದೀವಿ ಎಂದು ಬ್ರ್ಯಾಂಡ್‌ ಮಾಡಲು ಪ್ರಯತ್ನಿಸಿದ್ದರು. ಯಾವಾಗ ವಿಜಯ್ ಜೊತೆಗಿರುವ ಜನರ ಬಳಗವನ್ನ ನೋಡಿದರೋ, ಆಗ ಅವರೊಂದಿಗೆ ಮೈತ್ರಿ ಮಾಡಿಕೊಳ್ಳಬಹುದು. ಇವರೊಂದಿಗೆ ಕೈಜೋಡಿಸಬಹುದು ಎಂಬಂತಹ ಸುದ್ದಿಗಳನ್ನು ಹರಡಲಾರಂಭಿಸಿದರು ಎಂದು ವ್ಯಂಗ್ಯವಾಡಿದ್ದಾರೆ.