ದಾವಣಗೆರೆಯಲ್ಲಿ ರಂಜಾನ್ ಪ್ರಾರ್ಥನೆ ವೇಳೆ ಹೆಜ್ಜೇನು ದಾಳಿ ; 25 ಮಂದಿಗೆ ಗಾಯ, ಐವರ ಸ್ಥಿತಿ ಗಂಭೀರ

21-03-26 08:29 pm       HK News Staffer   ಕರ್ನಾಟಕ

ರಂಜಾನ್ ಹಬ್ಬದ ಪ್ರಯುಕ್ತ ಪ್ರಾರ್ಥನೆ ಸಲ್ಲಿಸುವ ವೇಳೆ ಜನರ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ತಾಲೂಕಿನ ಆನಗೋಡು ಗ್ರಾಮದಲ್ಲಿ ನಡೆದಿದೆ.‌

ದಾವಣಗೆರೆ, ಮಾ 21: ರಂಜಾನ್ ಹಬ್ಬದ ಪ್ರಯುಕ್ತ ಪ್ರಾರ್ಥನೆ ಸಲ್ಲಿಸುವ ವೇಳೆ ಜನರ ಮೇಲೆ ಹೆಜ್ಜೇನು ದಾಳಿ ಮಾಡಿರುವ ಘಟನೆ ತಾಲೂಕಿನ ಆನಗೋಡು ಗ್ರಾಮದಲ್ಲಿ ನಡೆದಿದೆ.‌

ನಮಾಜ್ ಮಾಡುವ ವೇಳೆ ಹೆಜ್ಜೇನು ಗೂಡಿಗೆ ಯಾರೋ ಕಲ್ಲಿನಿಂದ ಹೊಡೆದ ಪರಿಣಾಮ ಅವಾಂತರ ಸೃಷ್ಟಿಯಾಗಿದೆ. ಈ ವೇಳೆ ನಮಾಜ್ ಮಾಡ್ತಿದ್ದ ಮುಸ್ಲಿಂ ಬಾಂಧವರ ಮೇಲೆ ಹೆಜ್ಜೇನು ಏಕಾಏಕಿ ದಾಳಿ ಮಾಡಿದ್ದು, ಜನ ಧಿಕ್ಕಾಪಾಲಾಗಿ ಓಡಿರುವ ಘಟನೆ ನಡೆದಿದೆ.

ಸುಮಾರು 25 ಜನರ ಮೇಲೆ ಹೆಜ್ಜೇನು ದಾಳಿ ಮಾಡಿದ್ದು, ಗಾಯಗೊಂಡವರನ್ನು ಚಿಗಟೇರಿ ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಐವರು ಎನ್ಐಸಿಯುನಲ್ಲಿದ್ದು, ಪರಿಸ್ಥಿತಿ ಗಂಭೀರವಾಗಿದೆ. ಹೆಚ್ಚಾಗಿ ಯುವಕರು, ಮಕ್ಕಳು, ಹೆಣ್ಣುಮಕ್ಕಳ ಮೇಲೆ ಜೇನುನೊಣಗಳು ದಾಳಿ ನಡೆಸಿವೆ ಎಂದು ಗ್ರಾಮ ಪಂಚಾಯತ್ ಸದಸ್ಯರು ಮಾಹಿತಿ ನೀಡಿದ್ದಾರೆ.

ವಿಷಯ ತಿಳಿದು ಮಾಯಕೊಂಡ ಶಾಸಕ ಬಸವಂತಪ್ಪ ಅವರು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಯೋಗಕ್ಷೇಮ ವಿಚಾರಿಸಿದರು. ಬಳಿಕ ಈ ಕುರಿತು ಮಾತನಾಡಿದ ಅವರು, 'ವೃದ್ಧರು, ಮಕ್ಕಳು, ಯುವಕರ ಮೇಲೆ ಜೇನು ದಾಳಿ ಮಾಡಿದ್ದು, ಅವರೀಗ ತೊಂದರೆಯಲ್ಲಿದ್ದಾರೆ. ಈಗಾಗಲೇ ಚಿಕಿತ್ಸೆ ಕೊಡಿಸಿ ಅವರನ್ನು ವಾರ್ಡ್​ಗೆ ಶಿಫ್ಟ್ ಮಾಡಲಾಗಿದೆ. ಕೆಲ ಗಾಯಾಳುಗಳನ್ನು ಕರೆತರಲಾಗುತ್ತಿದೆ. ಮತ್ತಷ್ಟು ಜನರಿಗೆ ಆನಗೋಡು ಆಸ್ಪತ್ರೆಯಲ್ಲಿ‌ ಚಿಕಿತ್ಸೆ ಕೊಡಿಸಲು ಹೇಳಿದ್ದೇನೆ. ಹೆಜ್ಜೇನು ದಾಳಿ ಮಾಡಿದ್ದರಿಂದ ವೃದ್ಧರ ಪರಿಸ್ಥಿತಿ ಚಿಂತಾಜನಕವಾಗಿದೆ. ಈದ್​ ನ ನಮಾಜ್ ಮಾಡುವ ವೇಳೆ ಮಕ್ಕಳು ಹೆಜ್ಜೇನನ್ನು ಏಳಿಸಿ ಬಿಟ್ಟಿದ್ದಾರೆ. ಹೀಗಾಗಿ, ಅಲ್ಲಿದ್ದ ಜನರ ಮೇಲೆ ಹೆಜ್ಜೇನು ದಾಳಿ ಮಾಡಿವೆ. ಐದಾರು ಜನರು ಹೆಚ್ಚು ಸೀರಿಯಸ್ ಇದ್ದಾರೆ. ವೃದ್ಧರು ತಡೆದುಕೊಳ್ಳುತ್ತಿಲ್ಲ' ಎಂದು ತಿಳಿಸಿದರು.

ಗ್ರಾ. ಪಂ. ಸದಸ್ಯ ನಸ್ರುಲ್ಲಾ ಅವರು ಮಾತನಾಡಿ, 'ಹೆಜ್ಜೇನಿಗೆ ಯಾರೋ ಹುಡುಗರು ಕಲ್ಲು ಹೊಡೆದಿದ್ದಾರೆ. ಏನ್ ಆಗಿದೆ ಗೊತ್ತಿಲ್ಲ. ಅಚಾನಕ್ ಆಗಿದೆ, ನಮಗೆ ಗೊತ್ತಿದ್ದರೆ ಏನಾದರೂ ಮಾಡ್ತಿದ್ದೆವು. ಈಗಾಗಲೇ ಆನಗೋಡು ಆಸ್ಪತ್ರೆಯಲ್ಲಿ ತೋರಿಸಿದ್ದೇವೆ. ಒಬ್ಬೊಬ್ಬರೆ ಆಸ್ಪತ್ರೆಗೆ ಬರುತ್ತಿದ್ದಾರೆ. ಕೆಲವರ ಸ್ಥಿತಿ ಗಂಭೀರವಾಗಿದೆ. ಪೊಲೀಸರಿಗೂ ಕಚ್ಚಿದ್ದರಿಂದಾಗಿ ಅವರು ಓಡಿಹೋಗಿದ್ದಾರೆ' ಎಂದು ತಿಳಿಸಿದರು.