ಹುಬ್ಬಳ್ಳಿ ; ರೀಲ್ಸ್ ಹುಚ್ಚಾಟಕ್ಕೆ 15 ವರ್ಷದ ಬಿಜೆಪಿ ಮುಖಂಡನ ಪುತ್ರ ಬಲಿ, ಯುಗಾದಿ ಸಂಭ್ರಮದಲ್ಲಿದ್ದ ಮನೆಗೆ ದುಃಖದ ನೆರಳು !

20-03-26 12:00 pm       HK News Staffer   ಕರ್ನಾಟಕ

ಸೋಶಿಯಲ್ ಮೀಡಿಯಾ ರೀಲ್ಸ್ ಹುಚ್ಚಾಟ ಮತ್ತೊಂದು ಅಮಾಯಕ ಜೀವ ಬಲಿ ಪಡೆದಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸ್ಟಂಟ್ ಹಾಗೂ ಕ್ರ್ಯಾಶ್ ರೀಲ್ಸ್ ಚಿತ್ರೀಕರಣದ ವೇಳೆ ಸಂಭವಿಸಿದ ಅಪಘಾತದಲ್ಲಿ ಬಿಜೆಪಿ ಮುಖಂಡನ ಪುತ್ರ ನಮೀಷ ಸಂಗಳದ (15) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಹುಬ್ಬಳ್ಳಿ, ಮಾರ್ಚ್ 20: ಸೋಶಿಯಲ್ ಮೀಡಿಯಾ ರೀಲ್ಸ್ ಹುಚ್ಚಾಟ ಮತ್ತೊಂದು ಅಮಾಯಕ ಜೀವ ಬಲಿ ಪಡೆದಿರುವ ದಾರುಣ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ. ಸ್ಟಂಟ್ ಹಾಗೂ ಕ್ರ್ಯಾಶ್ ರೀಲ್ಸ್ ಚಿತ್ರೀಕರಣದ ವೇಳೆ ಸಂಭವಿಸಿದ ಅಪಘಾತದಲ್ಲಿ ಬಿಜೆಪಿ ಮುಖಂಡನ ಪುತ್ರ ನಮೀಷ ಸಂಗಳದ (15) ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಲಕ್ಷ್ಮಿ ನಗರ ನಿವಾಸಿಯಾದ ನಮೀಷ, ಮೈಸೂರಿನಲ್ಲಿ 9ನೇ ತರಗತಿ ಓದುತ್ತಿದ್ದನು. ಯುಗಾದಿ ಹಬ್ಬದ ನಿಮಿತ್ತ ಊರಿಗೆ ಬಂದಿದ್ದ ಆತ, ಗೆಳೆಯರೊಂದಿಗೆ ರೀಲ್ಸ್ ಮಾಡಲು ಸೇಜವಾಡಕ್ಕರ್ ಪ್ಲಾಟ್‌ಗೆ ತೆರಳಿದ್ದನು. ವೇಗವಾಗಿ ವಾಹನ ಚಲಾಯಿಸುವ ರೀಲ್ಸ್ ಮಾಡಲು ಪ್ಲ್ಯಾನ್ ಮಾಡಿದ್ದರು. ಅದರಂತೆ ಓರ್ವ ಅಪ್ರಾಪ್ತ ಬಾಲಕ ಆಡಿ ಕಾರು ಓಡಿಸುತ್ತಿದ್ದರೆ, ಇನ್ನೊಂದೆಡೆ ಮೃತ ನಮೀಷ ಸಂಗಳದ ಬೈಕ್ ನಲ್ಲಿದ್ದು, ಸ್ಟಂಟ್ ಮತ್ತು ಕ್ರ್ಯಾಶ್ ರೀಲ್ಸ್ ಮಾಡುತ್ತಿದ್ದಾಗ ಕಾರು ವೇಗವಾಗಿ ಬಂದು ನಿಯಂತ್ರಣ ತಪ್ಪಿ ನಮೀಷ ಸಂಗಳದ ಇದ್ದ ಬೈಕ್ಗೆ ಗುದ್ದಿದೆ. ಪರಿಣಾಮ ನಮೀಷ್‌ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.

ಘಟನೆ ತಿಳಿಯುತ್ತಿದ್ದಂತೆಯೇ ವಿದ್ಯಾನಗರ ಪೊಲೀಸ್ ಠಾಣೆ ಪೊಲೀಸರು ಹಾಗೂ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಕರಣ ದಾಖಲಿಸಿಕೊಂಡಿದ್ದು, ಕಾರು ಚಲಾಯಿಸಿದ್ದ ಅಪ್ರಾಪ್ತನನ್ನು ವಿಚಾರಣೆಗೊಳಪಡಿಸಲಾಗಿದೆ. ಯುಗಾದಿ ಸಂಭ್ರಮದಲ್ಲಿದ್ದ ಮನೆಗೆ ದುಃಖದ ನೆರಳು ಆವರಿಸಿದ್ದು, ಮಗನ ಅಕಾಲಿಕ ಮರಣದಿಂದ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.